ಜಿಎಸ್ಟಿ ಭ್ರಮೆಯಲ್ಲಿ ತೇಲಿ ಬಿಡಲು ಹೂಡಿದ ತಂತ್ರ - ಯು.ಟಿ.ಖಾದರ್
ಮಂಗಳೂರು, ಜುಲೈ 2: "ಜಿಎಸ್ಟಿಯಿಂದ ಜನಸಾಮಾನ್ಯರಿಗೆ ಏನು ಲಾಭ ಎಂಬುದನ್ನು ಮೊದಲು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಬೇಕು. ಇದು ಜನರನ್ನು ಮೋಡಿಗೊಳಿಸಲು, ಭ್ರಮೆಯಲ್ಲಿ ತೇಲಿ ಬಿಡಲು ಹೂಡಿದ ತಂತ್ರ," ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಟೀಕಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಕೇಂದ್ರದಲ್ಲಿ ಯುಪಿಎ ಸರಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿತ್ತು. ಅಂತಹ ಯಾವುದೇ ಯೋಜನೆಯನ್ನು ಜಾರಿಗೊಳಿಸಲಾಗದ ಕೇಂದ್ರ ಸರಕಾರ ಜಿಎಸ್ಟಿ ಬಗ್ಗೆ ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆಯುವ ಆವಶ್ಯಕತೆಯಿರಲಿಲ್ಲ. ಇದು ಒನ್ ನೇಶನ್, ಒನ್ ಟ್ಯಾಕ್ಸ್ ಅಲ್ಲ ಕೇವಲ ಯೂನಿಫಾರ್ಮ್ ಟ್ಯಾಕ್ಸೇಶನ್ ಅಷ್ಟೆ ಮತ್ತು ಈ ಬಗ್ಗೆ ಕೇಂದ್ರ ಸರಕಾರ ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು," ಎಂದರು.

"ಕೇಂದ್ರದ ಎನ್ಡಿಎ ಸರಕಾರ ಜಾರಿಗೊಳಿಸಿರುವ ಜಿಎಸ್ಟಿ ಒಂದು ರಾಜಕೀಯ ಗಿಮಿಕ್. 2006ರಲ್ಲಿ ಕೇಂದ್ರದ ಯುಪಿಎ ಸರಕಾರ ಜಿಎಸ್ಟಿ ಜಾರಿಗೊಳಿಸಲು ಮುಂದಾದಾಗ ಇದೇ ಮೋದಿ ವಿರೋಧಿಸಿದ್ದರು. ಇದೀಗ ಮೋದಿ ಅದನ್ನು ಜಾರಿಗೊಳಿಸಿದ್ದಾರೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್ ಜಿಎಸ್ಟಿಗೆ ಬೆಂಬಲ ನೀಡಿದೆ. ಆದರೆ, ಅದನ್ನು ವೈಭವೀಕರಿಸುವ ಅಗತ್ಯವಿಲ್ಲ," ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಜಬ್ಬಾರ್ ಬೋಳಿಯಾರ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications