ವಿಡಿಯೋ: ತಾಯಿಯನ್ನು ಬೆಂಚ್ಗೆ ಕಟ್ಟಿ ಆಸ್ಪತ್ರೆಗೆ ಸಾಗಿಸಿದ ತಂದೆ- ಮಗ: ರಸ್ತೆಯಿಲ್ಲದೇ ಪ್ರಾಣಬಿಟ್ಟ ಮಹಿಳೆ
ಮಂಗಳೂರು, ಸೆಪ್ಟೆಂಬರ್ 7: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಹಳ್ಳಿಗಳೇ ಭಾರತದ ಭವಿಷ್ಯ ಅಂತಾ ಜನಪ್ರತಿನಿಧಿಗಳು ಉದ್ದುದ್ದ ಭಾಷಣ ಬಿಗಿಯುತ್ತಾರೆ. ಆದರೆ ಹಳ್ಳಿಗಳ ಸ್ಥಿತಿ ಮಾತ್ರ ನಿಜಕ್ಕೂ ನರಕಮಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೆರೆಹಿತ್ತಿಲು ಗ್ರಾಮದ ಮನೆಗೆ ರಸ್ತೆ ಸಂಪರ್ಕ ಇಲ್ಲದೇ ಮಹಿಳೆಯೋರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೆರೆ ಹಿತ್ತಿಲುನಲ್ಲಿ ಘಟನೆ ನಡೆದಿದ್ದು, ಕೆರೆಹಿತ್ತಿಲು ನಿವಾಸಿ ಪೂವಣಿ ಗೌಡರ ಪತ್ನಿ ಕಮಲ ಮೃತ ಮಹಿಳೆಯಾಗಿದ್ದಾರೆ. ಕೆರೆಹಿತ್ತಿಲು ನಿವಾಸಿ ಪೂವಣಿ ಗೌಡರ ಮನೆಗೆ ಕಳೆದ 40 ವರ್ಷಗಳಿಂದ ರಸ್ತೆ ಸಂಪರ್ಕವಿಲ್ಲ. ಸ್ಥಳೀಯ ವ್ಯಕ್ತಿಯೊಬ್ಬರು ಖಾಸಗಿ ತೋಟದಲ್ಲಿ ನಡೆದುಕೊಂಡು ಹೋಗುವುದಕ್ಕೆ ಕಾಲುದಾರಿಯನ್ನು ಬಿಟ್ಟುಕೊಟ್ಟಿದ್ದಾರೆ.
ಪೂವಣಿಗೌಡರ ಮನೆಯಿಂದ ರಸ್ತೆಗೆ ಕೇವಲ 300 ಮೀಟರ್ ಅಂತರವಿದೆ. ಆದರೆ ವೈಯುಕ್ತಿಕ ಕಾರಣದಿಂದ ಮನಸ್ತಾಪ ಹೊಂದಿದ್ದು, ಈಗ ನಡೆದುಕೊಂಡು ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಕ್ಷರಶಃ ದಿಗ್ಬಂಧನ ಹಾಕಿದ ಸ್ಥಿತಿಯಲ್ಲಿದೆ ಪೂವಣಿ ಗೌಡರ ಕುಟುಂಬ.
|
ಎತ್ತಿಕೊಂಡೇ ಹೋಗಿ ಮುಖ್ಯರಸ್ತೆ ತಲುಪಿದರು
ಪೂವಣಿ ಗೌಡರ ಪತ್ನಿ ಕಮಲಾಗೆ ಕಳೆದ ಹಲವು ಸಮಯಗಳಿಂದ ಅನಾರೋಗ್ಯ ಕಾಡುತ್ತಿದೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದಾರೆ. ನಡೆಯಲೂ ಅಸಾಧ್ಯವಾಗಿರುವುದರಿಂದ ಪೂವಣಿ ಗೌಡ ಮತ್ತು ಅವರ ಮಗ ಹೊನ್ನಪ್ಪ ಗೌಡ ತಾಯಿಯನ್ನು ಬೆಂಚ್ಗೆ ಕಟ್ಟಿ, ಎತ್ತಿಕೊಂಡೇ ಹೋಗಿ ಮುಖ್ಯರಸ್ತೆ ತಲುಪಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವಾಗಲೇ ಮೃತ
ಆದರೆ ಕಳೆದ ಕೆಲ ದಿನಗಳ ಹಿಂದೆ ರಾತ್ರಿ ವೇಳೆ ಕಮಲ ಆರೋಗ್ಯ ಪರಿಸ್ಥಿತಿ ತೀವ್ರ ಹದೆಗಟ್ಟಿದ್ದು, ಭಾರೀ ಮಳೆಯೂ ಸುರಿಯುತ್ತಿದ್ದರಿಂದ ತಂದೆ, ಮಗ ಮತ್ತೆ ತಾಯಿಯನ್ನು ಬೆಂಚ್ಗೆ ಕಟ್ಟಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಭಾರೀ ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ಬೆಳಗ್ಗಿನವರೆಗೆ ಕಾದಿದ್ದಾರೆ. ಮುಂಜಾನೆ ಚಿಂತಾಜನಕ ಸ್ಥಿತಿಯಲ್ಲಿದ್ದ ಕಮಲರನ್ನು ಮತ್ತೆ ಬೆಂಚ್ಗೆ ಕಟ್ಟಿ ಬೇಗ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವಾಗಲೇ ಕಮಲ ಬದುಕುವ ಸಾಧ್ಯತೆ ಕ್ಷೀಣಿಸಿದೆ. ಬಹು ಅಂಗಾಂಗ ವೈಫಲ್ಯದಿಂದ ಕಮಲ ಮೃತರಾಗಿದ್ದಾರೆ.

ಬೆಂಚ್ಗೆ ಕಟ್ಟಿ ಎತ್ತಿಕೊಂಡು ಹೋಗುವುದು ನೋಡಲು ಅಸಾಧ್ಯ
ತಾಯಿಯನ್ನು ತಂದೆ- ಮಗ ಹೊತ್ತುಕೊಂಡು ಹೋಗುವ ವಿಡಿಯೋವನ್ನು ಸ್ಥಳೀಯ ಮನೆಯವರು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ ಸೌಮ್ಯ, "ಹಲವು ತಿಂಗಳುಗಳಿಂದ ಪೂವಣಿ ಗೌಡರ ಕುಟುಂಬ ತುಂಬಾ ಕಷ್ಟವನ್ನು ಅನುಭವಿಸಿದೆ. ಕಮಲರಿಗೆ ಹುಷಾರಿಲ್ಲದೇ ಆದಾಗ ತಂದೆ- ಮಗ ಇಬ್ಬರೂ ಅವರನ್ನು ಬೆಂಚ್ಗೆ ಕಟ್ಟಿ ಎತ್ತಿಕೊಂಡು ಹೋಗುವುದು ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಸಾಧ್ಯವಾಗದ ಹಿನ್ನಲೆಯಲ್ಲಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ," ಅಂತಾ ಹೇಳಿದ್ದಾರೆ.

ಆಟೋ ಬರುವಷ್ಟಾದರೂ ರಸ್ತೆ ನಿರ್ಮಿಸಿ ಕೊಡಿ
ಪೂವಣಿ ಗೌಡ ಸೇರಿದಂತೆ ಹಲವು ಮನೆಗಳಿಗೆ ರಸ್ತೆ ಸಂಪರ್ಕ ಇಲ್ಲ. ಸ್ಥಳೀಯ ವ್ಯಕ್ತಿಯೋರ್ವನ ಖಾಸಗಿ ಭೂಮಿ ಮಧ್ಯದಲ್ಲಿ ಇರುವುದರಿಂದ ಕೇವಲ ಕಾಲುದಾರಿಯಲ್ಲಿ ಮಾತ್ರ ಇವರು ಸಾಗಬೇಕಿದೆ. ಕನಿಷ್ಠ ಆಟೋ ಬರುವಷ್ಟಾದರೂ ರಸ್ತೆ ನಿರ್ಮಿಸಿ ಕೊಡಿ ಅಂತಾ ಪೂವಣಿ ಗೌಡ ಕುಟುಂಬ ಕೊಯ್ಯೂರು ಗ್ರಾಮ ಪಂಚಾಯತ್ಗೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಮನವಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ಬಡವನ ಕೋಪ ದವಡೆಗೆ ಮೂಲ ಎಂಬಂತೆ ಮನವಿ ಕಾಗದಗಳು ಕ್ಷಣಮಾರ್ಧದಲ್ಲೇ ಕಸದ ಬುಟ್ಟಿಗೆ ಸೇರಿದೆ. ಆದರೆ ಇದೀಗ ಬಡ ಕುಟುಂಬದ ತಾಯಿ ಮಾಡದ ತಪ್ಪಿಗೆ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುವಂತೆ ಆಗಿದೆ.
ಒಟ್ಟಿನಲ್ಲಿ ಧನ ಬಲವಿಲ್ಲದ ಅಮಾಯಕ ಕುಟುಂಬ ತನ್ನ ಮೂಲಭೂತ ಹಕ್ಕನ್ನು ಪಡೆಯಲಾಗದೆ, ಒಂದು ಜೀವವನ್ನು ಕಳೆದುಕೊಂಡಿದೆ. ಇನ್ನಾದರೂ ಸರ್ಕಾರ, ಅಧಿಕಾರಿಗಳು ಬಡವರ ಕಷ್ಟಗಳಿಗೆ ಸ್ಪಂದನೆ ನೀಡಬೇಕಾಗಿದೆ.












Click it and Unblock the Notifications