ಚೇತರಿಸಿಕೊಳ್ಳುತ್ತಿದೆ ಸುಳ್ಯ ಅರಣ್ಯದಲ್ಲಿ ಗಾಯಗೊಂಡಿದ್ದ ಕಾಡಾನೆ
ಮಂಗಳೂರು, ಮೇ 11:ಸುಳ್ಯ ಅರಣ್ಯ ವಲಯದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ನಾಗರಹೊಳೆ ಅಭಯಾರಣ್ಯದ ವೈದ್ಯರು ಚಿಕಿತ್ಸೆ ನೀಡುವಲ್ಲಿ ಸಫಲರಾಗಿದ್ದಾರೆ. ಇಲ್ಲಿನ ಬಾಳುಗೋಡು ಮಿತ್ತಡ್ಕ ಕಿರಿಭಾಗ ರಕ್ಷಿತಾರಣ್ಯದಲ್ಲಿ ಗಾಯಗೊಂಡಿದ್ದ ಕಾಡಾನೆ ಯಾತನೆ ಅನುಭವಿಸುತ್ತಿದ್ದ ವಿಚಾರ ಇತ್ತೀಚೆಗೆ ತಿಳಿದು ಬಂದಿತ್ತು.
ನಾಗರಹೊಳೆ ಅಭಯಾರಣ್ಯದ ವೈದ್ಯರು ನೋವಿನಿಂದ ಬಳಲುತ್ತಿದ್ದ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಚಿಕಿತ್ಸೆ ನೀಡಿದ್ದಾರೆ.ಚಿಕಿತ್ಸೆ ಫಲಕಾರಿಯಾಗಿದ್ದು, ಚೇತರಿಸಿಕೊಂಡ ಆನೆ ಎಚ್ಚರಗೊಂಡು ಒಡಾಡಲು ಆರಂಭಿಸಿದೆ ಎಂದು ಹೇಳಲಾಗಿದೆ.
ನಾಗರಹೊಳೆ ಅಭಯಾರಣ್ಯದ ವೈದ್ಯಾಧಿಕಾರಿ ಡಾ.ಮುಜೀಬ್, ಗುತ್ತಿಗಾರು ಪಶುವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ, ಸುಳ್ಯ ಎಸಿಎಫ್ ಆಸ್ಟಿನ್ ಸೋನ್ಸ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ್ ಮೊದಲಾದವರ ತಂಡ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಿದ್ದಾರೆ.

ಆನೆ ಮುಂಗಾಲನ್ನು ಎತ್ತಿ ಕುಟುಂತ್ತ ನಡೆಯುತ್ತಿತ್ತು. ಮೂರು ದಿನಗಳಿಂದ ಇದೇ ಸ್ಥಿತಿಯಲ್ಲಿದ್ದ ಆನೆಯನ್ನು ಕಂಡು ವೈದ್ಯಾಧಿಕಾರಿಗಳು ಅರವಳಿಕೆ ನೀಡಿ, ಗಾಯಕ್ಕೆ ಶುಶ್ರೂಷೆ ನೀಡಿದ್ದಾರೆ.
ಗಾಯಗೊಂಡಿದ್ದ ಆನೆಯ ಪಕ್ಕಕ್ಕೆ ತೆರಳಿದರೆ ಆನೆ ಕೋಪಗೊಳ್ಳುತ್ತಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆನೆಗೆ ಅರಿವಳಿಕೆ ನೀಡುವುದು ಅನಿವಾರ್ಯವಾಗಿತ್ತು.

ಆನೆಗೆ 3 ಗಂಟೆ ಜ್ಞಾನ ತಪ್ಪಿಸಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮುಂಭಾಗದ ಎಡಕಾಲಿನ ಮೇಲ್ಭಾಗದಲ್ಲಿ ಗಾಯವಾಗಿ ಕೀವು ತುಂಬಿಕೊಂಡಿತ್ತು. ವೈದ್ಯರು ಕೀವನ್ನು ತೆಗೆದು ಗಾಯಕ್ಕೆ ಔಷಧಿ ಹಚ್ಚಿ, ರೋಗ ನಿರೋಧಕ ಚುಚ್ಚುಮದ್ದು ನೀಡಿದ್ದಾರೆ.
ಶುಶ್ರೂಷೆಯ ಬಳಿಕ ಮತ್ತೆ ಆನೆಗೆ ಎಚ್ಚರಗೊಳ್ಳಲು ಚುಚ್ಚುಮದ್ದು ನೀಡಲಾಗಿತ್ತು. ಆನೆ ಈಗ ಚೇತರಿಸಿಗೊಳ್ಳುತ್ತಿದ್ದು, ಸಂಪೂರ್ಣ ಗುಣಮುಖವಾಗಿ ನಡೆದಾಡುವವರೆಗೆ ಸುಬ್ರಹ್ಮಣ್ಯ ಅರಣ್ಯ ಇಲಾಖಾ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಕಾಡಿನಲ್ಲಿ ಆನೆಗಳು ಕಾದಾಟ ನಡೆಸಿದ ಕಾರಣ, ಸುಮಾರು 17 ವರ್ಷ ವಯಸ್ಸಿನ ಈ ಗಂಡಾನೆ ಗಾಯಗೊಂಡಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications