ಹಾವು ಕಡಿತಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭವಾಗಲಿದೆ ಚಿಕಿತ್ಸಾ ಕೇಂದ್ರ
ಮಂಗಳೂರು, ಫೆಬ್ರವರಿ 15; ನಾಗದೋಷಗಳ ಪರಿಹಾರಕ್ಕೆ ಹೆಸರುವಾಸಿ ಶ್ರೀ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಸುಬ್ರಹ್ಮಣ್ಯ. ಎಂತಹ ನಾಗದೋಷಗಳಿದ್ದರೂ ಕುಕ್ಕೆ ಸುಬ್ರಮಣ್ಯಕ್ಕೆ ಬಂದು ಹರಕೆ ಸೇವೆಗಳನ್ನು ಒಪ್ಪಿಸಿದರೆ ನಾಗದೋಷಗಳೆಲ್ಲಾ ಬಗೆಹರಿಯುತ್ತದೆ ಅನ್ನೋದು ಕೋಟ್ಯಾಂತರ ಭಕ್ತರ ನಂಬಿಕೆಯಾಗಿದೆ.
ನಾಗದೋಷಗಳ ಜೊತೆಗೆ ಇನ್ನು ಮುಂದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಾವು ಕಡಿತಕ್ಕೂ ಆಯುರ್ವೇದ ಚಿಕಿತ್ಸೆ ಲಭ್ಯವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ನೂರು ಕೋಟಿ ರೂಪಾಯಿಯ ಯೋಜನೆಯನ್ನು ತಯಾರು ಮಾಡಿದ್ದು, ಹಾವು ಕಡಿತಕ್ಕೆ ಒಳಗಾದವರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ತೆರೆಯಲು ಸರ್ಕಾರ ಮುಂದಾಗಿದೆ.
ರಾಜ್ಯದ ಶ್ರೀಮಂತ ದೇಗಲುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗಾಗಲೇ ಮುಜರಾಯಿ ಇಲಾಖೆಯಿಂದ 300 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಿದ್ದು,ಕ್ಷೇತ್ರದ ಇಂಜಾಡಿ ಎಂಬ ಪ್ರದೇಶದಲ್ಲಿ ಸುಮಾರು 50 ಎಕರೆ ಜಾಗದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಸರ ಸ್ನೇಹಿ ಕುಟೀರವನ್ನು ಸ್ಥಾಪನೆ ಮಾಡಲಾಗುತ್ತಿದೆ.

ಈ ಪರಿಸರ ಸ್ನೇಹಿ ಕುಟೀರಗಳಲ್ಲಿ, ಪರಿಸರದ ಮಧ್ಯದ ವಾತಾವರಣದಲ್ಲಿ ಯೋಗ ಥೆರಪಿ, ಧ್ಯಾನ, ಆಯುರ್ವೇದ ಚಿಕಿತ್ಸೆಯ ಸೌಲಭ್ಯಗಳಿವೆ. ಈ ಪರಿಸರ ಸ್ನೇಹಿ ಕುಟೀರದ ಮತ್ತೊಂದು ವಿಭಾಗದಲ್ಲಿ ಹಾವು ಕಡಿತಕ್ಕೊಳಗಾದವರಿಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಂಪೂರ್ಣ ಆಯುರ್ವೇದ ವೈದ್ಯರು ಈ ಚಿಕಿತ್ಸೆಯನ್ನು ನೀಡಲಿದ್ದು, ಗಿಡಮೂಲಿಕೆಗಳನ್ನು ಉಪಯೋಗಿಸಿ ಆಯುರ್ವೇದ ವೈದ್ಯರು ದಾದಿಯರು ಈ ಚಿಕಿತ್ಸೆ ನೀಡಲಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ಪ್ರಸಿದ್ದಿಯನ್ನು ಹೊಂದಿದ್ದು ಜನ ನಾಗದೇವರನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಸಂಖ್ಯಾತ ನಾಗಬನಗಳು ಕೂಡಾ ಇದೆ.
ಹೀಗಾಗಿ ನಾಗರಹಾವುಗಳ ಆವಾಸ ಸ್ಥಾನವೂ ಈ ನಾಗಬನಗಳು ಆಗಿವೆ. ಕರಾವಳಿಯಲ್ಲಿ ಹಾವು ಕಡಿತ ಪ್ರಕರಣಗಳೂ ಸಾಮಾನ್ಯವಾಗಿ ಕಂಡುಬರುತ್ತದೆ. ಹಾವಿನ ಕಡಿತಕ್ಕೆ ತ್ವರಿತ ಚಿಕಿತ್ಸೆ ಅಗತ್ಯವಾಗಿರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಡ್ಡಪರಿಣಾಮವಾಗುತ್ತದೆ.
ಆಧುನಿಕ ವೈದ್ಯ ವಿಜ್ಞಾನ ಎಷ್ಟೇ ಮುಂದುವರಿದರೂ ವಿಷಕಾರಿ ಹಾವು ಕಡಿದ ಸಂದರ್ಭದಲ್ಲಿ ಆ ಭಾಗ ಕೊಳೆತು ಹೋಗುವ ಸಂದರ್ಭಗಳೂ ಅತೀ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಆಧುನಿಕ ಚಿಕಿತ್ಸೆಗಳು ಗಾಯವನ್ನು ಶಮನ ಮಾಡಲಾಗದ ಸಂದರ್ಭದಲ್ಲಿ ಗಿಡಮೂಲಿಕೆಗೆಳ ಚಿಕಿತ್ಸೆ ಬಗೆಹರಿಸಿದ ಹಲವು ದೃಷ್ಠಾಂತಗಳು ಕಾಣಸಿಗುತ್ತದೆ.
ಇನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ವಿಷ ಚಿಕಿತ್ಸಾಲಯದ ಬಗ್ಗೆ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, "ಇಂಜಾಡಿಯ ಬಳಿ ನೂತನ ವಿಷ ಚಿಕಿತ್ಸಾಲಯ ಮಾಡಲು ಯೋಜನೆ ರೂಪಿಸಲಾಗಿದೆ. ನೈಸರ್ಗಿಕ ಪರಿಸರವನ್ನು ಹಾಗೇಯೇ ಉಳಿಸಿ ಪರಿಸರ ಸ್ನೇಹಿಯಾಗಿ ಯೋಜನೆ ರೂಪಿಸಲಾಗುತ್ತದೆ. ಈಗಾಗಲೇ ಈ ಬಗ್ಗೆ ಡಿಪಿಆರ್ ಸಿದ್ಧವಾಗಿದೆ" ಎಂದು ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಈ ರೀತಿಯ ಆಯುರ್ವೇದ ಚಿಕಿತ್ಸಾ ಕೇಂದ್ರ ಕೇರಳದ ಕಣ್ಣೂರು ಜಿಲ್ಲೆಯ ಪರಶಿನಕಡುವು ಸಮೀಪದ ಪಾಪಿನಶ್ಯೇರಿಯಲ್ಲಿದೆ. ವಿಷದ ಹಾವು ಕಡಿತದ ಚಿಕಿತ್ಸಾ ಕೇಂದ್ರವರು. ಆ ಬಳಿಕ ಎಲ್ಲೂ ಈ ರೀತಿಯ ಚಿಕಿತ್ಸಾ ಕೇಂದ್ರವಿಲ್ಲ. ಮೊದಲು ಆ್ಯಂಟಿ ಬಯೋಟಿಕ್ ಚುಚ್ಚುಮದ್ದು ನೀಡಿದ ಬಳಿಕ ಹಾವು ಕಡಿತಕ್ಕೆ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭವಾಗುವ ಚಿಕಿತ್ಸಾ ಕೇಂದ್ರದಲ್ಲಿ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಸಕಲ ಸಂಕಷ್ಟ ನಿವಾರಿಸುವ ಸುಬ್ರಹ್ಮಣ್ಯನ ಆಲಯದಲ್ಲಿ ಹಾವು ಕಡಿತಕ್ಕೂ ಚಿಕಿತ್ಸೆ ನೀಡುವ ಮೂಲಕ ವಿಷವೂ ಶಮನವಾಗುವ ಖುಷಿ ಭಕ್ತರದ್ದಾಗಿದೆ.












Click it and Unblock the Notifications