ಚಿನ್ನದ ಹುಡುಗಿ ಎಂ.ಆರ್. ಪೂವಮ್ಮಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ
ಮಂಗಳೂರು, ಸೆಪ್ಟೆಂಬರ್.6: ಇಂಡೊನೇಷ್ಯಾದ ಜಕಾರ್ತದಲ್ಲಿ ಕೊನೆಗೊಂಡ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಅದರಲ್ಲೂ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ ರಿಲೇಯಲ್ಲಿ ಬೆಳ್ಳಿಯ ಪದಕ ಗೆದ್ದ ತಂಡದತ್ತ ವಿಶ್ವವೇ ತಿರುಗಿ ನೋಡುತ್ತಿದ್ದು, ಈ ರಿಲೇ ತಂಡದಲ್ಲಿ ಕನ್ನಡತಿ ಅದರಲ್ಲೂ ಮಂಗಳೂರಿನ ಪೂವಮ್ಮ ಇದ್ದರು ಎನ್ನುವುದು ಗಮನಾರ್ಹ ಸಂಗತಿ.
ಚಿನ್ನದ ಹಾಗೂ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಪ್ರಮುಖ ಓಟಗಾರ್ತಿ ಎಂ.ಆರ್. ಪೂವಮ್ಮ ಅವರು ಇಂದು ಗುರುವಾರ ತವರಿಗೆ ಮರಳಿದ್ದರು . ಏಷ್ಯಾಡ್ ನಲ್ಲಿ ಭಾರತದ ಕೀರ್ತಿ ಪತಾಕೆ ಬಾನೆತ್ತರಕ್ಕೆ ಹಾರಿಸಿ ಮಂಗಳೂರಿಗೆ ಆಗಮಿಸಿದ್ದ ಪೂವಮ್ಮ ಅವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ನಡೆದ ಸ್ವಾಗತ ಸಂದರ್ಭ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದ ವ್ಯಾಸ ಕಾಮತ್, ಮಾಜಿ ಸಚಿವ ಅಭಯಚಂದ್ರ ಜೈನ್, ಮತ್ತಿತರರು ಪೂವಮ್ಮ ಅವರನ್ನು ಅದ್ದೂರಿಯಿಂದ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೂವಮ್ಮ ''ನನ್ನ ಪೋಷಕರ ಪ್ರೋತ್ಸಾಹ, ಬೆಂಬಲದಿಂದಾಗಿಯೇ ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅದಕ್ಕಾಗಿ ಪ್ರಥಮವಾಗಿ ನನ್ನ ಈ ಪದಕಗಳು ಪೋಷಕರು ಮತ್ತು ಕೊಡಗಿನ ನೆರೆ ಸಂತ್ರಸ್ತರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ತವರಿನ ಸ್ವಾಗತಕ್ಕೆ ತುಂಬಾ ಖುಷಿಯಾಗುತ್ತಿದೆ. 2014ರಲ್ಲಿಯೂ ಪದಕ ಗೆದ್ದು ಮರಳಿದಾಗ ಇದೇ ರೀತಿಯಾದ ಸ್ವಾಗತ ದೊರಕಿತ್ತು. ಇನ್ನು ಮುಂದಿನ ವರ್ಷ ಏಷ್ಯನ್ ಚಾಂಪಿಯನ್ ಶಿಪ್ ಮತ್ತು ವಿಶ್ವ ಚಾಂಪಿಯನ್ ಶಿಪ್ಗೆ ತಯಾರಿ ಆಗಬೇಕಾಗಿದೆ.

ತಯಾರಿಗೆ ಶಿಬಿರ ಮುಂದಿನ ಅಕ್ಟೋಬರ್ನಲ್ಲಿ ನಿರ್ಧಾರವಾಗಲಿದೆ. 2020ರಲ್ಲಿ ಒಲಿಪಿಂಕ್ಸ್ ನಲ್ಲಿ ಭಾಗವಹಿಸುವ ಇರಾದೆ ಇದೆ. ಬುಧವಾರ (ಸೆ.05)ಪ್ರಧಾನಿ ಹಾಗೂ ಕ್ರೀಡಾ ಸಚಿವರನ್ನು ಭೇಟಿಯಾಗಿದ್ದು ಅವರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಅದೊಂದು ಅದ್ಬುತ ಕ್ಷಣ ಎಂದು ಪೂವಮ್ಮ ಸಂತೋಷ ವ್ಯಕ್ತಪಡಿಸಿದರು.












Click it and Unblock the Notifications