ಸಿಎಂಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆ ಇಲ್ಲ - ಬಿಎಸ್ವೈ ವಾಗ್ದಾಳಿ
ಮಂಗಳೂರು, ಜುಲೈ 13: ಕೊಲೆಯಾದ ಶರತ್ ಮನೆಗೆ ಭೇಟಿ ಕೊಡುವ ಉದ್ದೇಶದಿಂದ ನಾನು ಮಂಗಳೂರಿಗೆ ಬಂದಿದ್ದೇನೆ. ಇದು ವ್ಯವಸ್ಥಿತ ಕೊಲೆ ಸಂಚು. ಸಿಎಂ ಕಾರ್ಯಕ್ರಮಕ್ಕಾಗಿ ಸಾವನ್ನು ಮುಚ್ಚಿಟ್ಟಿದ್ದು ಅಕ್ಷಮ್ಯ ಅಪರಾಧವೆಂದು ಬಿಎಸ್ವೈ ವಾಗ್ದಾಳಿ ನಡೆಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶರತ್ ಹತ್ಯೆ ನಡೆದು 9 ದಿನ ಆದ ಮೇಲೆ ಯಾರಿಗೂ ಹೇಳದೇ ರಮಾನಾಥ ರೈ ಶರತ್ ಮನೆಗೆ ಹೋಗಿದ್ದರು. ನಾವೆಲ್ಲಾ ಬಂದ ಮೇಲೆ ಅವರಿಗೆ ಜ್ಞಾನೋದಯ ಆಗಿದೆ. ಅದು ಅವರ ವಯಸ್ಸಿನ ಕಾರಣವೋ, ಉದ್ದೇಶ ಪೂರ್ವಕವೋ ಗೊತ್ತಿಲ್ಲ. ರಾಜಕಾರಣಿಗಳ ಶಬ್ದ ಪ್ರಯೋಗದ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡಲ್ಲ," ಎಂದರು.

"ಇಂದು ಸಂಜೆ ನಡೆಯುವ ಶಾಂತಿ ಸಭೆ ಕಾಂಗ್ರೆಸ್ನವರ ಶಾಂತಿ ಸಭೆಯಾ? ಕೋಮು ಗಲಭೆಯನ್ನು ಹುಟ್ಟು ಹಾಕಿದವರ ನೇತೃತ್ವದಲ್ಲೇ ಸಭೆ ನಡೆಯುತ್ತಿದೆ. ಯಾರು ಬಲಿಯಾಗಿದ್ದಾರೋ ಆ ಸಂಘಟನೆಗೆ ಆಹ್ವಾನ ಇಲ್ಲ. ಹಿಂದೂ ಸಂಘಟನೆಗಳಿಗೆ ಯಾಕೆ ಆಹ್ವಾನ ನೀಡಿಲ್ಲ?," ಎಂದು ಅವರು ಪ್ರಶ್ನಿಸಿದ್ದಾರೆ.

"ಸಿಎಂಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆ, ಶಕ್ತಿ, ಆಸಕ್ತಿ ಯಾವುದೂ ಇಲ್ಲ. ರಾಜಕೀಯ ಲಾಭ ಪಡೆದು ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಶಾಂತಿ ಸಭೆಗೆ ಹೋಗುವ ಅವಶ್ಯಕತೆ ಇಲ್ಲ. ಅಶಾಂತಿ ಸೃಷ್ಟಿ ಮಾಡುವವರ ಜೊತೆ ಚರ್ಚೆ ಮಾಡುವುದರಿಂದ ಶಾಂತಿ ನೆಲೆಸುವುದಿಲ್ಲ. ಅವರು ಬರುತ್ತಿರೋದು ಶಾಂತಿ ಕದಡಲು ಹೊರತು ಶಾಂತಿ ಕಾಪಾಡಲು ಅಲ್ಲ. ಪರಿಸ್ಥಿತಿ ನೋಡಿಕೊಂಡು ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸುತ್ತೇವೆ," ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

"ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರ್ ವಿರುದ್ಧ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿ ತೋರಿಸುತ್ತೇವೆ. ಇಬ್ಬರ ಸ್ಪರ್ಧೆಯನ್ನೂ ಸವಾಲಾಗಿ ಸ್ವೀಕರಿಸಿದ್ದೇವೆ," ಎಂದು ಯಡಿಯೂರಪ್ಪ ಗುಡುಗಿದ್ದಾರೆ.












Click it and Unblock the Notifications