ಕಡಲ್ಕೊರೆತದ ನೆಪ, ಮರಗಳ ಮಾರಣಹೋಮಕ್ಕೆ ಅರಣ್ಯ ಇಲಾಖೆ ಬ್ರೇಕ್
ಮಂಗಳೂರು, ಜುಲೈ 4: ಉಳ್ಳಾಲದ ಸೀಗ್ರೌಂಡ್ನಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ತೀರದಲ್ಲಿದ್ದ ಒಂದೆರಡು ಗಾಳಿಮರಗಳು ಉರುಳಿ ಬಿದ್ದಿದ್ದವು. ಇದನ್ನೇ ನೆಪ ಮಾಡಿಕೊಂಡು ಗಾಳಿ ಮರಗಳ ಮಾರಣಹೋಮಕ್ಕೆ ಮುಂದಾಗಿದ್ದ ಗುತ್ತಿಗೆದಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.
ಕಡಲ್ಕೊರೆತ ತೀವ್ರಗೊಂಡ ಹಿನ್ನಲೆಯಲ್ಲಿ ಧರೆಗುರುಳಿದ ಮರಣಗಳನ್ನು ಕಡಿಯಲು ಅರಣ್ಯ ಇಲಾಖೆ ಮರ ಕಡಿಯುವವರಿಗೆ ಗುತ್ತಿಗೆ ನೀಡಿತ್ತು.ಆದರೆ ಕಾರ್ಮಿಕರು ಮಾತ್ರ ಸತ್ತ ಮರವನ್ನು ಬಿಟ್ಟು ಸಜೀವ ಮರಗಳನ್ನು ಕಡಿದು ಹಾಕಿದ್ದರು. ಇದಕ್ಕೆ ಸ್ಥಳೀಯರು ತೀವ್ರ ಪ್ರತಿರೋಧ ತೋರಿಸಿದ ಪರಿಣಾಮ ಸ್ಥಳಕ್ಕೆ ಬಂದ ಅರಣ್ಯ ಉಪವಲಯಾಧಿಕಾರಿಗಳು ಮರಗಳನ್ನು ಕಡಿಯದಂತೆ ಕಾರ್ಮಿಕರಿಗೆ ಆದೇಶಿಸಿದ್ದಾರೆ. ಈ ಮೂಲಕ ಮರಗಳ ಮಾರಣಹೋಮವೊಂದು ತಪ್ಪಿದಂತಾಗಿದೆ.
ಉಳ್ಳಾಲದ ಕಡಲು ರಮಣೀಯ ಆದರೆ ಅಷ್ಟೇ ಅಪಾಯಕಾರಿ
ಮಂಗಳವಾರ ಬೆಳಿಗ್ಗೆಯೇ ಸುಮಾರು 8 ಮಂದಿ ಮರಕಡಿಯುವ ಕೂಲಿ ಕಾರ್ಮಿಕರು ಉಳ್ಳಾಲದ ಸೀಗ್ರೌಂಡ್ನ ಕಡಲ ತೀರದಲ್ಲಿ ಯಂತ್ರಗಳ ಸಹಾಯದಿಂದ ಮೂರು ಸಜೀವ ಗಾಳಿ ಮರಗಳನ್ನು ಕಡಿದು ಉರುಳಿಸಿದ್ದಾರೆ. ಇದನ್ನು ಕಂಡ ಸ್ಥಳೀಯ ನಿವಾಸಿಗಳಾದ ರಂಜಿತ್, ದಯಾನಂದ್ ಅವರು ತಮ್ಮ ಸಂಗಡಿಗರೊಂದಿಗೆ ಸೇರಿ ಮರ ಕಡಿಯುವವರಲ್ಲಿ ಏತಕ್ಕಾಗಿ ಮರ ಕಡಿಯಲಾಗುತ್ತಿದೆ ಎಂದು ಪ್ರಶ್ನಿಸಿ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಾರ್ಮಿಕರು ನಮಗೆ ಅರಣ್ಯ ಇಲಾಖೆ ಆದೇಶವಿದೆ ಹಾಗಾಗಿ ತೀರದಲ್ಲಿರುವ ಎಲ್ಲಾ ಮರಗಳನ್ನು ಕಡಿಯಲಾಗುವುದೆಂದು ಉತ್ತರಿಸಿದ್ದು ಅರಣ್ಯ ಉಪವಲಯಾಧಿಕಾರಿ ರವಿಕುಮಾರ್ ಅವರ ಮೊಬೈಲ್ ನಂಬರನ್ನು ಸ್ಥಳೀಯರಿಗೆ ನೀಡಿದ್ದಾರೆ. ರಂಜಿತ್ ಅವರು ಬೆಳಿಗ್ಗೆ 10 ಗಂಟೆ ವೇಳೆಗೆ ರವಿಕುಮಾರ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ಪ್ರತಿಕ್ರಿಯಿಸಿದ ರವಿಕುಮಾರ್ ಅವರು ಸ್ಥಳಕ್ಕೆ ಬರುವುದಾಗಿ ಹೇಳಿದ್ದಾರೆ.
ಉಳ್ಳಾಲ ಕಡಲ್ಕೊರೆತ ತಡೆಗೆ 911 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ
ಹೆಲಿಕಾಪ್ಟರ್ನಿಂದ ಬರಲು ಸಾಧ್ಯವಿಲ್ಲವೆಂದ ಆರ್ಎಫ್ಓ ಶ್ರೀಧರ್
ಅರಣ್ಯ ಉಪವಲಯಾಧಿಕಾರಿ ರವಿಕುಮಾರ್ ಅವರಿಗೆ ಫೋನ್ ಮಾಡಿ ಒಂದು ಗಂಟೆ ಕಳೆದರೂ ಆಗಮಿಸದ ಹಿನ್ನೆಲೆಯಲ್ಲಿ ರಂಜಿತ್ ಅವರು ವಲಯ ಅರಣ್ಯ ಸಂರಕ್ಷಣಾಧಿಕಾರಿ (ಆರ್ಎಫ್ಓ) ಶ್ರೀಧರ್ ಅವರಿಗೆ ಫೋನ್ ಮಾಡಿ ಮರ ಕಡಿಯುತ್ತಿರುವ ಬಗ್ಗೆ ಹೇಳಿದ್ದಾರೆ. ಇದಕ್ಕೆ ಶ್ರೀಧರ್ ಅವರು ಒರಟಾಗಿ ಪ್ರತಿಕ್ರಿಯಿಸಿದ್ದು, ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ ನಿಮ್ಮ ಸಮಸ್ಯೆಗೆ ನಾನೇನು ಖುದ್ದು ಹೆಲಿಕಾಪ್ಟರಲ್ಲಿ ಬಂದು ಪರಿಹಾರ ನೀಡಲಾಗುವುದಿಲ್ಲವೆಂದು ಉಡಾಫೆಯ ಉತ್ತರ ನೀಡಿದ್ದಾರೆಂದು ರಂಜಿತ್ ಆರೋಪಿಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಅಧಿಕಾರಿ ರವಿಕುಮಾರ್ ಅವರನ್ನು ಸ್ಥಳೀಯರು ಆರಂಭದಲ್ಲಿ ತರಾಟೆಗೆ ತೆಗೆದುಕೊಂಡಿದ್ದು, ಮರಗಳನ್ನು ಕಡಿಯುವ ಅನಿವಾರ್ಯತೆ ಏನೆಂದು ಪ್ರಶ್ನಿಸಿದ್ದಾರೆ. ಸಮುದ್ರದಲೆಗೆ ಕೊಚ್ಚಿ ಕೊಂಡು ಹೋಗಿರುವ ಮರಗಳನ್ನು ಮಾತ್ರ ಕಡಿಯಲು ಇಲಾಖೆ ಆದೇಶಿಸಿದೆ ಹೊರತು ಸಜೀವ ಮರಗಳನ್ನು ಕಡಿಯುವಂತಿಲ್ಲ ಎಂದು ಉಪವಲಯಾಧಿಕಾರಿ ರವಿಕುಮಾರ್ ಅವರು ಹೇಳಿದ್ದು, ಮರಕಡಿಯುವ ಕೆಲಸವನ್ನು ತಕ್ಷಣ ಸ್ಥಗಿತಗೊಳಿಸಿದ್ದಾರೆ.
ಅಕ್ರಮವಾಗಿ ಮರಕಡಿದವರ ವಿರುದ್ಧ ಕ್ರಮವೇನು..?
ಇಲಾಖೆಯು ಸಜೀವ ಮರಗಳನ್ನು ಕಡಿಯಲು ಆದೇಶಿಸಿಲ್ಲ ಎಂದು ಅಧಿಕಾರಿಗಳೇ ಸ್ಪಷ್ಟ ಪಡಿಸಿದ್ದು ಅಕ್ರಮವಾಗಿ ನುಗ್ಗಿ ಸಜೀವ ಮರಗಳನ್ನು ಕಡಿದವರ ವಿರುದ್ಧ ಕಾನೂನು ಕ್ರಮವಿಲ್ಲವೇ ಎಂದು ಸ್ಥಳೀಯರು ರವಿಕುಮಾರ್ ಅವರಲ್ಲಿ ಪ್ರಶ್ನಿಸಿದ್ದಾರೆ. ಮರಗಳನ್ನು ಕಡಿಯಲಾದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೊಸ ಗಿಡಗಳನ್ನು ನೆಟ್ಟರಾಯಿತೆಂದು ಉತ್ತರಿಸಿದ ಅಧಿಕಾರಿ ನುಣ್ಣಗೆ ನುನುಚಿಕೊಂಡಿದ್ದಾರೆ.
ಒಟ್ಟಾರೆ ಕಾಡು ಬೆಳೆಸಿ ನಾಡು ಉಳಿಸಿ ಎಂದು ನೀತಿ ಪಾಠ ಹೇಳುತ್ತಿರುವ ಅರಣ್ಯ ಇಲಾಖೆಯೇ ಗೊಂದಲಕ್ಕೊಳಗಾಗಿ ನೂರಾರು ಮರಗಳ ಮಾರಣ ಹೋಮಕ್ಕೆ ಮುಂದಾಗಿದ್ದು ಮಾತ್ರ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಕಾರಣವಾಯಿತು.
"ಗಾಳಿ ಮರಗಳು ತೀವ್ರವಾದ ಕಡಲ್ಕೊರೆತವನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತವೆ. ಈಗಾಗಲೇ ಕಡಲ ತೀರದಲ್ಲಿದ್ದ ನೂರಾರು ಗಾಳಿ ಮರಗಳು ಮರಗಳ್ಳರ ದಾಳಿಗೆ ತುತ್ತಾಗಿ ಅದೃಶವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸಸ್ಯರಾಶಿಗಳ ರಕ್ಷಣೆಗಿರುವ ಅರಣ್ಯ ಇಲಖೆಯೇ ಮರಗಳ ಮಾರಣ ಹೋಮಕ್ಕೆ ಮುಂದಾಗಿರುವುದು ಖಂಡನೀಯ," ಎನ್ನುತ್ತಾರೆ ಸ್ಥಳೀಯರಾದ ರಂಜಿತ್ ಉಳ್ಳಾಲ್.