Explain: ಫಾಜಿಲ್ ಮಂಗಲಪೇಟೆ ಹತ್ಯೆಗೂ ಮೊದಲು ಮತ್ತು ನಂತರ?
ಮಂಗಳೂರು, ಜುಲೈ 29: ದಕ್ಷಿಣ ಕನ್ನಡದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ಕರಾವಳಿಯಲ್ಲಿ ಹರಿಯುತ್ತಿರುವ ನೆತ್ತರು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವಂತಿದೆ. ಎರಡೇ ದಿನಗಳ ಅಂತರದಲ್ಲಿ ಎರಡು ಹತ್ಯೆಗಳು ನಡೆದಿವೆ.
ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಕಠಿಣ ಕ್ರಮದ ಹೇಳಿಕೆ ನೀಡುತ್ತಿದ್ದರೆ ಇನ್ನೊಂದು ದಿಕ್ಕಿನಲ್ಲಿ ಹತ್ಯೆಕಾಂತ ನಿರಂತರವಾಗಿ ಸಾಗಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಫಾಜಿಲ್ ಮಂಗಲಪೇಟೆ ಎಂಬಾತನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸುರತ್ಕಲ್ನಲ್ಲಿ ಯುವಕನ ಕೊಲೆ: ನಿಷೇಧಾಜ್ಞೆ ಜಾರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಮಂಗಳೂರಿನ ಹೊರವಲಯದಲ್ಲಿ ಇರುವ ಸುರತ್ಕಲ್ನಲ್ಲಿ ದುಷ್ಕರ್ಮಿಗಳು ಫಾಜಿಲ್ ಮಂಗಲಪೇಟೆ ಮೇಲೆ ದಾಳಿ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಫಾಜಿಲ್ ಅನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದು, ತದನಂತರದಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ಫಾಜಿಲ್ ಮೃತದೇಹ ಕುಟುಂಬ ಸದಸ್ಯರಿಗೆ ಹಸ್ತಾಂತರ
ಮಂಗಳೂರಿನ ಆಸ್ಪತ್ರೆಯಲ್ಲಿ ಫಾಜಿಲ್ ಮಂಗಲಪೇಟೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ಸುರತ್ಕಲ್ ಸಮೀಪದ ಕಾಟಿಪಳ್ಳ ಮಂಗಲಪೇಟೆಯಲ್ಲಿ ಇರುವ ದಫನ್ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೂ ಪೂರ್ವದಲ್ಲಿ ಮಂಗಲಪೇಟೆಯಲ್ಲಿರುವ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಫಾಜೀಲ್ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ತದನಂತರದಲ್ಲಿ ಮೆರವಣಿಗೆ ಮೂಲಕ ದಫನ್ ಭೂಮಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ.
ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸದಂತೆ ಮುಖಂಡರಲ್ಲಿ ಮನವಿ
ಫಾಜಿಲ್ ಮಂಗಲಪೇಟೆ ಹತ್ಯೆ ಬೆನ್ನಲ್ಲೇ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪಣಂಬೂರು, ಬಜ್ಪೆ, ಮುಲ್ಕಿ ಮತ್ತು ಸುರತ್ಕಲ್ ಪ್ರದೇಶಗಳಲ್ಲಿ ಸೆಕ್ಷನ್ 144 ಘೋಷಿಸಲಾಗಿದ್ದು, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಬೇಡ ಎಂದು ಮುಸ್ಲಿಂ ಮುಖಂಡರಲ್ಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ನಿಷೇಧಾಜ್ಞೆಯಿಲ್ಲದ ಪ್ರದೇಶಗಳಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಅವಕಾಶ ನೀಡಿದ್ದು, ನಿಷೇಧಾಜ್ಞೆ ಜಾರಿಗೊಳಿಸಿದ ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ವಿನಂತಿ ಮಾಡಿಕೊಳ್ಳಲಾಗಿದೆ.
ಮದ್ಯದಂಗಡಿ ಬಂದ್, 19 ಚೆಕ್ಪೋಸ್ಟ್ಗಳ ಸ್ಥಾಪನೆ
ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ನಿಷೇಧಾಜ್ಞೆ ಜಾರಿಗೊಳಿಸಿರುವ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿ 19 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್ ವಹಿಸಲಾಗಿದೆ. ಇನ್ನು ಫಾಜಿಲ್ ಮಂಗಲಪೇಟೆ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ರೀತಿ ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಫಾಜಿಲ್ ಕೊಲೆ ಪ್ರಕರಣದ ಹಿನ್ನೆಲೆ
ಕಳೆದ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಪಟ್ಟಣದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಈ ಘಟನೆಯ ಕಪ್ಪುಛಾಯೆ ಮಾಸುವ ಮೊದಲೇ ಜುಲೈ 28ರ ರಾತ್ರಿ 8 ಗಂಟೆ ಸುಮಾರಿಗೆ ಫಾಜಿಲ್ ಮಂಗಲಪೇಟೆ ಹತ್ಯೆ ನಡೆದಿದೆ. ಮಂಗಳೂರು ಹೊರವಲಯದಲ್ಲಿ ಇರುವ ಸುರತ್ಕಲ್ ಪ್ರದೇಶದ ಬಟ್ಟೆ ಅಂಗಡಿಗೆ ತೆರಳಿದ ವೇಳೆ ಫಾಜಿಲ್ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿತು. ಮಾರಕಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳು ನೋಡನೋಡುತ್ತಿದ್ದಂತೆ ಮಚ್ಚು, ಲಾಂಗ್ ನಿಂದ ಫಾಜಿಲ್ ಮೇಲೆ ಹಲ್ಲೆ ನಡೆಸಿದರು. ಬಟ್ಟೆ ಅಂಗಡಿ ಎದುರು ನೆತ್ತರ ಮಡುವಿನಲ್ಲಿ ಬಿದ್ದ ಫಾಜಿಲ್ ಸ್ಥಳದಲ್ಲಿ ಮೃತಪಟ್ಟರು.
{document1}
Recommended Video