ಮೂಡಬಿದ್ರೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ: ಮಿಥುನ್ ರೈ
ಮಂಗಳೂರು ಏಪ್ರಿಲ್ 26: ಮುಲ್ಕಿ-ಮೂಡಬಿದರೆ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ. ಮುಂಬರುವ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದೇನೆ ಎಂದು ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ .
ಗುರುವಾರ ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ನನಗೆ ಟಿಕೆಟ್ ದೊರಕಿಲ್ಲ ಎಂದು ಯುವ ಕಾಂಗ್ರೆಸ್ ಹಾಗು ಎನ್ಎಸ್ ಯುಐನ ಕೆಲ ಮುಖಂಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಎಲ್ಲಾ ರಾಜೀನಾಮೆಯನ್ನು ತಿರಸ್ಕರಿಸಲಾಗಿದೆ," ಎಂದು ತಿಳಿಸಿದರು.
"ಮುಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೈ ತಪ್ಪಿದಾಗ ನನಗೆ ಸ್ವಲ್ಪ ಬೇಸರ ಆಗಿತ್ತು. ಆದರೆ ಈಗ ಯಾವುದೇ ರೀತಿಯಲ್ಲಿ ಬೇಸರವಿಲ್ಲ," ಎಂದು ಅವರು ಹೇಳಿದರು. "ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ . ಮುಂದೆ ಪಕ್ಷದ ನಾಯಕರು ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇನೆ," ಎಂದು ಅವರು ತಿಳಿಸಿದರು.

ನನ್ನನ್ನು ದೆಹಲಿಗೆ ಕರೆದು ರಾಹುಲ್ ಗಾಂಧಿ ಮಾತನಾಡಿದ್ದಾರೆ. ಅವರ ಟೀಮ್ ನಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಇದು ಎಂಪಿ, ಎಂಎಲ್ಎಗಿಂತಲೂ ದೊಡ್ಡದು ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದೂ ಮಿಥುನ್ ರೈ ತಿಳಿಸಿದರು.
ಕಳೆದ 3 ವರ್ಷಗಳಿಂದ ಮೂಲ್ಕಿ ಮೂಡಬಿದಿರೆಯ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆ ಮಾಡಿದ್ದೇನೆ. ಈಗ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಮತ್ತೆ ಮುಲ್ಕಿ ಮೂಡಬಿದಿರೆಗೆ ಹೋಗುತ್ತೇನೆ ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ, "ಮುಂದೆ ಆ ಕುರಿತು ಪ್ರತಿಕ್ರಿಯೆ ನೀಡುತ್ತೇನೆ," ಎಂದಷ್ಟೇ ತಿಳಿಸಿದರು.












Click it and Unblock the Notifications