ಬುರ್ಹಾನ್ ವಾನಿಯಂತ ಉಗ್ರರಿಗೆ ಗರ್ಲ್ ಫ್ರೆಂಡ್ಸ್, ಸೆಲ್ಫಿ ಗೀಳಿರುತ್ತದೆ: ಗೌರವ್ ಆರ್ಯ
ಮಂಗಳೂರು, ನವೆಂಬರ್.05: ಜಮ್ಮುಕಾಶ್ಮೀರದಲ್ಲಿ ವಹಾಬಿ ಮೂಲಭೂತವಾದ ಹತ್ತಿಕ್ಕದಿದ್ದರೆ ಸುಸೈಡ್ ಬಾಂಬರ್ ಗಳು ಅಟ್ಟಹಾಸ ಮೆರೆಯಲಿದ್ದಾರೆ ಎಂದು ನಿವೃತ್ತ ಸೇನಾಧಿಕಾರಿ, ರಕ್ಷಣಾ ವಿಶ್ಲೇಷಕ ಮೇಜರ್ ಗೌರವ್ ಆರ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಆಯೋಜಿಸಿರುವ 'ಲಿಟ್ ಫೆಸ್ಟ್ ಸಾಹಿತ್ಯ ಸಮ್ಮೇಳನ'ದಲ್ಲಿ ಮಾತನಾಡಿದ ಅವರು ಜಮ್ಮು ಕಾಶ್ಮೀರದಲ್ಲಿ ವಹಾಬಿ ಮೂಲಭೂತವಾದ ಅತ್ಯಂತ ವೇಗವಾಗಿ ಪಸರಿಸುತ್ತಿದೆ. ಇದನ್ನು ಸರ್ಕಾರ ಹತ್ತಿಕ್ಕದೆ ಹೋದರೆ ಮುಂಬರುವ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಸುಸೈಡ್ ಬಾಂಬರ್ ಗಳು ಕಂಡುಬಂದರೆ ಅಚ್ಚರಿಯಿಲ್ಲ.
ಭಾರತೀಯ ಸೇನೆ ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ಗಳನ್ನು ನಡೆಸಿದೆ. ಆದರೆ ಕಳೆದ ವರ್ಷ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅತ್ಯಂತ ಮಹತ್ವದ್ದು ಏಕೆಂದರೆ ಅದರ ಹೊಣೆಯನ್ನು ಬಹಿರಂಗವಾಗಿ ಭಾರತದ ಪ್ರಧಾನಿಯವರು ಹೊತ್ತಿದ್ದರು.
ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದು ನಿಜವೆಂದು ಗೊತ್ತಿದ್ದರೂ ಕೇವಲ ಸರ್ಕಾರವನ್ನು ಟೀಕಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಾಚರಣೆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಉಗ್ರರನ್ನು ಸೆದೆಬಡಿಯುವುದೇ ಸೇನೆಯ ಕೆಲಸ
ಬುರ್ಹಾನ್ ವಾನಿಯಂತಹ ಉಗ್ರರನ್ನು ಸೆದೆಬಡಿಯುವುದೇ ಭಾರತೀಯ ಸೇನೆಯ ಕೆಲಸ. ಬುರ್ಹಾನ್ ವಾನಿ ಅಂತಹವರಿಗೆ ಗನ್ ಹಾಗೂ ಪೆನ್ನ ವ್ಯತ್ಯಾಸ ಗೊತ್ತಿರುವುದಿಲ್ಲ, ಸೆಲ್ಫಿ ಕ್ಲಿಕ್ಕಿಸುವ ಗೀಳು ಅವರಿಗೆ ಇರುತ್ತದೆ, ನಾಲ್ಕೈದು ಗರ್ಲ್ ಫ್ರೆಂಡ್ಗಳಿರುತ್ತಾರೆ. ಹಾಗಾಗಿ ಸುಲಭವಾಗಿ ಅವರನ್ನು ಸೇನೆ ಹುಡುಕಿ ಕೊಲ್ಲುತ್ತದೆ. ಇಂತಹ ದೇಶ ವಿರೋಧಿಗಳನ್ನು ಕೊಲ್ಲುವುದು ಸೈನ್ಯದ ಕೆಲ ಎಂದು ಗೌರವ್ ಆರ್ಯ ತಿಳಿಸಿದರು.

ಬೆದರಿಕೆ ಸಂದೇಶ ರವಾನಿಸಿದ್ದ
ಕಾಶ್ಮೀರ ಹಿಂದಿನಿಂದಲೂ ಆಮದು ನಾಯಕರ ಆಡಂಬೋಲವಾಗಿತ್ತು, ಚಿರಾಗ್ ಬೇಗ್ ಎಂಬ ನಾಯಕನನ್ನು ಕಾಶ್ಮೀರಿಗಳು ಆರಿಸಿ ತಂದಾಗ ಆತ ಶವಯಾತ್ರೆಯೊಂದನ್ನು ನಿಲ್ಲಿಸಿ, ಶವದ ಮೂಗನ್ನೂ ಕತ್ತರಿಸಿ, ಚಿರಾಗ್ ಬೇಗ್ ಆಗಮನವಾಗಿದೆಯೆಂದು ಸತ್ತವರಿಗೂ ತಿಳಿಯಬೇಕು ಎಂಬ ಬೆದರಿಕೆ ಸಂದೇಶ ರವಾನಿಸಿದ್ದ.
ಅಂದಿನಿಂದ ಇಂದಿನವರೆಗೂ ಜಮ್ಮು ಕಾಶ್ಮೀರದಲ್ಲಿ ಹಿಂಸೆ ತಾಂಡವವಾಡುತ್ತಿದ್ದು, ಕಾಶ್ಮಿರದಾದ್ಯಂತ ಲಷ್ಕರೆ, ತಯ್ಯಬಾ, ಹಿಜ್ಬುಲ್ ಮುಜಾಹಿದೀನ್, ಜೈಶ್ ಇ ಮೊಹಮ್ಮದ್, ಅಲ್ಲಾಸ್ ಟೈಗರ್ಸ್, ದುಖ್ತರಣ್ ಇ ಮಿಲ್ಲತ್ ಮುಂತಾದ ಉಗ್ರ ಸಂಘಟನೆಗಳಿವೆ ಎಂದು ಗೌರವ್ ಆರ್ಯ ತಿಳಿಸಿದರು.

ಭಕ್ತಾದಿಗಳ ವಿರುದ್ಧ ಹಿಂಸೆ
ಈ ಸಂದರ್ಭದಲ್ಲಿ ಕೇರಳದ ಕುರಿತು ಮಾತನಾಡಿದ ಪ್ರಜ್ಞಾ ಪ್ರವಾಹ್ ಸಂಘಟನೆಯ ಸಂಚಾಲಕ ನಂದ ಕುಮಾರ್, ಕೇರಳದಲ್ಲಿ ಹಿಂದುತ್ವ ದಮನದ ಕಾರ್ಯದ ಭಾಗವಾಗಿಯೇ ಶಬರಿಮಲೆಯಲ್ಲಿ ಪ್ರಸ್ತುತ ಪೊಲೀಸ್ ಕೋಟೆಯನ್ನೇ ಕಟ್ಟಲಾಗಿದೆ. ಅಲ್ಲದೇ ಭಕ್ತಾದಿಗಳ ವಿರುದ್ಧ ಹಿಂಸೆ ನಡೆಸಲಾಗಿದೆ ಎಂದರು.

ಹಿಂದೂಗಳೆಂದು ಹೇಳಿಕೊಳ್ಳುವುದಿಲ್ಲ..
ಕಮ್ಯುನಿಸ್ಟರು ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುವುದಿಲ್ಲ. ಹಿಂದಿನ ಮುಖ್ಯಮಂತ್ರಿಗಳಾದ ನಂಬೂದಿರಿಪಾಡ್ ಹಾಗೂ ಅಚ್ಯುತ ಮೆನನ್ ತಾವು ಹಿಂದುಗಳಲ್ಲ ಎಂದು ಹೇಳಿದ್ದರು. ಅವರಿಗೆ ದೇವಾಲಯಗಳು ಕೇವಲ ಹಣಕ್ಕಾಗಿಯಷ್ಟೇ ಬೇಕು ಎಂದು ನಂದ ಕುಮಾರ್ ಟೀಕಿಸಿದರು.












Click it and Unblock the Notifications