ಪಿಲಿಕುಳ ನಿಸರ್ಗಧಾಮಕ್ಕೆ ಬಂದ ಪರಿಸರ ಸ್ನೇಹಿ ಗಣಪ
ಮಂಗಳೂರು, ಜುಲೈ 20 : ಪಿಲಿಕುಳ ನಿಸರ್ಗಧಾಮ ಇದೇ ಮೊದಲ ಬಾರಿಗೆ ಪರಿಸರ ಸ್ನೇಹಿ ಗಣಪತಿಮೂರ್ತಿಗಳನ್ನು ಜನರಿಗೆ ನೀಡಲಿದೆ. 1 ರಿಂದ 2 ಅಡಿ ಎತ್ತರದ ಮಣ್ಣಿನ ಬಣ್ಣ ರಹಿತ ಗಣೇಶ ಮೂರ್ತಿಗಳ ನಿರ್ಮಾಣ ಕಾರ್ಯ ನಿಸರ್ಗಧಾಮದಲ್ಲಿ ಆರಂಭವಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಆವೆ ಮಣ್ಣಿನ ಬಣ್ಣ ರಹಿತ ಮೂರ್ತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಾದರಿ ಮೂರ್ತಿಗಳನ್ನು ಕದ್ರಿ ಮಲ್ಲಿಕಟ್ಟೆಯಲ್ಲಿರುವ ಪಿಲಿಕುಳದ ಪರಂಪರಾದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಪರಿಸರ ಸ್ನೇಹಿ ಗಣೇಶನ ಮೂರ್ತಿ ಬೇಕಾದವರು ಅಲ್ಲಿಯೇ ಜುಲೈ 31ರೊಳಗೆ ನಿಗದಿತ ಶುಲ್ಕ ನೀಡಿ ಮೂರ್ತಿ ಪಡೆಯಲು ಹೆಸರು ನೋಂದಾಯಿಸಿಕೊಳ್ಳಬಹುದು. ಇದೇ ಮೊದಲ ಬಾರಿ ನಿಸರ್ಗಧಾಮ ಇಂತಹ ಪ್ರಯೋಗಕ್ಕೆ ಮುಂದಾಗಿದೆ ಎಂದು ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ ಶರ್ಮ ಹೇಳಿದ್ದಾರೆ. [ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ]
ನಿಸರ್ಗಧಾಮದಲ್ಲಿ ಹಲವಾರು ವರ್ಷಗಳಿಂದ ಆವೆ ಮಣ್ಣಿನ ಕಲಾಕೃತಿಗಳನ್ನು ನಿರ್ಮಾಣ ಮಾಡುತ್ತಿರುವ ರುಕ್ಕವ್ವ ಮಲ್ಲಪ್ಪ ದಾಸರ ಎಂಬ ಕಲಾವಿದೆ ಗಣೇಶನಮೂರ್ತಿಗಳನ್ನು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬರೇ ಕಲಾವಿದರು ಈ ಕಾರ್ಯದಲ್ಲಿ ತೊಡಗಿದ್ದು ಸುಮಾರು 100 ಮೂರ್ತಿಗಳನ್ನು ಮಾಡಬಹುದು ಎಂದು ಅಂದಾಜಿಸಲಾಗಿದೆ.
ಈ ಬಾರಿ ಜನರಿಂದ ಪರಿಸರ ಸ್ನೇಹಿ ಗಣೇಶನಿಗೆ ಹೆಚ್ಚು ಬೇಡಿಕೆ ಬಂದರೆ ಮುಂದಿನ ವರ್ಷದಿಂದ ಮತ್ತಷ್ಟು ಕಲಾವಿದರನ್ನು ಬಳಸಿಕೊಂಡು ಮೂರ್ತಿಗಳನ್ನು ನಿರ್ಮಾಣ ಮಾಡಲು ನಿಸರ್ಗಧಾಮ ಮುಂದಾಗಿದೆ. ಅಂದಹಾಗೆ ಸೆಪ್ಟಂಬರ್ 17ರ ಗುರುವಾರ ಈ ಬಾರಿ ಗಣೇಶ ಚತುರ್ಥಿ ಹಬ್ಬವಿದೆ.












Click it and Unblock the Notifications