ಪಟ್ಟಾಭಿಷೇಕದ ಸುವರ್ಣ ಸಂಭ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಹೆಗ್ಗಡೆ
ಮಂಗಳೂರು, ಅಕ್ಟೋಬರ್ 23: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸ್ವರ್ಗವೇ ಧರೆಗಿಳಿದು ಬಂದಂತೆ ಸಿಂಗಾರಗೊಂಡಿದೆ ಕುಡುಮಕ್ಷೇತ್ರ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ 50ನೇ ಪಟ್ಟಾಭಿಷೇಕ ವರ್ಧಂತ್ಯೋತ್ಸವದ ನಾಳೆ ಅಂದರೆ ಅಕ್ಟೋಬರ್ 24ರಂದು ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ದ ಹೆಸರನ್ನು ಜಗತ್ ವಿಖ್ಯಾತಿಗೊಳಿಸಿದ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರು. ಧರ್ಮಾಧಿಕಾರಿಯಾಗಿ ಪಟ್ಟಾಭಿಷಕ್ತರಾಗಿ ಅವರಿಗೀಗ ಸುವರ್ಣ ಸಂಭ್ರಮ. ನಾಳೆ ಶ್ರೀ ಕ್ಷೇತ್ರದಲ್ಲಿ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ನಾಡಿನ ಗಣ್ಯರು, ಹೆಗ್ಗಡೆ ಅಭಿಮಾನಿಗಳು ಶುಭಾಶಯ ಕೋರಲಿದ್ದಾರೆ.

ದೇವಸ್ಥಾನದಲ್ಲಿ ವಿಶೇಷ ಪೂಜೆ
ನಾಳೆ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮತ್ತು ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ನಾಡಿನ ಗಣ್ಯರು ವಿವಿಧ ಕ್ಷೇತ್ರದ ಸಾಧಕರು ಹೆಗ್ಗಡೆಯವರನ್ನು ಫಲಪುಷ್ಪ ನೀಡಿ ಗೌರವಿಸಲಿದ್ದಾರೆ.
ಶ್ರೀ ಕ್ಷೇತ್ರದ ಚಂದ್ರನಾಥಸ್ವಾಮಿ ಬಸದಿಯಲ್ಲಿ ನಾಳೆ ವಿರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ. ನಂತರ ಧರ್ಮಸ್ಥಳ ಗ್ರಾಮಸ್ಥರು ವಿಶೇಷ ಅಲಂಕೃತ ವಾಹನದ ಮೂಲಕ ಹೆಗ್ಗಡೆಯವರ ಮೆರವಣಿಗೆ ನಡೆಸಲಿದ್ದಾರೆ. ಮೆರವಣಿಗೆ ವೇಳೆ ನಾನಾ ಪ್ರಕಾರದ ಕಲಾ ಪ್ರದರ್ಶನಗಳೂ ನಡೆಯಲಿವೆ.

ಮೈಸೂರು ಮಹಾರಾಜ ಉಪಸ್ಥಿತಿ
ಮೆರವಣಿಗೆಯ ನಂತರ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗ್ಗಡೆಯವರು ಹೊಸ ಯೋಜನೆಗಳು ಘೋಷಿಸುವ ಸಾಧ್ಯತೆಗಳಿವೆ.

20ನೇ ವರ್ಷಕ್ಕೆ ಪಟ್ಟಾಭಿಷಿಕ್ತರಾಗಿದ್ದ ಹೆಗ್ಗಡೆ
ತಮ್ಮ 20ನೇ ವರ್ಷದಲ್ಲಿ ಧರ್ಮಾಧಿಕಾರಿಯಾಗಿ ಪಟ್ಟಾಭಿಷಕ್ತರಾದ ಡಾ.ಡಿ .ವೀರೇಂದ್ರ ಹೆಗ್ಗಡೆ ಯವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಹಾಗಾಗಿ 50 ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ವಿರೇಂದ್ರ ಹೆಗ್ಗಡೆಯವರ ಸಾವಿರಾರು ಅಭಿಮಾನಿಗಳು ಸೇರುವ ನೀರಿಕ್ಷೆಗಳಿವೆ. ಸಮಾಜದ ಎಲ್ಲಾ ಸ್ತರಗಳಿಲ್ಲೂ ಅಪಾರ ಅಭಿಮಾನಿಗಳನ್ನು ಡಾ.ವೀರೇಂದ್ರ ಹೆಗ್ಗಡೆ ಅವರು ಹೊಂದಿದ್ದಾರೆ. ಹಾಗಾಗಿಯೇ ವಿದ್ವಾಂಸರು, ಚಿಂತಕರು, ಧಾರ್ಮಿಕ ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆಗಳಿವೆ.

ನಿರೀಕ್ಷೆಯಿಂದ ಕಾಯುತ್ತಿರುವ ಜನ
ಲಕ್ಷಾಂತರ ಜನರ ಮೋಕ್ಷಧಾಮವಾಗಿರುವ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಾನದಲ್ಲಿ ನಾಳೆ ವಿಶೇಷ ಸಂಭ್ರಮ ಇರಲಿದೆ. ಭಕ್ತರು ಮಾತನಾಡುವ ಮಂಜುನಾಥ ವೀರೇಂದ್ರ ಹೆಗ್ಗಡೆಯವರ ಭವ್ಯ ಉತ್ಸವ ಕಾಣಲು ತದೇಕಚಿತ್ತದಿಂದ ಕಾಯುತ್ತಿದ್ದಾರೆ.












Click it and Unblock the Notifications