3ನೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ ಬಿಟ್ಟು ಕೊಡದ ಕೇಂದ್ರ ಸಚಿವ ರಾಜನಾಥ್ ಸಿಂಗ್!
ಮಂಗಳೂರು, ಮಾರ್ಚ್ 09: ಪುಲ್ವಾಮಾ ದುರಂತದ ಬಳಿಕ ನಮ್ಮ ಸೇನೆ ಪ್ರತಿದಾಳಿ ನಡೆಸಿದೆ. ಪಾಕಿಸ್ತಾನದ ನೆಲದಲ್ಲಿ ಅಡಗಿದ್ದ ಉಗ್ರರನ್ನು ಬೇಟೆಯಾಡುವ ಪ್ರಯತ್ನ ನಡೆಸಿದ್ದು,
ಪಾಕಿಸ್ತಾನದ ಎಫ್ -16 ಜೆಟ್ ಹೊಡೆದುರುಳಿಸಿದ ವಾಯುಸೇನೆಗೆ ಅಭಿನಂದಿಸುತ್ತೇನೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಇಂದು ಶನಿವಾರ (ಮಾ.09) ಆಯೋಜಿಸಲಾಗಿದ್ದ ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಪಣ ತೊಟ್ಟಿದೆ. ಭಯೋತ್ಪಾದಕ ಪಾತಾಳದಲ್ಲಿ ಅಡಗಿದ್ರೂ ಹೊಡೆದು ಹಾಕೋ ತಾಕತ್ತಿದೆ ಎಂದರು.
ಮೂರನೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದ ಸಚಿವ ರಾಜನಾಥ್ ಸಿಂಗ್, ಉರಿ ಹಾಗೂ ಪುಲ್ವಾಮಾದಲ್ಲಿ ಉಗ್ರರ ದಾಳಿ ಬಳಿಕ 2 ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಅದನ್ನು ಹೊರತುಪಡಿಸಿದರೆ ಮೂರನೇ ಸರ್ಜಿಕಲ್ ಸ್ಟ್ರೈಕ್ ಭಾರತೀಯ ಸೇನೆ ನಡೆಸಿದೆ. ಆದರೆ ಆ ಮೂರನೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡಲಾಗುವುದಿಲ್ಲ ಎಂದು ಸಚಿವರು ತಿಳಿಸಿದರು.

ನಾವು ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಲು ಬಯಸುತ್ತೇವೆ. ಭಾರತವನ್ನು ಸೂಪರ್ ಪವರ್ ಮಾತ್ರವಲ್ಲ, ವಿಶ್ವಗುರುವಿನ ಸ್ಥಾನದಲ್ಲಿ ನೋಡ ಬಯಸುತ್ತೇವೆ. ನಮಗೆ ಎಲ್ಲಾ ಧರ್ಮೀಯರು ಸಮಾನರಾಗಿದ್ದು, ಯಾವುದೇ ಬೇಧಭಾವವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಪಾಕಿಸ್ತಾನದ ಮೇಲೆ ದಾಳಿ ಬಳಿಕವೂ ವಿದೇಶಾಂಗ ಸಚಿವೆಯನ್ನು ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಆಪರೇಶನ್ ಸ್ವಾಗತಿಸಿದೆ ಎಂದ ರಾಜನಾಥ್ ಸಿಂಗ್, ಕೇಂದ್ರ ಸರ್ಕಾರದಿಂದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಲಾಗುವುದು. ಎಲ್ಲಾ ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿಯಾಗದಂತೆ ಬಿಜೆಪಿ ಕಾರ್ಯಕರ್ತರು ರಕ್ಷಣೆಗೆ ಮುಂದಾಗಬೇಕು ಎಂದು ಕರೆ ಕೊಟ್ಟರು.

ಅಷ್ಟೇ ಅಲ್ಲದೇ, ಕರ್ನಾಟಕದಲ್ಲಿ 28 ಸೀಟುಗಳಿದ್ದು, 22 ಸೀಟುಗಳನ್ನು ನಮ್ಮದಾಗಿಸಿಕೊಳ್ಳಲು ಎಲ್ಲಾ ಕಾರ್ಯಕರ್ತರು ಪ್ರಯತ್ನಪಡಬೇಕು ಎಂದು ರಾಜನಾಥ್ ಸಿಂಗ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಸಮಾವೇಶದಲ್ಲಿ ಪುಲ್ವಾಮಾ ದುರಂತದಲ್ಲಿ ಮಡಿದ ಮಂಡ್ಯದ ಯೋಧ ಗುರುವಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.











Click it and Unblock the Notifications