ಸೀಟು ಹಂಚಿಕೆ ವಿಚಾರ:ಊಹಾಪೋಹಗಳಿಗೆ ಇತಿಶ್ರೀ ಹಾಕಬೇಕಿದೆ ಎಂದ ದೇವೇಗೌಡ
ಮಂಗಳೂರು, ಮಾರ್ಚ್ 03: ಕಾಂಗ್ರೆಸ್ ಹೈಕಮಾಂಡ್ ಬಂದು ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಬೇಕೆಂದು ತೀರ್ಮಾನ ಮಾಡಿದ್ದರಿಂದ 9 ತಿಂಗಳಿಂದ ಮೈತ್ರಿ ಸರಕಾರ ನಡೆದುಕೊಂಡು ಬರುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಹುದೆಂದು ಅಭಿಪ್ರಾಯವಿದೆ. ಆದರೆ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡಬಾರದೆಂದು ನಿರ್ಧಾರಕ್ಕೆ ಬಂದಿದ್ದೇನೆ ಎಂದರು.
ಊಹಾಪೋಹಗಳಿಗೆ ಇತಿಶ್ರೀ ಹಾಕಬೇಕಿದೆ. ಕಾಂಗ್ರೆಸ್ ನವರು ನಮಗೂ ಸೀಟ್ ನೀಡಬೇಕೆಂದು ಹೇಳಿದ್ರೂ, ಇಂತಿಷ್ಟು ಕೊಡಲೇಬೇಕೆನ್ನುವ ರಿಜಿಡ್ ರೀತಿಯಲ್ಲಿ ಹೇಳಿಲ್ಲ. ಸೌಹಾರ್ದತೆಗೆ ಆದ್ಯತೆ ಕೊಟ್ಟು ಸೀಟು ನೀಡಬೇಕೆನ್ನುವ ಬೇಡಿಕೆಯಿದೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ಬಿಜೆಪಿ ಹಿಂದೆ 17-18 ಸ್ಥಾನ ಪಡೆದುಕೊಂಡಿದ್ದು, ನಾವು ಒಗ್ಗಟ್ಟಾಗಿ ಕೆಲಸ ಮಾಡಿದರೆ ಅದನ್ನು ಕಡಿಮೆ ಮಾಡಬಹುದೆಂಬ ನಂಬಿಕೆಯಿದೆ. ಬೈ ಎಲೆಕ್ಷನ್ ನಲ್ಲಿ ಇದನ್ನು ಫಾಲೋ ಮಾಡಿದ್ದೇವೆ
ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅದೇ ರೀತಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. 2 ವಾರದಲ್ಲಿ ಸೀಟು ಅಂತಿಮ ಕೂಡ ನಿರ್ಣಯವಾಗುತ್ತದೆ ಎಂದರು.
ಮಂಡ್ಯದಿಂದ ಸುಮಲತಾ ಅಂಬರೀಷ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಯಿಸಿದ ದೇವೇಗೌಡರು, ಸೀಟ್ ಎಕ್ಸ್ಪೆಕ್ಟ್ ಮಾಡುವುದು ತಪ್ಪೇನಲ್ಲ. ಆಕಾಂಕ್ಷಿಗಳು ತುಂಬಾ ಜನರಿರುತ್ತಾರೆ. ಮಂಡ್ಯ, ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಗೆ ಆತಂಕವಿಲ್ಲ ಎಂದೆನಿಸುತ್ತದೆ. ವೀರಪ್ಪ ಮೊಯ್ಲಿ ಕೂಡ 10 ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಡಲು ಹೇಳಿದ್ದರು ಎಂದು ತಿಳಿಸಿದರು.












Click it and Unblock the Notifications