ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ
ಮಂಗಳೂರು, ನವೆಂಬರ್ 18: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜ.15ರಿಂದ 45 ದಿನಗಳ ಕಾಲ ಧನ ಸಂಗ್ರಹ ಕಾರ್ಯ ನಡೆಯಲಿದ್ದು, ಈ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್ಗೆ ವಹಿಸಲಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಿಳಿಸಿದರು.
ರಾಮ ಜನ್ಮಭೂಮಿ ಟ್ರಸ್ಟ್ ಸಭೆಯ ನಿರ್ಣಯಗಳ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ರಾಮ ಮಂದಿರದಲ್ಲಿ ಎಲ್ಲ ಭಕ್ತರ ಪಾಲುದಾರಿಕೆ ಇರಬೇಕು. ಈ ನಿಟ್ಟಿನಲ್ಲಿ ಧನ ಸಂಗ್ರಹ ಕಾರ್ಯ ನಡೆಯಲಿದೆ. ಎಲ್ಲ ಭಕ್ತರು ತಮ್ಮ ಕೈಲಾದ ದೇಣಿಗೆ ನೀಡಬೇಕು ಎಂದು ವಿನಂತಿಸಿದರು.
ಇದೇ ಸಂದರ್ಭ ಅಯೋಧ್ಯೆ ರಾಮಮಂದಿರದ ಕುರಿತು ಮಾತನಾಡಿ, "ಭಾರತೀಯ ವಾಸ್ತುಶಾಸ್ತ್ರದ ಪ್ರಕಾರ ಮಂದಿರ ನಿರ್ವಣವಾಗಲಿದೆ. ವಾಸ್ತು ಶಾಸ್ತ್ರಜ್ಞರ ತಂಡ ಮಂದಿರ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಲಿದೆ. ಕರಾವಳಿಯವರಾದ ಕುಡುಪು ಕೃಷ್ಣರಾಜ ತಂತ್ರಿ ಮತ್ತು ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಕೇರಳದ ಓರ್ವರು ಮತ್ತು ಉತ್ತರ ಭಾರತದ ಇಬ್ಬರು ಈ ತಂಡದಲ್ಲಿದ್ದಾರೆ ಎಂದು ಹೇಳಿದರು.

ರಾಮ ಮಂದಿರ ಸಂಪೂರ್ಣ ಶಿಲಾಮಯವಾಗಿ ನಿರ್ಮಾಣವಾಗುವ ಕಾರಣ ಅಷ್ಟು ಭಾರ ಹೊರಲು ಅಲ್ಲಿನ ಭೂಮಿಯ ಧಾರಣಾ ಸಾಮರ್ಥ್ಯ ಎಷ್ಟಿದೆ ಎನ್ನುವ ಪರೀಕ್ಷೆ ನಡೆಯುತ್ತಿದೆ. ಅಲ್ಲಿರುವುದು ದೂಳು ತುಂಬಿದ ನೆಲ ಆಗಿರುವುದರಿಂದ ವೈಜ್ಞಾನಿಕವಾಗಿ ಪರೀಕ್ಷೆಗಳು ನಡೆಯುತ್ತಿವೆ. 200 ಅಡಿ ಆಳದವರೆಗೆ ಪರೀಕ್ಷೆ, ಪರಿಶೀಲನೆಯ ಬಳಿಕವೇ ತಳಪಾಯ ಹಾಕುವ ಕಾರ್ಯ ನಡೆಯಲಿದೆ ಎಂದರು.












Click it and Unblock the Notifications