Mangaluru blast case: ಆಟೋ ಚಾಲಕನ ಕುಟುಂಬಸ್ಥರಿಗೆ 50 ಸಾವಿರ ರೂ ನೀಡಿದ ಆರಗ ಜ್ಞಾನೇಂದ್ರ
ಮಂಗಳೂರು, ನವೆಂಬರ್ 23: ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಭೇಟಿ ನೀಡಿದ್ದಾರೆ. ಆಟೋದಲ್ಲಿ ಕುಕ್ಕರ್ ಸ್ಫೋಟವಾದ ಸ್ಥಳ ಹಾಗೂ ಶಂಕಿತ ಉಗ್ರ ಮತ್ತು ಆಟೋ ಚಾಲಕ ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿ ಆಸ್ಪತ್ರೆಗೆ ಆಗರ ಜ್ಞಾನೇಂದ್ರ ಭೇಟಿ ನೀಡಿದ್ದಾರೆ.
ಆಟೋ ಚಾಲಕ ಪುರುಷೋತ್ತಮ್ ಕುಟುಂಬಸ್ಥರನ್ನು ಭೇಟಿಯಾದ ಸಚಿವ ಆರಗ ಜ್ಞಾನೇಂದ್ರ, ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ. ಈ ವೇಳೆ ವೈಯಕ್ತಿಕ ನೆಲೆಯಲ್ಲಿ 50,000 ರೂಪಾಯಿ ಚೆಕ್ ಅನ್ನು ಗಾಯಾಳು ಪುರುಷೋತ್ತಮ್ ಅವರ ಪತ್ನಿ ಚಿತ್ರಾಕ್ಷಿ ಅವರಿಗೆ ಪರಿಹಾರ ರೂಪದಲ್ಲಿ ನೀಡಿದ್ದಾರೆ.
ಸಚಿವರು ಆಟೋ ಚಾಲಕ ಪುರುಷೋತ್ತಮ್ ಅವರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ವೈದ್ಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರಾಜ್ಯ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಬ್ಲಾಸ್ಟ್ ಕೇಸ್ ಸಂಬಂಧ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದ ಸಚಿವರು
ಮಂಗಳೂರು ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರಗ ಜ್ಞಾನೇಂದ್ರ, ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಡಿಜಿಪಿ ಜೊತೆ ಮಂಗಳೂರಿಗೆ ಭೇಟಿ ನೀಡಿದ್ದೇನೆ. ಅಲ್ಲದೇ ಆಸ್ಪತ್ರೆಗೆ ತೆರಳಿ ಆಟೋ ಚಾಲಕನ ಜೊತೆ ಮಾತನಾಡಿದ್ದೇನೆ. ಆರೋಪಿ ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕನ್ಯಾಕುಮಾರಿ ಸೇರಿ ಹಲವಡೆ ಸುತ್ತಾಡಿದ್ದಾನೆ. ಈ ಸಂಬಂಧ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ. ಫಾರೆನ್ಸಿಕ್ ತಜ್ಞರು ಕೂಡ ಅನೇಕ ದಾಖಲೆ ಕಲೆ ಹಾಕಿದ್ದಾರೆ. ಇವನ ಹಿನ್ನೆಲೆ ಏನು..? ಅವನ ಬೆನ್ನ ಹಿಂದೆ ಯಾರು ಇದ್ದಾರೆ ಎಂದು ತನಿಖೆ ಮಾಡಲಾಗುತ್ತಿದೆ. ಆರೋಪಿಗೆ ಶಿಕ್ಷೆಯಾಗುವ ಆಗುವ ನಿಟ್ಟಿನಲ್ಲಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಮತಾಂಧ ಶಕ್ತಿಗಳನ್ನು ನಾವು ತಡೆಗಟ್ಟುತ್ತೇವೆ ಎಂದ ಆರಗ ಜ್ಞಾನೇಂದ್ರ
ಇನ್ನು ಸುಮಾರು ಎಂಟು ಜನ ತಜ್ಞ ವೈದ್ಯರು ಇಬ್ಬರಿಗೂ ಚಿಕಿತ್ಸೆ ಕೊಡುತ್ತಿದ್ದಾರೆ. ಆತನಿಗೆ ಮಾತನಾಡಲು ಸಾಧ್ಯವಾದ ಮೇಲೆ ಮತ್ತಷ್ಟು ಮಾಹಿತಿ ಸಿಗುತ್ತದೆ. ಆಟೋ ಚಾಲಕನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಆಟೋ ಚಾಲಕನ ಬಡ ಕುಟುಂಬಕ್ಕೆ ಆರ್ಥಿಕ ಸಹಾಯದ ಬಗ್ಗೆ ಸಿಎಂ ಜೊತೆ ಮಾತನಾಡ್ತೇನೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಆರೋಪಿ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಜೋಡಿಸಿ ಬಾಂಬ್ ತಯಾರಿಸುವುದರಲ್ಲಿ ಪರಿಣಿತ. ಇದನ್ನು ಎಲ್ಲಾ ಆಯಾಮದಿಂದ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ರಕ್ತ ಹರಿಸಿ ಪ್ರಾಣ ತೆಗೆಯಲು ಹೊರಟಿರುವ ಮತಾಂಧ ಶಕ್ತಿಗಳನ್ನು ನಾವು ತಡೆಗಟ್ಟುತ್ತೇವೆ. ಕೇಂದ್ರದ ತನಿಖಾ ಸಂಸ್ಥೆಗಳು ಕೂಡ ನಮ್ಮ ಜೊತೆಗೆ ಇದ್ದಾರೆ. ಇದರ ಹಿಂದೆ ಇರುವ ಎಲ್ಲಾ ಶಕ್ತಿಗಳನ್ನು ನಾವು ಬಂಧಿಸುತ್ತೇವೆ.

ಸುಸಂಸ್ಕೃತ ತಾಲೂಕು ತೀರ್ಥಹಳ್ಳಿಯಲ್ಲಿ ಇಂತವರು ಇದ್ದಾರೆ
ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪನೆ ಬಗ್ಗೆ ಹೇಳಿದ್ದೇವೆ. ಕೇಂದ್ರ ಸರ್ಕಾರಕ್ಕೆ ಕೂಡ ಇದರ ಬಗ್ಗೆ ಸಕರಾತ್ಮಕ ಅಭಿಪ್ರಾಯವಿದೆ. ಈ ಪ್ರಕರಣ ಎನ್ಐಎಗೆ ವಹಿಸುವ ಬಗ್ಗೆ ಒಂದೆರೆಡು ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ. ತೀರ್ಥಹಳ್ಳಿ ಒಂದು ಸುಸಂಸ್ಕೃತ ತಾಲೂಕು, ಆದರೆ ಅಲ್ಲಿ ಇಂಥವರೂ ಇದ್ದಾರೆ. ಈ ಯುವಕರಿಗೆ ಮತಾಂಧ ಸಂಘಟನೆ ಲಿಂಕ್ ಇದೆ. ಕರಾವಳಿ ಮತ್ತು ಕೇರಳದ ಲಿಂಕ್ ಇದೆ. ಆರೋಪಿ ಮಧುರೈ, ನಾಗರಕೋಯಿಲ್, ತಮಿಳುನಾಡು ಎಲ್ಲಾ ಕಡೆ ಹೋಗಿದ್ದಾನೆ ಎಂದು ಹೇಳಿದರು.

ಆರೋಪಿ ಬಗ್ಗೆ ಆಳವಾಗಿ ಮತ್ತು ಗಂಭೀರವಾಗಿ ತನಿಖೆ
ಇನ್ನು ಇವರು ಫೋನ್ನಲ್ಲಿ ಮಾತನಾಡಲ್ಲ, ಬೇರೆ ರೀತಿಯಾಗಿ ಸಂಪರ್ಕದಲ್ಲಿರುತ್ತಾರೆ. ಆರೋಪಿ ಹಿಂದೂ ಹೆಸರಿನಲ್ಲಿ ಐಡಿ ಕಾರ್ಡ್ ನಕಲಿ ಮಾಡಿ ಓಡುತ್ತಿದ್ದ. ಇದರಿಂದ ಅವನ ಬಗ್ಗೆ ಅನುಮಾನ ಬರುತ್ತಿರಲಿಲ್ಲ. ಗೋಡೆ ಬರಹ ಕೇಸ್ನಲ್ಲಿ ಆತನಿಗೆ ಹೈಕೋರ್ಟ್ ಎಂಟು ತಿಂಗಳಲ್ಲಿ ಜಾಮೀನು ಕೊಟ್ಟಿದೆ. ಆ ಮೇಲೆ ತೀರ್ಥಹಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನು ನಾಪತ್ತೆಯಾದ. ಅವನು ಹೊರ ರಾಜ್ಯದಲ್ಲಿ ಆಗಾಗ ಜಾಗ ಬದಲಿಸುವ ಕೆಲಸ ಮಾಡುತ್ತಿದ್ದ. ಆರೋಪಿ ಬಗ್ಗೆ ಆಳವಾಗಿ ಮತ್ತು ಗಂಭೀರವಾಗಿ ತನಿಖೆ ಮಾಡುತ್ತಿದ್ದೇವೆ ಎಂದರು.












Click it and Unblock the Notifications