ಬೆಂಗಳೂರು-ಕಾರವಾರ ರಾತ್ರಿ ರೈಲು ಪುನಃ ಆರಂಭಿಸಿ
ಮಂಗಳೂರು, ಮಾರ್ಚ್ 16 : ಬೆಂಗಳೂರು-ಕಾರವಾರ ರಾತ್ರಿ ರೈಲನ್ನು ಪುನಃ ಆರಂಭಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಬೆಂಗಳೂರು-ಕಾರವಾರ-ವಾಸ್ಕೋ ರೈಲು ಆರಂಭವಾದ ಬಳಿಕ ಎರಡು ರೈಲುಗಳ ಸಂಚಾರವನ್ನು ಇಲಾಖೆ ರದ್ದುಗೊಳಿಸಿದೆ.
ಲೋಕಸಭೆಯಲ್ಲಿ ಈ ಕುರಿತು ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್, "ರೈಲು ನಂಬರ್ 16595/596 ಪರಿಚಯಿಸಿದ್ದು ಕರಾವಳಿ ಭಾಗದ ಜನರಿಗೆ ಭಾಗದ ಜನರಿಗೆ ಸಹಾಯಕವಾಗಿದೆ" ಎಂದು ಹೇಳಿದರು.
"ರೈಲು ನಂಬರ್ 16513/514 ಬೆಂಗಳೂರು-ಕಾರವಾರ-ಬೆಂಗಳೂರು (ಕುಣಿಗಲ್ ಮಾರ್ಗ) ರೈಲು ವಾರದಲ್ಲಿ 4 ದಿನ ಸಂಚಾರ ನಡೆಸುತ್ತಿತ್ತು. ರೈಲು ನಂಬರ್ 16523/524 ಬೆಂಗಳೂರು-ಕಾರವಾಡ-ಬೆಂಗಳೂರು (ಮೈಸೂರು ಮಾರ್ಗ) ವಾರಕ್ಕೆ ಮೂರು ದಿನ ಸಂಚಾರ ನಡೆಸುವ ರೈಲು ಸ್ಥಗಿತಗೊಳಿಸಲಾಗಿದೆ" ಎಂದು ಸಂಸದರು ಹೇಳಿದರು.

"ಹೊಸ ರೈಲಿನ ಸಂಚಾರದ ಅವಧಿ ಜನರಿಗೆ ಸಹಾಯಕವಾಗಿಲ್ಲ. ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, ಕೆಲಸಗಾರರು, ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಆದ್ದರಿಂದ, ರೈಲನ್ನು ಪುನಃ ಆರಂಭಿಸಬೇಕು" ಎಂದು ಒತ್ತಾಯಿಸಿದರು.
"ಕಳೆದ ಎಂಟು ವರ್ಷಗಳಿಂದ ಬೆಂಗಳೂರು-ಕಾರವಾರ ರೈಲು ಸಂಚಾರ ನಡೆಸುತ್ತಿದೆ. ಜನರು ಈ ರೈಲಿನಲ್ಲಿ ಹೆಚ್ಚಾಗಿ ಸಂಚಾರ ನಡೆಸುತ್ತಿದ್ದರು. ರೈಲು ಸಂಚಾರ ಸ್ಥಗಿತಗೊಳಿಸಿರುವುದು ಜನರಿಗೆ ತೊಂದರೆ ಉಂಟು ಮಾಡಿದೆ" ಎಂದು ಸಂಸದರು ಹೇಳಿದರು.
ಮಾರ್ಚ್ 7ರಿಂದ ರೈಲ್ವೆ ಇಲಾಖೆ ಮಲೆನಾಡು, ಕರಾವಳಿ ಸಂಪರ್ಕಿಸುವ ಯಶವಂತಪುರ-ವಾಸ್ಕೋ ರೈಲು ಸಂಚಾರವನ್ನು ಆರಂಭಿಸಿತ್ತು. ಆದ್ದರಿಂದ, ಬೆಂಗಳೂರು-ಕಾರವಾರ ನಡುವಿನ ರಾತ್ರಿ ರೈಲನ್ನು ಸ್ಥಗಿತಗೊಳಿಸಿತ್ತು.
ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ವಾಸ್ಕೋ ನಡುವೆ ಸಂಚಾರ ನಡೆಸುವ ರೈಲು 696 ಕಿ. ಮೀ. ಮಾರ್ಗವನ್ನು 16 ಗಂಟೆಗಳಲ್ಲಿ ಕ್ರಮಿಸಲಿದೆ.












Click it and Unblock the Notifications