ಕತ್ತಲಲ್ಲೇ ಸಮುದ್ರ ವೀಕ್ಷಿಸಿ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ!
ಮಂಗಳೂರು, ಜು,13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಗಿದ ಬಳಿಕ ಇದೀಗ ಕಡಲ ಆರ್ಭಟ ಹೆಚ್ಚಾಗಿದೆ. ಕಡಲ ತೀರದಲ್ಲಿದ್ದ ಇದ್ದ ಮನೆ, ರಸ್ತೆ, ತೋಟ ಎಲ್ಲವನ್ನೂ ಸಮುದ್ರ ರಾಜ ತನ್ನೆಡೆಗೆ ಸೆಳೆಯುತ್ತಿದ್ದಾರೆ. ಈ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಆಗಿಲ್ಲ ಎಂದು ಜನ ಹಿಡಿ ಶಾಪ ಹಾಕುತ್ತಿದ್ದರೆ, ಪರಿಸ್ಥಿತಿ ಅವಲೋಕಿಸಲು ಬಂದ ನಾಡ ದೊರೆ ಇಲ್ಲಿಂದಲೇ ಪೈಲೆಟ್ ಪ್ರೊಜೆಕ್ಟ್ ಶೀಘ್ರದಲ್ಲೇ ಸ್ಟಾರ್ಟ್ ಮಾಡ್ತೇವೆ ಎಂದಿದ್ದಾರೆ.
ಇನ್ನು ಮಳೆ ಹಾನಿ ಪರಿಸ್ಥಿತಿ ಅವಲೋಕಿಸಲು ಕರಾವಳಿಗೆ ಬಂದ ಸಿಎಂ ಬಸವರಾಜ ಬೊಮ್ಮಾಯಿ ಕಡಲ್ಕೊರೆತ ಪ್ರದೇಶಕ್ಕೂ ಭೇಟಿ ನೀಡಿದರು, ಕಡಲ ಆರ್ಭಟಕ್ಕೆ ರಸ್ತೆಯೇ ಸಮುದ್ರ ಪಾಲಾದ ಸೋಮೇಶ್ವರದ ಬಟ್ಟಪಾಡಿಗೆ ಸಿಎಂ ಭೇಟಿ ನೀಡಿ ವೀಕ್ಷಿಸಿದರು. ಅಧಿಕಾರಿಗಳೊಂದಿಗೆ ಮಾಹಿತಿ ಕಲೆ ಹಾಕಿ ತಕ್ಷಣವೇ ಕಡಲ ತೀರದಲ್ಲಿ ಅಪಾಯದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಆದೇಶಿಸಿದರು.ಬಳಿಕ ಮಾತನಾಡಿದ ಅವರು ಕಳೆದ ಬಾರಿ ಈ ಪ್ರದೇಶದಲ್ಲಿ 200 ಮೀಟರ್ ಕಡಲ್ಕೊರೆತ ಆಗಿದ್ದು ಈ ಬಾರಿ ಅದು 600 ಮೀಟರ್ ಗೆ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾದ್ರೆ ಇನ್ನೂ ಹೆಚ್ಚಿನ ಹಾನಿಯಾಗುತ್ತೆ. ಹೀಗಾಗಿ ಇನ್ನು ರಿಸ್ಕ್ ತೆಗೆದುಕೊಳ್ಳೋದಿಲ್ಲ. ಕಡಲ್ಕೊರೆತ ತಡೆಯಲು ಹೊಸ ತಂತ್ರಜ್ಞಾನಕ್ಕೆ ಅನುಮತಿ ನೀಡಿದ್ದು ಅದನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಬಟ್ಟಪಾಡಿಯಿಂದಲೇ ಆರಂಭಿಸಲು ಆದೇಶಿಸುತ್ತೇನೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಗೆ ಜನ ಹೈರಾಣ ಆಗಿದ್ದಾರೆ. ನದಿ ಪಾತ್ರದ ಜನರು ಪ್ರವಾಹದಿಂದಾಗಿ ಮತ್ತಷ್ಟು ಸಂಕಷ್ಟ ಎದುರಿಸಿದ್ದು ಸಾಕಷ್ಟು ಪ್ರಾಣ-ಆಸ್ತಿ-ಪಾಸ್ತಿ ನಷ್ಟವಾಗಿದೆ. ಇದೀಗ ನದಿಯ ನೀರು ಇಳಿಮುಖವಾಗಿದ್ದು ಸಮುದ್ರದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕಡಲು ಭೋರ್ಗರೆಯುತ್ತಿದ್ದು ಅಬ್ಬರ ಹೆಚ್ಚಾಗಿದೆ.ಇಲ್ಲಿನ ಕಡಲ ತೀರಗಳಾದ ಉಳ್ಳಾಲ, ಬಟ್ಟಪ್ಪಾಡಿ, ಉಚ್ಚಿಲ, ಸೋಮೇಶ್ವರ, ಪಣಂಬೂರು, ಸುರತ್ಕಲ್ ಸೇರಿದಂತೆ ಕರಾವಳಿಯ ತೀರದುದ್ದಕ್ಕೂ ಕಡಲ್ಕೊರೆತ ಆರಂಭವಾಗಿದೆ.
ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ
ರಕ್ಕಸ ಅಲೆಗಳು ಕಡಲ ತೀರಕ್ಕೆ ಅಪ್ಪಳಿಸುತ್ತಿದ್ದು ಸಾಕಷ್ಟು ಹಾನಿಯಾಗುತ್ತಿದೆ. ಮಂಗಳೂರಿನ ಪಣಂಬೂರು ಸಮೀಪದ ಮೀನಕಳಿಯ ಎಂಬಲ್ಲಿ ಕಡಲ ಅಬ್ಬರಕ್ಕೆ ಕಾಂಕ್ರೀಟ್ ರಸ್ತೆಯೇ ಕುಸಿದು ಸಮುದ್ರ ಪಾಲಾಗಿದೆ. ಪಣಂಬೂರು ಹಾಗೂ ಮೀನಕಳಿಯ ಊರನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಸಂಪರ್ಕ ಕಳೆದುಕೊಂಡು ಸುಮಾರು 500 ಕುಟುಂಬಗಳು ಪರದಾಡುವಂತಾಗಿದೆ. ಕಡಲ ತೀರದಲ್ಲೇ ಸುಮಾರು 15 ಕ್ಕೂ ಹೆಚ್ಚು ಮೀನುಗಾರರ ಮನೆಗಳಿದ್ದು, ಮನೆಗಳು ಸಹ ಕಡಲು ಪಾಲಾಗುವ ಭೀತಿ ಎದುರಾಗಿದೆ. ಕಡಲ್ಕೊರೆತ ಸಮಸ್ಯೆಗೆ ಈ ಹಿಂದೆಯೇ ಪರಿಹಾರ ಕಲ್ಪಿಸದ ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತೀ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕಡಲ್ಕೊರೆತ ಆರಂಭಗೊಂಡಿದೆ. ಇನ್ನೂ ಎರಡು ತಿಂಗಳು ಮಳೆಯಾಗುವುದರಿಂದ ಮತ್ತಷ್ಟು ಕೊರೆತದ ಭೀತಿ ಎದುರಾಗಿದೆ. ಒಟ್ಟಿನಲ್ಲಿ ಈ ಬಾರಿಯಾದ್ರೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಆಗುತ್ತಾ ಅಥವಾ ಪ್ರತೀ ವರ್ಷದಂತೆ ಕೇವಲ ಪೋಟೋಗೇ ಫೋಸ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.