ಕಾಂಗ್ರೆಸ್ ಭಯೋತ್ಪಾದನೆಯ ಪ್ರೇರಣಾ ಕೇಂದ್ರವಾಗಿದೆ: ನಳಿನ್ ಕುಮಾರ್ ಕಟೀಲ್ ಆರೋಪ
ಮಂಗಳೂರು, ಡಿಸೆಂಬರ್, 16: ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಪ್ರಾರಂಭವಾದವು. ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ಪಕ್ಷವೇ ಪ್ರೇರಣೆ ಆಗಿದೆ. ಬಿಂದ್ರನ್ ವಾಲೆ ಸೃಷ್ಟಿ ಇಂದಿರಾ ಗಾಂಧಿಯಿಂದಲೇ ಆಗಿದೆ. ಕಾಶ್ಮೀರದಲ್ಲಿ ಪ್ರಾರಂಭವಾದ ಭಯೋತ್ಪಾದನೆ ಪ್ರತಿಯೊಂದು ರಾಜ್ಯ, ಊರುಗಳಲ್ಲಿ ಹೆಚ್ಚಾಯಿತು. ಇದೇ ಮಾನಸಿಕತೆಯನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೊಂದಿದ್ದಾರೆ. ಆದ್ದರಿಂದಲೇ ಅವರು ಮಂಗಳೂರು ಬಾಂಬ್ ಸ್ಫೋಟ ಪ್ರಕರಣವನ್ನು ಭಯೋತ್ಪಾದನಾ ಕೃತ್ಯವಲ್ಲ ಎಂದು ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ವಾಗ್ದಾಳಿ ನಡೆಸಿದರು.
ಶಾರೀಕ್ ಹಿನ್ನೆಲೆ ಏನೆಂದು ಗೊತ್ತಾಗಿದೆ
ಮಂಗಳೂರಿನಲ್ಲಿ ಮಾತನಾಡಿದ ಅವರು, ಶಾರೀಕ್ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದರು. ಪೊಲೀಸರ ತನಿಖೆಯ ಆಧಾರದಲ್ಲಿ ಶಾರೀಕ್ನದ್ದು ಭಯೋತ್ಪಾದನಾ ಕೃತ್ಯವೆಂದೇ ಹೇಳಿದ್ದರು. ಆದರೆ ಕಾಂಗ್ರೆಸ್ ಭಯೋತ್ಪಾದಕತೆಯ ಪರವಾಗಿದೆ. ಸ್ವಾತಂತ್ರಕ್ಕಾಗಿ ಕೆಲಸ ಮಾಡಿದ ಕಾಂಗ್ರೆಸ್ ಇದೀಗ ದೇಶ ವಿರೋಧಿ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಹೇಳಿಕೆ ಭಯೋತ್ಪಾದಕರಿಗೆ ಪ್ರೇರಣೆ ನೀಡಿದೆ ಎಂದರು.

ಭಯೋತ್ಪಾದಕರಿಗೆ 1 ಕೋಟಿ ರೂ. ಆಫರ್, ಆರೋಪ
ಹಿಂದೆ ಕಾಶ್ಮೀರದ ಕಾಂಗ್ರೆಸ್ ನಾಯಕನೊಬ್ಬ ಭಯೋತ್ಪಾದಕರಿಗೆ 1 ಕೋಟಿ ರೂಪಾಯಿ ಆಫರ್ ನೀಡಿದ್ದ. ಪಿಎಫ್ಐ ಕ್ರಿಮಿನಲ್ಗಳ ಕೇಸ್ ಅನ್ನು ಹಿಂಪಡೆದು ಕಾಂಗ್ರೆಸ್ ಬಿ ರಿಪೋರ್ಟ್ ಹಾಕಿತ್ತು. ಶಾರೀಕ್ ಈ ಹಿಂದೆ ಗೋಡೆ ಬರಹ ಬರೆದಾಗ ಅವನ ಪರವಾಗಿ ಕಾಂಗ್ರೆಸ್ ಹೇಳಿಕೆ ನೀಡಿತ್ತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಭಯೋತ್ಪಾದನೆಗೆ ಪ್ರೇರಣೆ ನೀಡಲಿದೆ. ಕಾಂಗ್ರೆಸ್ಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಇಲ್ಲ, ಬದಲಾಗಿ ಭಯೋತ್ಪಾದಕರ ಮೇಲೆ ಪ್ರೀತಿ ಹೆಚ್ಚಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಗರಂ
ಈ ಹಿಂದೆ ಕಾಂಗ್ರೆಸ್ ವೋಟರ್ ಐಡಿ ಹಗರಣ ಮುಚ್ಚುವ ಕೆಲಸವನ್ನು ಮಾಡಿತ್ತು. ಬಿಜೆಪಿಗೆ ಪ್ರಕರಣವನ್ನು ಮುಚ್ಚುವ ಅಗತ್ಯತೆ ಇಲ್ಲ. ಕಾಂಗ್ರೆಸ್ ಕಾಲಘಟ್ಟದಲ್ಲಿ ನಡೆದ ಪಿಎಸ್ಐ ಅಕ್ರಮ ನೇಮಕಾತಿಯ ಸಂಬಂಧ ದೊಡ್ಡ ಕುಳಗಳು ಬಲೆಗೆ ಬಿದ್ದಿದ್ದವು. ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ವೋಟ್ ಬ್ಯಾಂಕ್ಗಾಗಿ ಚಿಲ್ಲರೆ ರಾಜಕೀಯ ಮಾಡುವುದು ಕಾಂಗ್ರೆಸ್ನ ಕೆಲಸವಾಗಿ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಮೇಯರ್ ಇದ್ದದ್ದು ತನಿಖೆಯಲ್ಲಿ ಗೊತ್ತಾಗಿದೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಯೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿತ್ತು ಎಂದು ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದರು.












Click it and Unblock the Notifications