ಆಗಸ್ಟ್ 1ರಿಂದ ಕುಡ್ಲದಲ್ಲಿ ಮೀನು ಬೇಟೆ ಪುನರಾರಂಭ
ಮಂಗಳೂರು, ಜುಲೈ 31 : ಎರಡು ತಿಂಗಳ ದೀರ್ಘ ವಿಶ್ರಾಂತಿಯಲ್ಲಿದ್ದ ಮೀನುಗಾರಿಕೆ ದೋಣಿಗಳು ನಾಳೆಯಿಂದ (ಆಗಸ್ಟ್ 1 )ಸಮುದ್ರಕ್ಕೆ ಇಳಿಯಲಿವೆ.
ಕರಾವಳಿಯಲ್ಲಿ ಟ್ರಾಲ್ ಮತ್ತು ಪರ್ಸಿನ್ ದೋಣಿಗಳನ್ನು ಬಳಸಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿ ಆದೇಶದ ಅವಧಿ ಇಂದಿಗೆ ಪೂರ್ಣಗೊಳ್ಳಲಿದ್ದು, 61 ದಿನಗಳ ಬಳಿಕ ಹುಮ್ಮಸ್ಸಿನೊಂದಿಗೆ ಆಗಸ್ಟ್ 1ರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಟ್ರಾಲ್ ದೋಣಿಗಳಿದ್ದು, ಮೀನುಗಾರಿಕಾ ಬಲೆ, ಮಂಜುಗೆಡ್ಡೆ, ಆಹಾರ ವಸ್ತು ಸೇರಿದಂತೆ ವಿವಿಧ ಪರಿಕಗಳೊಂದಿಗೆ ಭಾರಿ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯಲು ತಯಾರಿ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2015-16ರಲ್ಲಿ 1,51,458 ಟನ್ ಮತ್ತು 2016 -17ನೇ ಸಾಲಿನಲ್ಲಿ 1,52,573 ಟನ್ ಮೀನಿನ ಇಳುವರಿ ದೊರಕಿತ್ತು. ಉಡುಪಿ ಜಿಲ್ಲೆಯಲ್ಲಿ 2015-16ರಲ್ಲಿ 1,51,099ಟನ್ ಮೀನು ಲಭ್ಯವಾಗಿತ್ತು. ಆದರೆ, 2016-2017ರಲ್ಲಿ ಇಳುವರಿ ಪ್ರಮಾಣ 1,44,525 ಟನ್ ಗೆ ಕುಸಿದಿತ್ತು.
ಕಳೆದ ಬಾರಿಗಿಂತ ಕರಾವಳಿಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಸಮುದ್ರದಲ್ಲಿ ವಾತಾವರಣ ಬಹುತೇಕ ತಿಳಿಯಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಹುಮ್ಮಸ್ಸಿನಲ್ಲಿರುವ ಮೀನುಗಾರರು ಉತ್ತಮ ಇಳುವರಿಯ ಆಶಾಭಾವ ಹೊಂದಿದ್ದಾರೆ.
ನಾಡ ದೋಣಿಗಳಿಗೆ ನಿರಾಶೆ: ಕರಾವಳಿ ಸೇರಿದಂತೆ ರಾಜ್ಯದ ಪ್ರಮುಖ ಬಂದರುಗಳಲ್ಲಿ ಹೆಚ್ಚಾಗಿ ಯಾಂತ್ರಿಕೃತ ದೋಣಿಗಳನ್ನು ಸಾಕಷ್ಟು ಮೀನುಗಾರಿಕೆಯಲ್ಲಿ ತೊಡಗುವ ಮೂಲಕ ಬಹುಪಾಲು ಸ್ಥಾನವನ್ನು ಅವು ಕಸಿದುಕೊಳ್ಳುತ್ತದೆ. ಆದರೆ ನಾಡ ದೋಣಿಗಳಿಗೆ ಈ ಬಾರಿ ಹೇಳಿಕೊಳ್ಳುವಂತಹ ಮೀನು ಸಿಕ್ಕಿಲ್ಲ.
ಎರಡು ತಿಂಗಳ ನಿಷೇಧ ಅವಧಿಯಲ್ಲಿ ನಾಡ ದೋಣಿಗಳಿಗೆ ಜು.23ರ ವರೆಗೆ ತೂಫಾನ್ ಕಾಣಿಸಿಕೊಂಡಿತ್ತು. ಈ ಬಳಿಕ ನಾಡದೋಣಿ ಮೀನುಗಾರಿಕೆ ಆರಂಭವಾಯಿತು. ಮತ್ತೆ ಜೂನ್ 12ರಿಂದ 24ರ ವರೆಗೆ ತೂಫಾನ್ ಕಾಣಿಸಿಕೊಂಡಿದೆ. ಇದರಿಂದ ಈ ವರ್ಷ ನಾಡದೋಣಿ ಮೀನುಗಾರಿಕೆಯಲ್ಲಿ ನಷ್ಟವೇ ಜಾಸ್ತಿಯಾಗಿದೆ.
ಈಗ ಯಾಂತ್ರೀಕೃತವಾದ ಬೋಟ್ ಗಳಿರುವುದರಿಂದ ಆಗಸ್ಟ್ ಆರಂಭದಲ್ಲಿಯೇ ಮೀನುಗಾರಿಕೆಗೆ ಇಳಿಯುತ್ತಾರೆ. ಆದರೆ, ಈ ಹಿಂದೆ ಸಮುದ್ರ ಪೂಜೆಯ ನಂತರ ಮೀನುಗಾರಿಕೆ ಮಾಡುವುದು ಸಾಮಾನ್ಯವಾಗಿತ್ತು.
ಈಗ ಕಾಲ ಬದಲಾದಂತೆ ಮೀನುಗಾರಿಕೆ ವೃತ್ತಿಯ ಜತೆಯಲ್ಲಿ ಉದ್ಯಮವಾಗಿ ಬದಲಾಗಿದೆ ಎನ್ನುವುದು ಮೀನುಗಾರಿಕೆಯಲ್ಲಿ ಹಲುವ ವರ್ಷಗಳಿಂದ ತೊಡಗಿಸಿಕೊಂಡಿರುವ ಸತೀಶ್ ಅವರ ಮಾತು.












Click it and Unblock the Notifications