ಮಂಗಳೂರಿನಲ್ಲಿ ಬಂಟರ ಮಾತೃ ಸಂಘದಿಂದ ಪ್ರತಿಭಾ ಪುರಸ್ಕಾರ
ಮಂಗಳೂರು, ಸೆಪ್ಟೆಂಬರ್ 12: ಬಂಟರ ಯಾನೆ ನಾಡವರ ಮಾತೃಸಂಘ, ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ 2017 ನೇ ಸಾಲಿನಲ್ಲಿ SSLC ಮತ್ತು PUC ತರಗತಿಗಳಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಮಾತೃಸಂಘದ ಅಮೃತೋತ್ಸವ ಕಟ್ಟಡದಲ್ಲಿಇತ್ತೀಚೆಗೆ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮಾತನಾಡಿ, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಈ ಪ್ರೋತ್ಸಾಹ ಮತ್ತು ಸಹಾಯ ಧನ ವಿದ್ಯಾರ್ಥಿಗಳ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಇಲ್ಲದಿದ್ದರೂ, ನಿಮ್ಮೊಂದಿಗೆ ಮಾತೃಸಂಘ ಸದಾ ಇದೆ ಎಂಬ ವಿಚಾರವನ್ನು ನಿಮಗೆ ತಿಳಿಸಲು ಈ ಸಂದರ್ಭದಲ್ಲಿ ಬಯಸುತ್ತೇವೆ ಎಂದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ. ಜೈರಾಜ್ ರೈ ಮಾತನಾಡಿ, ವಿದ್ಯಾರ್ಥಿಗಳು ಮಾತೃಸಂಘದ ವತಿಯಿಂದ ಪಡೆಯುತ್ತಿರುವ ಸಹಾಯ ಹಾಗೂ ಪ್ರೋತ್ಸಾಹವನ್ನು ಸದುಪಯೋಗ ಪಡಿಸುತ್ತಾ ಮುಂದಕ್ಕೆ ಸಮಾಜಕ್ಕೆ ತಮ್ಮ ದುಡಿಮೆಯಲ್ಲಿ ಕಿಂಚಿತ್ತಾದರೂ ನೀಡುವುದರ ಮೂಲಕ ಋಣ ಸಂದಾಯ ಮಾಡುವವರಾಗಬೇಕು ಎಂದರು.
ಮಾತೃಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಎಸ್. ಶೆಟ್ಟಿ, ರಾಮಕೃಷ್ಣ ವಿದ್ಯಾಸಂಸ್ಥೆಯ ಸಂಚಾಲಕ ಕೃಷ್ಣಪ್ರಸಾದ್ ರೈ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಸಮಿತಿ ಸಂಚಾಲಕ ಎಸ್. ಜಯರಾಮ ಸಾಂತ ಸ್ವಾಗತಿಸಿ, ಸಹ ಸಂಚಾಲಕ ಕೆ. ಉಮೇಶ್ ರೈ ವಂದನಾರ್ಪಣೆಗೈದರು. ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕ ಗೋಪಾಲ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು.












Click it and Unblock the Notifications