ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ನೀತಿ ಸಂಹಿತೆ ಅಡ್ಡಿ
ಮಂಗಳೂರು, ಮಾರ್ಚ್ 11: ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಅಬ್ಬರದ ಚುನಾವಣೆಯಲ್ಲಿ ಪ್ರಚಾರ ರಾಜಕೀಯ ಪಕ್ಷಗಳು ಈಗಾಗಲೇ ಆರಂಭಿಸಿವೆ. ಮುಂಬರುವ ದಿನಗಳಲ್ಲಿ ಈ ಪ್ರಚಾರ ಮತ್ತಷ್ಟು ರಂಗೇರಲಿದೆ. ಈ ಮಧ್ಯೆ ಚುನಾವಣೆ ಆಯೋಗ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಕಡಿವಾಣ ಹಾಕಿದೆ.
ಇದೀಗ ಫೇಸ್ ಬುಕ್, ವಾಟ್ಸಾಪ್ , ಟ್ವಿಟ್ಟರ್ ಮೂಲಕ ಪ್ರಚಾರ ಮಾಡುವ ಆಲೋಚನೆ ಮಾಡಿದವರಿಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗೂ ಚುನಾವಣಾ ಆಯೋಗ ವಿಧಿಸಿರುವ ಖರ್ಚಿನ ಮಿತಿಯಲ್ಲಿ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಮಾಡಿರುವ ಪ್ರಚಾರದ ವೆಚ್ಚವು ಸೇರಲಿದೆ.
ಅಭ್ಯರ್ಥಿ ತಾನು ಪ್ರಚಾರ ಮಾಡುವ ಬಗ್ಗೆ ಮೊದಲೇ ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಳ್ಳಬೇಕಾಗಿದೆ. ಒಂದು ವೇಳೆ ಅದನ್ನು ಮೀರಿ ಬೇರೆ ವಾಟ್ಸಾಪ್ ಗ್ರೂಪ್, ಫೇಸ್ ಬುಕ್ ನಲ್ಲಿ ಪ್ರಚಾರ ಆರಂಭಿಸಿದರೆ ಆಯೋಗ ಕ್ರಮ ತೆಗೆದುಕೊಳ್ಳಲಿದೆ.

ಈ ಮಧ್ಯೆ ಕರಾವಳಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನವನ್ನು ಮೊದಲಿನಂತೆ ಸರಾಗವಾಗಿ ಮಾಡಲು ಸಾಧ್ಯವಿಲ್ಲ ಎಂಬಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನವನ್ನು ಚುನಾವಣೆ ಸಂದರ್ಭದಲ್ಲಿ ಮಾಡುವುದಿದ್ದರೆ ಚುನಾವಣೆ ಆಯೋಗದ ಅನುಮತಿಯನ್ನು ಪಡೆಯುವಂತೆ ದಕ್ಷಿಣ ಕನ್ನಡ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಯಕ್ಷಗಾನ ಪ್ರದರ್ಶನವನ್ನು ಒಬ್ಬೊಬ್ಬರ ಪ್ರಾಯೋಜಕತ್ವದಲ್ಲಿ ನಡೆಯುವ ಯಕ್ಷಗಾನ ಆಗಿರುವುದರಿಂದ ಪ್ರಾಯೋಜಕತ್ವ ಮಾಡುವ ಕೆಲವರಲ್ಲಿ ರಾಜಕೀಯ ನಂಟು ಇರುತ್ತದೆ. ಚುನಾವಣೆ ಸಂದರ್ಭದಲ್ಲಿ ನಡೆಯುವ ಯಕ್ಷಗಾನದ ವೇಳೆ ಊಟ ಕೊಡಿಸಿ, ನಮಗೆ ಮತ ನೀಡಿ ಎಂದರೆ ಅಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ.
ಆ ಕಾರಣಕ್ಕೆ ಯಕ್ಷಗಾನ ಮಾಡುವುದಿದ್ದರೆ ಚುನಾವಣಾ ಆಯೋಗದಿಂದ ಅಗತ್ಯ ಅನುಮತಿಯನ್ನು ಪಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications