ಉಜಿರೆ ಎಸ್ಡಿಎಂ ಕಾಲೇಜಿಗೆ ಸುವರ್ಣ ಮಹೋತ್ಸವ ಸಂಭ್ರಮ
ಉಜಿರೆ ಡಿಸೆಂಬರ್. 03: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ(ಎಸ್ ಡಿಎಂ)ಸಂಸ್ಥೆಗೆ ಸುವರ್ಣ ಮಹೋತ್ಸವ ಸಂಭ್ರಮ. ಸಡಗರವನ್ನು ವರ್ಷವಿಡೀ ಆಚರಿಸಲು ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, 1965ರಲ್ಲಿ ಎಜ್ಯುಕೇಶನ್ ಟ್ರಸ್ಟ್ ಆರಂಭಗೊಂಡಿತು. 1966ರಲ್ಲಿ ಆರಂಭಗೊಂಡ ಎಸ್ ಡಿಎಂ ಪದವಿ ಕಾಲೇಜು ಗುಣಾತ್ಮಕ ಶಿಕ್ಷಣದೊಂದಿಗೆ ಯಶಸ್ವಿಯಾಗಿ ಮುನ್ನಡೆದು ಬಂದಿದೆ. ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಡಿಸೆಂಬರ್ 17 ರಂದು ಚಾಲನೆ ದೊರೆಯಲಿದೆ ಎಂದು ತಿಳಿಸಿದರು.[ಉಜಿರೆ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ]

ಬೆಂಗಳೂರಿನ ಪ್ರಸನ್ನ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸುಖಬೋದಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದಾರೆ.[ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದರೆ ಸಾಧನೆ ಸಾಧ್ಯ: ಯಶೋವರ್ಮ]
ಕಾರ್ಯಕ್ರಮದಲ್ಲಿ ಸಚಿವ ಟಿ.ಬಿ. ಜಯಚಂದ್ರ, ಮಂಗಳೂರು ವಿ.ವಿ. ಕುಲಪತಿ ಡಾ. ಕೆ. ಭೈರಪ್ಪ ಹಾಗೂ ಶಾಸಕ ಕೆ. ವಸಂತ ಬಂಗೇರ ಪಾಲ್ಗೊಳ್ಳುವರು. ಡಿಸೆಂಬರ್ 18 ರಂದು ಸುವರ್ಣ ಮಹೋತ್ಸವದ ಸವಿನೆನಪಿನ ಈಜುಕೊಳದ ಉದ್ಘಾಟನೆಯೂ ನಡೆಯಲಿದೆ. ಅರಣ್ಯ ಸಚಿವ ರಮಾನಾಥ ರೈ ಅವರು ಈಜುಕೊಳವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ 48 ಸಂಸ್ಥೆಗಳು ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮತ್ತು ರಚನಾತ್ಮಕ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿವೆ. ಡಿಸೆಂಬರ್ 17 ರಿಂದ ಆರಂಭವಾಗುವ ಕಾರ್ಯಕ್ರಮಗಳು ನಿರಂತರ ಒಂದು ವರ್ಷ ಕಾಲ ನಡೆಯಲಿದೆ ಎಂದು ತಿಳಿಸಿದರು.












Click it and Unblock the Notifications