ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ: ಮತಾಂತರ ಕಾರಣ?
ಮಂಗಳೂರು, ಡಿಸೆಂಬರ್ 8: ಇಬ್ಬರು ಮಕ್ಕಳಿಗೆ ವಿಷವುಣಿಸಿ, ಪತ್ನಿಯನ್ನು ಕೊಂದು, ಪತಿಯೂ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಮಂಗಳೂರಿನಲ್ಲಿ ಬುಧವಾರ ನಡೆದಿದೆ. ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿ ಘಟನೆ ನಡೆದಿದ್ದು, ಪತಿ ಬರೆದ ಡೆತ್ನೋಟ್ ಪೊಲೀಸರಿಗೆ ಲಭ್ಯವಾಗಿದ್ದು, ಈ ಪ್ರಕರಣ ಹೊಸ ಆಯಾಮ ಸೃಷ್ಟಿಸಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಮೂಲದ ನಾಗೇಶ್ ಶಿರಗುಪ್ಪಿ (30), ವಿಜಯಲಕ್ಷ್ಮಿ(26), ಇಬ್ಬರು ಮಕ್ಕಳಾದ ಸಪ್ನಾ (8) ಮತ್ತು ಸಮರ್ಥ್ (4) ಎಂದು ಗುರುತಿಸಲಾಗಿದೆ. ಮೋರ್ಗನ್ ಗೇಟ್ ಬಳಿ ಬಾಡಿಗೆ ಮನೆ ಹೊಂದಿದ್ದ ನಾಗೇಶ್ ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಗ್ರಾಮದ ನಿವಾಸಿಯಾಗಿದ್ದು ಪತ್ನಿ, ಮಕ್ಕಳೊಂದಿಗೆ ವಾಸವಿದ್ದ.
ಮೋರ್ಗನ್ ಗೇಟ್ ಬಳಿಯ ಮನೆಗೆ 15 ದಿನಗಳ ಹಿಂದಷ್ಟೇ ಬಂದಿದ್ದು ಅದಕ್ಕೂ ಹಿಂದೆ ವೇಲೆನ್ಸಿಯಾದಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದುಕೊಂಡು ನಾಗೇಶ್ ಟ್ರಕ್ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದ. ಈ ನಡುವೆ ಪತ್ನಿ ವಿಜಯಲಕ್ಷ್ಮಿ ಬಿಜೈ ನಿವಾಸಿ ಮುಸ್ಲಿಂ ಮಹಿಳೆಯೊಬ್ಬರ ಮನೆಗೆ ತೆರಳುತ್ತಿದ್ದಳು. ಮನೆ ಕೆಲಸಕ್ಕೆ ಹೋಗುತ್ತಿರುವುದಾಗಿ ವಿಜಯಲಕ್ಷ್ಮಿ ಹೇಳಿಕೊಂಡಿದ್ದಳು. ಇಬ್ಬರು ಮಕ್ಕಳು ಸ್ಥಳೀಯ ಶಾಲೆಗೆ ಹೋಗುತ್ತಿದ್ದರು.

ಕಳೆದ ಅಕ್ಟೋಬರ್ ತಿಂಗಳಲ್ಲಿ ವಿಜಯಲಕ್ಷ್ಮಿ ಗಂಡನ ಮನೆ ಬಿಟ್ಟು ಎಂಟು ದಿನಗಳ ಕಾಲ ಹೊರಗೆ ಹೋಗಿದ್ದಳು. ಈ ಬಗ್ಗೆ ಪತಿ ನಾಗೇಶ್, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದ. ಈ ನಡುವೆ ಪತ್ನಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವ ಬಗ್ಗೆ ನಾಗೇಶ್ ಶಂಕಿಸಿ, ಗಲಾಟೆ ಮಾಡಿದ್ದ. ಇದೇ ವಿಚಾರದಲ್ಲಿ ಗಂಡ- ಹೆಂಡತಿ ಮಧ್ಯೆ ಜಗಳ ಆಗಿತ್ತು ಎನ್ನಲಾಗಿದೆ.
ಬಳಿಕ ಪೊಲೀಸರು ಮಧ್ಯಸ್ಥಿಕೆ ವಹಿಸಿ ವಿಜಯಲಕ್ಷ್ಮಿಯನ್ನು ಮನವೊಲಿಸಿ ಗಂಡನ ಜೊತೆಗೆ ಇರುವಂತೆ ಮಾಡಿದ್ದರು. ಆದರೆ ಪತಿ ನಾಗೇಶ್ ಕುಡಿದು ಬಂದು ಹೊಡೆದು ಹಿಂಸೆ ನೀಡುತ್ತಿದ್ದ ಎಂದು ಪತ್ನಿ ವಿಜಯಲಕ್ಷ್ಮಿ ದೂರು ನೀಡಿದ್ದಳು.
ಮಂಗಳವಾರ ರಾತ್ರಿ ಗಂಡ ನಾಗೇಶ್, ಹೆಂಡತಿ ಮೇಲಿನ ಸಿಟ್ಟಿನಿಂದ ಫ್ರೈಡ್ರೈಸ್ನಲ್ಲಿ ವಿಷ ಬೆರೆಸಿ ತಂದಿರುವ ಶಂಕೆಯಿದ್ದು, ಪತ್ನಿ- ಮಕ್ಕಳಿಗೆ ಉಣಿಸಿದ್ದಾನೆ. ಅಲ್ಲದೆ, ರಾತ್ರಿ ವೇಳೆ ಪತ್ನಿಯನ್ನು ಮಲಗಿದಲ್ಲೇ ತಲೆದಿಂಬು ಮುಖಕ್ಕೆ ಇಟ್ಟು ಉಸಿರು ಕಟ್ಟಿಸಿ ಸಾಯಿಸಿದ ಬಗ್ಗೆ ಶಂಕೆಯಿದೆ. ಪತ್ನಿ ಮುಖದಲ್ಲಿ ರಕ್ತ ಬಂದಿದ್ದು ಬೆಡ್ನಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಸಣ್ಣ ಮಗು ತಾಯಿ ಜೊತೆಗಿದ್ದರೆ, ದೊಡ್ಡ ಮಗಳು ಹೊರಗಡೆ ಮಲಗಿದಲ್ಲೇ ಶವವಾಗಿದ್ದಳು.

ನಾಗೇಶ್ ಬುಧವಾರ ಬೆಳಗ್ಗೆ ನೇಣಿಗೆ ಶರಣಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ನಾಗೇಶ್ ಮೃತದೇಹದ ಬಳಿ ಡೆತ್ನೋಟ್ ಸಿಕ್ಕಿದ್ದು, ಅದರಲ್ಲಿ ನೂರ್ ಜಹಾನ್ ಎಂಬಾಕೆ ತನ್ನ ಪತ್ನಿ ಹಾಗೂ ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವ ಬಗ್ಗೆ ಉಲ್ಲೇಖಿಸಿದ್ದಾನೆ. ಈ ಘಟನೆಗೆ ನೂರ್ ಜಹಾನ್ ಕಾರಣ ಎಂದು ಮೃತ ನಾಗೇಶ್ ಬರೆದಿದ್ದಾನೆ.
ಈ ಹಿನ್ನೆಲೆಯಲ್ಲಿ ಬಿಜೈ ನಿವಾಸಿ ನೂರ್ ಜಹಾನ್ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಬುಧವಾರ ಬೆಳಗ್ಗೆ ಬಂದ ಮಾಹಿತಿಯ ಪ್ರಕಾರ ಮನೆಯನ್ನು ಪರಿಶೀಲಿಸಿದಾಗ ನಾಲ್ಕು ಮೃತದೇಹ ಪತ್ತೆಯಾಗಿದೆ. ನಾಗೇಶ್ ಮತ್ತು ಆತನ ಪತ್ನಿ ವಿಜಯಲಕ್ಷ್ಮಿ ನಡುವೆ ಈ ಹಿಂದೆಯೂ ಗಲಾಟೆ ನಡೆದಿತ್ತು. ವಿಜಯಲಕ್ಷ್ಮಿ ನಾಪತ್ತೆಯಾಗಿರುವ ಬಗ್ಗೆ ನಾಗೇಶ್ ದೂರು ಕೊಟ್ಟಿದ್ದ. ಈ ವೇಳೆ ವಿಜಯಲಕ್ಷ್ಮಿಯೇ ಪಾಂಡೇಶ್ವರ ಮಹಿಳಾ ಠಾಣೆಗೆ ಆಗಮಿಸಿ ಗಂಡನ ಜೊತೆ ಸಂಸಾರ ಮಾಡುವುದಾಗಿ ಹೇಳಿದ್ದಳು.
ಗಂಡ ದಿನಾಲೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾನೆ ಅಂತಾನೂ ಹೇಳಿದ್ದಳು. ಬಳಿಕ ಮಾತುಕತೆ ನಡೆಸಿ ಇಬ್ಬರೂ ಜೀವನ ನಡೆಸುತ್ತಿದ್ದರು. ಸ್ಥಳೀಯರ ಮಾಹಿತಿ ಪ್ರಕಾರ ಕೆಲ ದಿನಗಳ ಹಿಂದೆ ಗಂಡ- ಹೆಂಡತಿ ಜಗಳ ಮಾಡಿಕೊಂಡಿದ್ದರು. ನಾಗೇಶ್ ಡೆತ್ನೋಟ್ನಲ್ಲಿ ವಿಜಯಲಕ್ಷ್ಮಿ ಕೆಲಸಕ್ಕೆ ಹೋಗುತ್ತಿದ್ದ ನೂರ್ ಜಹಾನ್ ಎಂಬಾಕೆಯ ಹೆಸರನ್ನು ಉಲ್ಲೇಖಿಸಿದ್ದು, ಈ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಸುಮೋಟೋ ಕೇಸ್ ದಾಖಲಿಸಿ ನೂರ್ ಜಹಾನ್ನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications