ಧರ್ಮಸ್ಥಳ : ಬದಲಾವಣೆಯೇ ಇವರ ಬದುಕು...!
ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಲ್ಲದ ಜನರು ಈ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ ಜನರ ಅಗತ್ಯಗಳನ್ನು ಚೆನ್ನಾಗಿ ಅರಿತುಕೊಂಡು ಅವರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತ ಜನರ ಮನೆ-ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದಕ್ಕೆ ಈ ವರ್ಗದವರನ್ನು 'ಜನರ ನಾಡಿಮಿಡಿತ' ಎಂದರೆ ಅತಿಶಯೋಕ್ತಿಯಾಗಲಾರದು.
ಕಳೆದ ವರ್ಷದಿಂದ ಈ ವರ್ಷವು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅಂಗವಾಗಿ ಲಕ್ಷದೀಪೋತ್ಸವ ದಿನದಂದು ಈ ಬಟ್ಟೆ ಮಾರಾಟ ಮಾಡುವ ವಿಶೇಷತೆ. ನಾವು ವರ್ಷದ ಹನ್ನೆರಡು ತಿಂಗಳುಗಳನ್ನು ಆಯಾ ವಾತಾವರಣಕ್ಕೆ ತಕ್ಕಂತೆ ಋತುಗಳನ್ನಾಗಿ ವರ್ಗಿಕರಿಸಿಕೊಡಿದ್ದೇವೆ. ಇದನ್ನು ಭೂ ಭ್ರಮಣದಿಂದ ನಡೆಯುವ ದೊಡ್ಡಾಟವೆಂದೂ ಕರೆಯಬಹುದು. ಈ ದೊಡ್ಡಾಟಗಳಲ್ಲಿ ಚಳಿಗಾಲ, ಮಳೆಗಾಲ, ಬೇಸಿಗೆಗಾಲಗಳು ಬಂದು ಹೋಗುತ್ತವೆ. [ಗ್ಯಾಲರಿ: ಕಾರ್ತೀಕ ದೀಪದ ಬೆಳಕಲ್ಲಿ ಮಿಂದೆದ್ದ ಧರ್ಮಸ್ಥಳ]

ಆದರೆ, ಈ ಕಾಲಗಳಿಗೆ ಬೇಕಾದ ಬಟ್ಟೆಗಳು, ತಿಂಡಿ ತಿನುಸುಗಳು, ತಂಪು ಪಾನಿಗಳು ಹೀಗೆ ಜನರಿಗೆ ಅವಶ್ಯವಿರುವ ಅಗತ್ಯಗಳನ್ನು ಪೊರೈಸುವ ಮಾಲ್ಗಳಂತೆ ಇವರು ಕಾರ್ಯೋನ್ಮುಖರಾಗಿದ್ದಾರೆ. ಅದಕ್ಕೆ ಇವರನ್ನು 'ಮಿನಿ ಬಿಗ್ಬಜಾರ್' ಎಂದು ಕರೆಯುತ್ತಾರೆ.
ಇವರೇನು, ದೊಡ್ಡ ಮಾಲ್ ಗಳಲ್ಲಿ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಲ್ಲ. ಇವರ ವ್ಯಾಪಾರ, ವ್ಯವಹಾರ ಏನಿದ್ದರೂ ಜನರ ಮಧ್ಯೆಯೇ. ಅಂದರೆ ಜಾತ್ರೆಗಳಲ್ಲಿ, ಬೀದಿಗಳಲ್ಲಿ, ಪ್ರತಿಷ್ಠಿತ ಪ್ರದೇಶಗಳ ಫುಟ್ಪಾತ್ ಇವರ ದೈನಂದಿನ ಅನ್ನ ಒದಗಿಸುವ ಕಾರ್ಯಾಲಯಗಳು. ಇನ್ನು ತಳ್ಳುವ ಗಾಡಿಗಳು, ಸೈಕಲ್ ಗಳು ಇವರ ಬದುಕನ್ನು ಸಾಗಿಸುವ ನೌಕೆಗಳಾಗಿವೆ.

ವರ್ಷದ ಮೂರು ಋತುಮಾನಗಳಲ್ಲೂ ಇವರಿಗೆ ಕೈತುಂಬ ಕೆಲಸ. ಚಳಿಗಾಲ ಬಂತೆಂದರೆ ಸಾಕು. ಇವರು ಚಳಿಯಂತೆ ಮೈಗೊಡಿವಿ ಎದ್ದು ಬಿಡುತ್ತಾರೆ. ಈ ಸಂದರ್ಭದಲ್ಲಿ ಜನರ ಮೈ ಬೆಚ್ಚಗಾಗಿಸಲು, ಸ್ವೇಟರ್, ಕುಲಾವಿ, ಕೈಚೀಲ, ಕಾಲುಚೀಲ, ಹೀಗೆ ಚಳಿಯಿಂದ ರಕ್ಷಣೆ ಪಡೆಯಲು ಬೇಕಾದ ವಸ್ತುಗಳನ್ನು ಹೊತ್ತು ತರುತ್ತಾರೆ. [ಮರೆಯಾಗಿದ್ದ ಗೋಲಿ ಸೋಡಾ ಲಕ್ಷದೀಪೊತ್ಸವದಲ್ಲಿ ಪ್ರತ್ಯಕ್ಷ]
ಈಗ ಮಳೆಗಾಲ ಶುರುವಾಗಿ ಮುಗಿಯುತ್ತಾ ಬಂದಿದೆ. ಈ ಸಂದರ್ಭದಲ್ಲಿ ಅವರ ವ್ಯಾಪಾರ ಬಲು ಜೋರಾಗಿಯೇ ನಡೆದಿರುತ್ತದೆ. ಛತ್ರಿ, ರೇನ್ಕೋರ್ಟ, ಜರ್ಕಿನ್, ಮತ್ತು ದೊಡ್ಡ ತಾಡಪತ್ರೆಗಳನ್ನು (ಪ್ಲಾಸ್ಟಿಕ ಹಾಳೆ) ಮಾರುತ್ತಿದ್ದಾರೆ. ಬೇಸಿಗೆ ಕಾಲದ ಸೆಕೆ ಎಲ್ಲರಿಗೂ ಶಾಕ್ ನೀಡುತ್ತದೆ.

ಇಂತಹ ಸೆಕೆಯನ್ನು ದೂರಮಾಡುವ ಕಾಟನ್ ಬಟ್ಟೆಗಳು, ಸೊಳ್ಳೆಪರದೆಗಳು, ಒಳ ಉಡುಪುಗಳು ಹಾಗೂ ತಂಪು ಪಾನೀಯಗಳನ್ನು ಮಾರುಕಟ್ಟೆಗೆ ತಂದು ಬೇಸಿಗೆಗೆ ಬೆಂಡಾದ ದೇಹಗಳಿಗೆ ತಂಪನ್ನೆರೆಯುತ್ತಾರೆ. ಅಷ್ಟೇ ಅಲ್ಲದೆ ಸಿಜನ್ ತಕ್ಕಂತೆ ಹಣ್ಣುಗಳನ್ನು ಜನರ ಮನೆ ಬಾಗಿಲಿಗೆ ತಂದು ಮಾರುತ್ತಾರೆ.
'ನಿನ್ನೆ ನಿನ್ನೆಗೆ, ನಾಳೆ ನಾಳಿಗೆ, ಇಂದು ನಮ್ಮದೇ ಚಿಂತೆ ಏತಕೆ' ಎಂಬ ಸಾಲುಗಳು ಇವರ ಮನದ ನಾಡ ಗೀತೆಯಾಗಿಬಿಟ್ಟಿದೆ. ಭವಿಷ್ಯದ ಬಗ್ಗೆ ಇವರ ಕಿಂಚಿತ್ತು ವ್ಯಾಮೋಹವಿಲ್ಲ. ಏನಿದ್ದರು ವರ್ತಮಾನದೊಂದಿಗೆ ಬದುಕುತ್ತಾರೆ.
'ಇಂದು ದುಡಿದು ಇಂದೆ ತಿನ್ನು' ಎಂಬ ನಾಣ್ನುಡಿಗೆ ಒಗ್ಗಿಕೊಂಡಿದ್ದಾರೆ. ಅವತ್ತಿನ ದುಡಿಮೆಯ ಪಾಲನ್ನು ದುಡಿಮೆಗೆ ತೆಗೆದಿಟ್ಟು, ಬಂದ ಅಲ್ಪ ಲಾಭದಲ್ಲಿ ಊಟ ಮಾಡುತ್ತಾರೆ. ಗಳಿಸ್ಬೇಕೆಂಬ, ಗಳಿಸಿದನ್ನು ಕಾಪಾಡಬೇಕೆಂಬ ಚಿಂತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಇವರ ಅಂಗಡಿ ಯಾವ ಮಾಲ್ ಗಳಿಗೇನು, ಕಡಿಮೆಯಿಲ್ಲ ಅಲ್ಲಿ ದೊರೆಯುವ ಎಲ್ಲವೂ ಇವರಲ್ಲಿ ದೊರೆಯುತ್ತವೆ. ಅದೂ ಕಡಿಮೆ ಬೆಲೆಯಲ್ಲಿ. ಹಾಕಿದ ಬಂಡವಾಳ ಮೇಲೆ ಒಂದೆರೆಡೂ ರೂಪಾಯಿ ಬಂದರೆ ಸಾಕು, ಚೌಕಾಸಿ ಇಲ್ಲದೆ ಕೊಟ್ಟುಬಿಡುತ್ತಾರೆ.
ಇಂತಹ ವರ್ಗದ ಜನ ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ಬದಲಾವಣೆ ಜಗದ ನಿಯಮವಾದರೆ, ಆ ಬದಲಾವಣೆಯನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕುವ ಇವರ ಬದುಕು ನಿಜಕ್ಕೂ ಸೋಜಿಗ. ಇವರ ಬದುಕಿಗೊಂದು ನಮ್ಮ ಸಲಾಂ.












Click it and Unblock the Notifications