ಮಂಗಳೂರು: ಅಕ್ರಮ ಮರ ಸಾಗಾಟ, ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ
ಮಂಗಳೂರು, ನವೆಂಬರ್ 29 : ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಶಿರಾಡಿ ರಕ್ಷಿತಾರಣ್ಯದಲ್ಲಿ ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾತ್ರಿ ಹೊತ್ತಿನಲ್ಲಿ ಮರ ಕಡಿದು ವ್ಯವಸ್ಥಿತವಾಗಿ ಹೊರಗೆ ಸಾಗಿಸುವ ಜಾಲ ವ್ಯಾಪಕವಾಗಿದ್ದು, ಇದರ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ವಿಷಯ ಮುಟ್ಟಿಸಿದ್ದಾರೆ. ಮರ ಕಳ್ಳ ಸಾಗಣೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕೈಕಟ್ಟಿಕೊಂಡು ಕುಳಿತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅರಣ್ಯ ಮಧ್ಯೆ ಬೃಹತ್ ಸಾಗುವಾನಿ, ಹೆಬ್ಬಲಸು, ತೇಗದ ಮರಗಳನ್ನು ಕಡಿದು ಸಣ್ಣ ದಿಮ್ಮಿಗಳಾಗಿಸಿ ಸಾಗಾಟಕ್ಕೆ ರೆಡಿ ಮಾಡಿಟ್ಟ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.
ಅರಣ್ಯ ಸಚಿವ ರಮಾನಾಥ ರೈ ಅವರ ತವರು ಜಿಲ್ಲೆಯಲ್ಲಿಯೇ ಮರ ಕಳ್ಳರಿಗೆ ಇಲಾಖೆಯ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆಯೇ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಅರಣ್ಯ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಮರ ಕಳ್ಳಸಾಗಣೆಯ ಖಚಿತ ಮಾಹಿತಿ ಇದೇ ಮೊದಲ ಬಾರಿಗೆ ಲಭಿಸಿದೆ. ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವುದರಿಂದ ಲೂಟಿಕೋರರ ಕಳ್ಳಸಾಗಣೆಗೆ ರಹದಾರಿ ಸಿಕ್ಕಂತಾಗಿದೆ. ಈ ಕುರಿತು ಅರಣ್ಯ ರಾಜ್ಯ ಸರಕಾರ ಕ್ರಮಕೈಗೊಳ್ಳ ಬೇಕಾದ ಅಗತ್ಯವಿದೆ.












Click it and Unblock the Notifications