ವಿಶೇಷ ಲೇಖನ: ಟಿಪ್ಪುನಿಂದ ಕ್ರೈಸ್ತರನ್ನು ರಕ್ಷಿಸಿದ ಆ ಕುಟುಂಬದವರಿಗೆ ಈಗಲೂ ಗೌರವ
ಮಂಗಳೂರು, ನವೆಂಬರ್ 6 : ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿಚಾರ ವಿವಾದದ ಸ್ವರೂಪ ಪಡೆದಿದ್ದು, ಪರ- ವಿರುದ್ಧದ ವಾದಗಳು ಕೇಳಿಬರುತ್ತಲೇ ಇವೆ. ಆತ ಪ್ರಜಾಪೀಡಕ, ದಾಳಿಕೋರ ಎಂದು ವಿರೋಧಿಸುವವರು ಒಂದೆಡೆಯಾದರೆ, ಟಿಪ್ಪು ಸುಲ್ತಾನ್ ವೀರ, ಸ್ವಾತಂತ್ರ ಹೋರಾಟಗಾರ ಎಂಬ ವಾದ ಮಂಡಿಸುವವರೂ ಇದ್ದಾರೆ.
ಮಂಗಳೂರಿನ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಟಿಪ್ಪು ಸೈನ್ಯ ಕ್ರೈಸ್ತರ ಮೇಲೆ ಅಂದು ನಡೆಸಿದ ಕೌರ್ಯ, ಅದರಿಂದ ಕ್ರೈಸ್ತರನ್ನು ರಕ್ಷಿಸಿದ ಸ್ಥಳೀಯ ಹಿಂದೂಗಳು ಇಂದಿಗೂ ಹಿಂದೂ ಕುಟುಂಬಗಳಿಗೆ ಕ್ರೈಸ್ತರು ಪ್ರತಿವರ್ಷ ಹೊರೆ ಕಾಣಿಕೆ ಅರ್ಪಿಸುವ ಪ್ರತೀತಿ ನಡೆದು ಬಂದಿದೆ. ಇಂದಿಗೂ ಮಂಗಳೂರಿನ ಚರ್ಚ್ ವೊಂದರಲ್ಲಿ ಬಂಟ ಸಮುದಾಯದ 3 ಕುಟುಂಬಸ್ಥರನ್ನು ಸನ್ಮಾನಿಸಿ, ಹೊರೆ ಕಾಣಿಕೆ ಅರ್ಪಿಸಿ ರಾಜ ಮರ್ಯಾದೆ ನೀಡಲಾಗುತ್ತದೆ.
ಮಂಗಳೂರಿನಿಂದ 30 ಕಿಲೋಮೀಟರ್ ದೂರದಲ್ಲಿರುವ ಕಿರೆಂ ರೆಮದಿ ಚರ್ಚ್ ನಲ್ಲಿ ಇಂದಿಗೂ ಈ ಆಚರಣೆ ಪ್ರತಿ ವರ್ಷ ನಡೆಯುತ್ತಿದೆ. ಮುಲ್ಕಿಯ ಕಿನ್ನಗೋಳಿ ಸಮೀಪದ ದಾಮಸ್ ಕಟ್ಟೆ ಎಂಬಲ್ಲಿ ಕಿರೆಂ ರೆಮದಿ ಅಮ್ಮನವರ ಚರ್ಚ್ ಇದೆ. ಐಕಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಚರ್ಚ್ ಮಂಗಳೂರು ಡಯಾಸಿಸ್ ನ ಪ್ರಾಚೀನ ಚರ್ಚ್ ಗಳಲ್ಲಿ ಒಂದು.
ಈ ಚರ್ಚ್ ನಲ್ಲಿ ಪ್ರತಿವರ್ಷ ವಾರ್ಷಿಕ ಹಬ್ಬದ ದಿನ ಮೂರು ಹಿಂದೂ ಮನೆತನದವರಿಗೆ ಬಾಳೆ ಹಣ್ಣು, ವೀಳ್ಯದೆಲೆ, ಅಡಿಕೆ ಕೊಟ್ಟು ವಿಶೇಷ ಗೌರವ ಸಲ್ಲಿಸಲಾಗುತ್ತದೆ. ದಾಮಸ್ಕಟ್ಟೆಯಲ್ಲಿರುವ ಕಿರೆಂ ರೆಮದಿ ಅಮ್ಮನವರ ಚರ್ಚ್ ಎಂದೇ ಪ್ರಸಿದ್ಧಿ ಹೊಂದಿರುವ ಈ ಚರ್ಚ್ ಸ್ಥಳೀಯ ಕ್ರೈಸ್ತರಿಂದ ನಿರ್ಮಾಣ ಆಗಿತ್ತು.

ಕೆನರಾ ಕ್ರೈಸ್ತರ ಮೇಲೆ ದಾಳಿ
1784ರಲ್ಲಿ ಟಿಪ್ಪು ಸುಲ್ತಾನ್ ಕಾರವಾರದಿಂದ ಕಾಸರಗೋಡಿನವರೆಗೆ ಕೆನರಾ ಕ್ರೈಸ್ತರ ಮೇಲೆ ದಾಳಿ ಮಾಡಿದ್ದ ಸಂದರ್ಭಧಲ್ಲಿ ಕಿರೆಂ ಚರ್ಚ್ ಅನ್ನು ನಾಶ ಪಡಿಸಲು ಮುಂದಾಗಿದ್ದ ಎಂದು ಹೇಳಲಾಗುತ್ತದೆ. ಆಗ ಸ್ಥಳೀಯ ಬಂಟ ಸಮುದಾಯದ ಮೂರು ಕುಟುಂಬದ ಸದಸ್ಯರು ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ವಿಶೇಷ ಗೌರವ
ಇಲ್ಲಿಯ ಸ್ಥಳೀಯ ಬಂಟ ಸಮುದಾಯದ ಐಕಳ ಬಾವ, ತಾಳಿಪಾಡಿ ಗುತ್ತು ಹಾಗೂ ಏಳಿಂಜೆ ಅಂಗಡಿಗುತ್ತು ಕುಟುಂಬದವರು ಟಿಪ್ಪು ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಈ ಕಾರಣದಿಂದ ಕಿರೆಂ ರೆಮದಿ ಚರ್ಚ್ ನ ವಾರ್ಷಿಕ ಹಬ್ಬದಂದು ಈ ಮೂರು ಮನೆತನದವರಿಗೆ ಬಾಳೆಹಣ್ಣು, ಅಡಿಕೆ ಗೊನೆ, ವೀಳ್ಯದೆಲೆ ನೀಡಿ ವಿಶೇಷ ಗೌರವ ನೀಡಲಾಗುತ್ತದೆ.

ಸಾವಿರಾರು ಕ್ರೈಸ್ತರು ಶ್ರೀರಂಗಪಟ್ಟಣದಲ್ಲಿ ಬಂದಿ
1784ರಲ್ಲಿ ಟಿಪ್ಪು ಸಾವಿರಾರು ಕ್ರೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಬಂಧನದಲ್ಲಿಟ್ಟಿದ್ದ. ಟಿಪ್ಪು ಸೆರೆಯಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ಕ್ರೈಸ್ತ ಸಲ್ದಾನಾ ಕುಟುಂಬದ ಹುಡುಗನ ರಕ್ಷಣೆಗೋಸ್ಕರ ಬಂಟ ಮನೆತನದವರು ಆತನನ್ನು ತಮ್ಮ ಮನೆಯಲ್ಲಿ ಅಡಗಿಸಿಟ್ಟಿದ್ದರು. ನಂತರ ತಮ್ಮ ಕುಟುಂಬದ ಸದಸ್ಯನಂತೆ ಕಿವಿಗೆ ಚಿನ್ನದ ಒಲೆಗಳನ್ನು ಹಾಕಿ ಶೆಟ್ಟಿ ಕುಟುಂಬದವನಂತೆ ಬಿಂಬಿಸಿದರು.

ಈಗಲೂ ಶೆಟ್ಟಿ, ಶೇಟ್ ಎಂದು ಕರೆಯುವ ಪದ್ಧತಿ
ಆ ನಂತರ ಹಲವಾರು ವರ್ಷಗಳ ಬಳಿಕ ಬಂಧ ಮುಕ್ತಗೊಂಡ ಕ್ರೈಸ್ತ ಕುಟುಂಬದ ಸದಸ್ಯರು ಹಿಂತಿರುಗಿದಾಗ ಅವರಿಗೆ ಆ ಹುಡುಗನನ್ನು ಒಪ್ಪಿಸಲಾಗಿತ್ತು. ಆ ಹುಡುಗನ ಕುಟುಂಬದ ವಂಶಸ್ಥರನ್ನು ಕ್ರೈಸ್ತರ ಉಪನಾಮದ ಶೆಟ್ಟಿ ಅಥವಾ ಶೇಟ್ ಎಂದು ಕರೆಯುವ ಪದ್ಧತಿ ಇಂದಿಗೂ ಇಲ್ಲಿ ಮುಂದುವರೆದಿದೆ. ಹಿಂದೂ ಹಾಗೂ ಕ್ರೈಸ್ತರ ಮಧುರ ಬಾಂಧವ್ಯದ ಜೀವಂತ ಉದಾಹರಣೆಯಾಗಿದೆ.












Click it and Unblock the Notifications