ಕರಾವಳಿಯಲ್ಲಿ ಮುಂದಿನ ಮೂರು ದಿನ ಭಾರೀ ಮಳೆ
ಮಂಗಳೂರು, ಜುಲೈ 10: ಕರಾವಳಿಯಲ್ಲಿ ಕಳೆದ 1 ತಿಂಗಳಿಂದ ದುರ್ಬಲವಾಗಿದ್ದ ಮುಂಗಾರು ನಿನ್ನೆ ಸಂಜೆಯಿಂದ ಚುರುಕುಗೊಂಡಿದೆ. ಸಂಜೆಯಿಂದ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕರಾವಳಿಯ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ನಾನಾ ಕಡೆಗಳಲ್ಲಿ ನಿನ್ನೆ ಸಂಜೆಯಿಂದ ಉತ್ತಮ ಮಳೆಯಾಗುತ್ತಿದೆ.
ಕರಾವಳಿಯಲ್ಲಿ ಇಂದು ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು, ಆಗಾಗ್ಗೆ ಗಾಳಿ ಮಳೆ ಸುರಿಯುತ್ತಿದೆ. ಉಡುಪಿ ಜಿಲ್ಲೆಯ ಮಣಿಪಾಲ, ಸಿದ್ದಾಪುರ, ಹೆಬ್ರಿ, ಕೊಲ್ಲೂರು, ಕೋಟೇಶ್ವರ, ಕೋಟ, ಉಪ್ಪುಂದ, ಮರವಂತೆ, ಬ್ರಹ್ಮಾವರ ಮತ್ತಿತರ ಕಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಉಪ್ಪಿನಂಗಡಿ, ಮಾಣಿ, ನೇರಳಕಟ್ಟೆ, ಸುರತ್ಕಲ್, ಉಳ್ಳಾಲ, ಮುಡಿಪು, ತೆಕ್ಕಟ್ಟೆ, ಕಾಪು, ಮೂಲ್ಕಿ, ಪುಂಜಾಲಕಟ್ಟೆ, ಕಿನ್ನಿಗೋಳಿ, ವೇಣೂರು, ನಾರಾವಿ, ಕಟಪಾಡಿ, ಶಿರ್ವ, ತೆಕ್ಕಟ್ಟೆ, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯ, ಕಡಬ, ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳದಲ್ಲಿ ನಿನ್ನೆಯಿಂದ ಉತ್ತಮ ಮಳೆಯಾಗುತ್ತಿದೆ.
ಮುಂಬೈನಲ್ಲಿ 3 ಗಂಟೆ ಅವಧಿಯಲ್ಲಿ 108.2 ಮಿಲಿ ಮೀಟರ್ ಮಳೆ
ಕರಾವಳಿ ಭಾಗದಲ್ಲಿ ಮುಂಗಾರು ಕ್ಷೀಣಿಸಿದ್ದ ಕಾರಣ ಪ್ರಸಕ್ತ ಸಾಲಿನಲ್ಲಿ ಶೇ. 27ರಷ್ಟು ಮಳೆ ಕೊರತೆ ಇದೆ. ಮುಂದಿನ ಮೂರು ದಿನಗಳ ಕಾಲ ಕರಾವಳಿಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ಒತ್ತಡ ಉಂಟಾದ ಪರಿಣಾಮ, ಕರಾವಳಿ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಮುದ್ರದಲ್ಲಿ ಭಾರೀ ಅಲೆಗಳು ಏಳುತ್ತಿರುವ ಹಿನ್ನೆಲೆಯಲ್ಲಿ ಬೀಚ್ಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ರವಾನಿಸಲಾಗಿದೆ.