ಮೋಟರ್ ಕಾಯ್ದೆ ವಿರೋಧಿಸಿ ಫೆ.3ರಂದು ದ.ಕ.ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು, ಫೆಬ್ರವರಿ. 01 : ಮೋಟರ್ ಕಾಯ್ದೆ ಹಾಗೂ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಫೆ.3ರಂದು ಬೆಳಗ್ಗೆ ನಗರದ ಆರ್ಟಿಒ ಕಚೇರಿ ಮುಂಭಾಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಮ್ ಕೋಡಿಜಾಲ್ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಟರ್ ಕಾಯ್ದೆ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಕುರಿತು ಎಐಸಿಸಿ ಆದೇಶ ಮತ್ತು ಕೆಪಿಸಿಸಿ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಸುಳ್ಯ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿಯ ಸಹಿತ ಎಲ್ಲ ಬ್ಲಾಕ್ ಕಾಂಗ್ರೆಸ್ ಘಟಕಗಳು ಪ್ರತಿಭಟನೆ ನಡೆಸಲಿದೆ ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡೀಸೆಲ್, ಪೆಟ್ರೋಲ್ಗಳ ಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರಕಾರ ತಿಂಗಳಿಗೆ ಎರಡು ಬಾರಿ ಇಂಧನ ಬೆಲೆ ಏರಿಸಿರುವುದು ಖಂಡನೀಯ.
ಬೆಲೆ ಏರಿಕೆ ತಡೆಗಟ್ಟಲು ಇಂಧನ ಬೆಲೆಯನ್ನು ಇಳಿಸುವುದು ಅಗತ್ಯವಿದ್ದು, ಮೋದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಜನಸಾಮಾನ್ಯರು ವಿರೋಧಿಸುತ್ತಿದ್ದಾರೆ ಎಂದು ಇಬ್ರಾಹೀಮ್ ಕೋಡಿಜಾಲ್ ಹೇಳಿದರು.
ಮೋಟರ್ ಕಾಯ್ದೆಯಿಂದ ಚಾಲಕರ ಲೈಸೆನ್ಸ್ ರದ್ದಾದಲ್ಲಿ 5 ವರ್ಷಗಳವರೆಗೆ ಪರವಾನಿಗೆ ರದ್ದಾಗುತ್ತದೆ. ಇದರಿಂದ ಅವರ ಕುಟುಂಬದ ನಿರ್ವಹಣೆ ಹೇಗೆ? ದೇಶದಲ್ಲಿ ಹೆಚ್ಚು ಬಡವರಿದ್ದಾರೆ. ಅವರು ದಂಡ ಕಟ್ಟುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಮೋದಿಯ ಕ್ರಮ ಅನ್ಯಾಯದ ಪರಮಾವಧಿಯಾಗಿದೆ ಎಂದರು.
ಚಾಲಕರು ಸೀಟ್ ಬೆಲ್ಟ್, ಬೈಕ್ ಸವಾರರು ಹೆಲ್ಮೆಟ್ ಧರಿಸದಿದ್ದಲ್ಲಿ 1,000 ರೂ. ದಂಡ ಹಾಗೂ ಸಿಗ್ನಲ್ ದಾಟಿದರೆ 5,000 ರೂ. ದಂಡವನ್ನು ಹೇರುವ ಕಾಯ್ದೆಯನ್ನು ತರಲಾಗುತ್ತಿದೆ.
ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡವರು, ಕಾರ್ಮಿಕರು, ಜನಸಾಮಾನ್ಯರಿದ್ದಾರೆ. ಬಡವರು ದಂಡ ಕಟ್ಟಲು ಹಣವನ್ನು ಯಾವ ಮೂಲದಿಂದ ತರಬೇಕು ಎಂದು ಪ್ರಶ್ನಿಸಿದರು.
ಮೋದಿ ದೇಶದ ಜನರಿಗೆ ಅಚ್ಛೇ ದಿನ್ ತರುತ್ತೇನೆ, ವಿದೇಶದಲ್ಲಿರುವ ಕಪ್ಪುಹಣ ತರುತ್ತೇನೆ, ಆ ಹಣವನ್ನು ದೇಶದ ಜನರ ಖಾತೆಗೆ ಹಾಕುತ್ತೇನೆ ಎಂದು ಹೇಳಿ ಜನರಿಗೆ ವಂಚನೆ ಮಾಡಿರುವುದು ಖಂಡನೀಯ' ಎಂದು ಆಕ್ರೋಶ ವ್ಯಕ್ತಪಡಿಸಿದರು.