ಇದೆಲ್ಲಾ ಕೊಲೆ ಮಾಡಲು ನಡೆಸಿದ ವ್ಯವಸ್ಥಿತ ಷಡ್ಯಂತ್ರ:ಚೈತ್ರಾ ಕುಂದಾಪುರ
Recommended Video

ಮಂಗಳೂರು, ಅಕ್ಟೋಬರ್.26: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಕ್ಟೋಬರ್ 24, ಬುಧವಾರದಂದು ನಡೆದ ಎರಡು ಗುಂಪುಗಳ ಬೀದಿ ಕಾಳಗ ಹಾಗೂ ಹಲ್ಲೆ ಪ್ರಕರಣದ ಘಟನೆಯ ಕುರಿತು ಚೈತ್ರಾ ಕುಂದಾಪುರ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.
"ಹಲ್ಲೆಗೊಳಗಾದ ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಹಾಗೂ ಆಶಿತ್ ಕಲ್ಲಾಜೆ ಎಂಬುವವರು ತಮ್ಮ ಫೇಸ್ ಬುಕ್ ಖಾತೆ ಯಲ್ಲಿ ನನ್ನ ಬಗ್ಗೆ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಕೆಟ್ಟ ರೀತಿಯ ಕಮೆಂಟ್ ಗಳನ್ನು ಹಾಕಿದ್ದಾರೆ.
ಆದರೆ ನಾನು ಅದರ ಬಗ್ಗೆ ಯಾವುದೇ ತಕರಾರು ಎತ್ತಿಲ್ಲ. ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ಒಬ್ಬ ರೌಡಿ ಶೀಟರ್ ಆಗಿದ್ದು, ಬುಧವಾರದಂದು ಸಂಪುಟ ನರಸಿಂಹ ಮಠಕ್ಕೆ ಬಂದ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಆತನ ಸಹಚರರ ಜೊತೆ ನಮ್ಮ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಕಾರ್ ನ ಗ್ಲಾಸ್ ಗಳನ್ನು ಒಡೆಯಲು ಪ್ರಯತ್ನಿಸಿದ್ದಾರೆ" ಎಂದು ಚೈತ್ರಾ ಕುಂದಾಪುರ ಆರೋಪಿಸಿದ್ದಾರೆ ಮುಂದೆ ಓದಿ...

ಆತ್ಮರಕ್ಷಣೆಗೋಸ್ಕರ ಮಾಡಿದೆ
ಅಂದು ಘಟನೆ ನಡೆದಾಗ ನನ್ನ ಆತ್ಮರಕ್ಷಣೆಗೋಸ್ಕರ ಗುರುಪ್ರಸಾದ್ ಪಂಜಾ ಅವರನ್ನು ಹಿಂದಕ್ಕೆ ತಳ್ಳಿದೆ. ಗುರುಪ್ರಸಾದ್ ಪಂಜ ಹಾಗೂ ಆಶಿತ್ ಕಲ್ಲಾಜೆ ನನ್ನ ಬಗ್ಗೆ ಫೇಸ್ ಬುಕ್ ನಲ್ಲಿ ಹಾಕಿರುವ ಕಮೆಂಟ್ ಗಳನ್ನ ಒಮ್ಮೆ ನೋಡಿ. ಇದೆಲ್ಲಾ ನನ್ನ ಕೊಲೆ ಮಾಡಲು ನಡೆಸಿದ ವ್ಯವಸ್ಥಿತ ಷಡ್ಯಂತ್ರ ಎಂದು ಚೈತ್ರಾ ಕುಂದಾಪುರ ದೂರಿದ್ದಾರೆ.

ಸ್ಪಷ್ಟನೆ ನೀಡಿದ ಚೈತ್ರಾ
ಗುರುಪ್ರಸಾದ್ ಪಂಜ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರ ಕುಂದಾಪುರ ಹಾಗೂ 6 ಮಂದಿ ಆರೋಪಿಗಳಿಗೆ ಸುಳ್ಯ ನ್ಯಾಯಾಲಯ ನವೆಂಬರ್ 3 ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕಾರಾಗೃಹಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಗಲಾಟೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರಿಗೆ ಆದೇಶಿಸಿದ ನ್ಯಾಯಾಧೀಶರು
ಫೇಸ್ ಬುಕ್ ನಲ್ಲಿ ಚೈತ್ರಾ ಕುಂದಾಪುರ ಅವರ ವಿರುದ್ಧ ಪ್ರಕಟಿಸಿರುವ ಕಮೆಂಟ್ ಗಳಿಗೆ ಸುಳ್ಯದ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದು, ಪೋಲಿಸರು ಈ ಬಗ್ಗೆ ನಿಗಾವಹಿಸಬೇಕು ಎಂದು ಸೂಚಿಸಿದ್ದಾರೆ.

ಮಧ್ಯ ಪ್ರವೇಶಿಸಿದ ಆರ್ ಎಸ್ಎಸ್
ಇದೆಲ್ಲದರ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ವಿವಾದ ಇತ್ಯರ್ಥಕ್ಕೆ ಆರ್ ಎಸ್ ಎಸ್ ತಂಡವೊಂದನ್ನು ರಚಿಸಿ ಮಾತುಕತೆಗೆ ಮುಂದಾಗಿದೆ. ಈ ಕುರಿತು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಕ್ರಿಯಿಸಿದ್ದು, ಈ ವಿವಾದದ ಬಗ್ಗೆ ಮಾತುಕತೆ ನಡೆಸಲು ವಿಳಂಬವಾಗಿದೆ. ಹಿರಿಯರು ಕೂತು ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications