ಮಂಗಳೂರು: ಪಿಡಿಓ ಅಮಾನತಿಗೆ ಗ್ರಾಮಸ್ಥರ ಆಗ್ರಹ
ಮಂಗಳೂರು, ಜೂನ್.27: ಸುರತ್ಕಲ್ನ ಪೆರ್ಮುದೆ ಗ್ರಾಮ ಪಂಚಾಯತ್ ಪಿಡಿಓ ಹಸನಬ್ಬ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಕುತ್ತೆತ್ತೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೃಷಿಕರಿಗೆ ಕಂಟಕಪ್ರಾಯವಾಗಿ ವರ್ತಿಸುತ್ತಿರುವ ಬಗ್ಗೆ ಬೇಸತ್ತ ಕುತ್ತೆತ್ತೂರು ಜಂತಬೆಟ್ಟು ಭಾಗದ ಸಾರ್ವಜನಿಕರು ಎರಡನೇ ಬಾರಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಮೊರೆ ಹೋಗಿದ್ದಾರೆ. ಪಿಡಿಓ ಅವರನ್ನು ತಕ್ಷಣ ಅಮಾನತುಗೊಳಿಸಿ ಇವರಿಗೆ ಸಹಕಾರ ನೀಡುತ್ತಿರುವ ಗ್ರಾಮಕರಣಿಕರ ಮೇಲೂ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಒತ್ತಾಯಿಸುತ್ತಿದ್ದಾರೆ.[ಮಂಗಳೂರು:ಚರ್ಚ್ ಫಾದರ್ಗಳಿಂದ ಮನೆ ನೆಲಸಮ]
ಕುತ್ತೆತ್ತೂರು ಗ್ರಾಮದ ಸರ್ವೆ ನಂಬ್ರ 34 ಮತ್ತು 36ರಲ್ಲಿ ಜಮೀನನ್ನು ನಿಯಮಾವಳಿಗಳನ್ನು ಮೀರಿ ಭೂಪರಿವರ್ತನೆ ಮಾಡಿ ಸಮತಟ್ಟುಗೊಳಿಸಿದ ಕಾರಣ ಮಳೆಗಾಲದಲ್ಲಿ ಈ ಭಾಗದ ಕೃಷಿ ಜಮೀನಿಗೆ ಕೆಸರು ಮಣ್ಣು ಸೇರಿ ತೊಂದರೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ದ.ಕ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ಈ ಹಿಂದೆ ದೂರು ನೀಡಿದ್ದರು. ಈ ಬಗ್ಗೆ ಪಿಡಿಓರನ್ನು ಕರೆಸಿ ಕಾರ್ಯನಿರ್ವಹಣಾಧಿಕಾರಿಯವರು ಛೀಮಾರಿ ಹಾಕಿದ್ದರು. ಕೃಷಿಕರ ಜಮೀನಿಗೆ ಕೆಸರು ಮಣ್ಣು ಸೇರದಂತೆ ಭದ್ರವಾದ ಕಲ್ಲಿನ ಆವರಣ ಗೋಡೆ ನಿರ್ಮಿಸಿ ಆನಂತರ ಮನೆ ಕಟ್ಟಲು ಅನುಮತಿ ನೀಡಬೇಕೆಂದು ಆದೇಶ ನೀಡಿದ್ದರು.

ಗ್ರಾಮಸ್ಥರ ಆರೋಪಗಳು:
ಕಾರ್ಯನಿರ್ವಹಣಾಧಿಕಾರಿ ಅದೇಶ ನೀಡಿದ ಬಳಿಕವೂ ಗ್ರಾಮಸ್ಥರ ವಿರೋಧವನ್ನೂ ಲೆಕ್ಕಿಸದೆ ಪಿಡಿಓ ಕಿತಾಪತಿಯಿಂದ ಈ ಜಮೀನಿನಲ್ಲಿ ಕೊಳವೆಬಾವಿಯನ್ನೂ ತೋಡಿಸಲಾಗಿತ್ತು. ಸಮತಟ್ಟು ಮಾಡಲಾದ ಜಮೀನಿನ ಸುತ್ತ ಗ್ರಾಮಸ್ಥರಿಗೆ ಮತ್ತು ಕಾರ್ಯನಿರ್ವಹಣಾಧಿಕಾರಿಯವರ ಕಣ್ಣಿಗೆ ಮಣ್ಣೆರಚಲು ಕಳಪೆ ಕಾಮಗಾರಿಯಿಂದ ತಡೆಗೋಡೆ ನಿರ್ಮಿಸಿ ಅದನ್ನೇ ಆಧಾರವಾಗಿ ಬಳಸಿ ಸಮತಟ್ಟು ಮಾಡಿದ ಜಮೀನಿನಲ್ಲಿ ಮನೆಕಟ್ಟಲು ಪಿಡಿಓ ಪಂಚಾಯತ್ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅನುಮತಿ ನೀಡಿದ್ದಾರೆ.
.

ಎರಡೇ ಮಳೆಗೆ ಸಂಪೂರ್ಣ ಕುಸಿದ ತಡೆಗೋಡೆ :
ಆದರೆ ಈ ಬಾರಿ ಎರಡೇ ಮಳೆಗೆ ತಡೆಗೋಡೆ ಸಂಪೂರ್ಣವಾಗಿ ಕುಸಿದುಬಿದ್ದು ಮತ್ತೆ ಬಡ ರೈತರ ಜಮೀನಿಗೆ ಕೆಸರು ಮಣ್ಣು ಸೇರಿ ಕೃಷಿ ಮಾಡಲು ತೊಂದರೆಯಾಗಿದೆ. ಬಡ ಕೃಷಿಕರಿಗೆ ತೊಂದರೆಯನ್ನು ಉಂಟುಮಾಡಿ ಕೃಷಿಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಲು ಸರ್ವ ಸಹಕಾರವನ್ನೂ ನೀಡುತ್ತಿರುವ ಪಿಡಿಓ ವರ್ತನೆ, ಅದಕ್ಕೆ ಗ್ರಾಮಕರಣಿಕರು ಸಾತ್ ನೀಡುತ್ತಿರುವುದನ್ನು ಗ್ರಾಮಸ್ಥರು ಖಂಡಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ:
ಕುತ್ತೆತ್ತೂರಿನ ಜಂತಬೆಟ್ಟು ಪರಿಸರದಲ್ಲಿ ಕೃಷಿಕರಿಗೆ ತೊಂದರೆಯಾಗಿರುವುದು ನಿಜ. ಈ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇನೆ. ಕಳಪೆ ಕಾಮಗಾರಿ ಕಣ್ಣಿಗೆ ಕಟ್ಟುವಂತೆ ಕಾಣುತ್ತಿದೆ. ಅಧಿಕಾರಿಗಳು ತಪ್ಪಿತಸ್ಥರಾಗಿದ್ದಾರೆ ಈ ಬಗ್ಗೆ ಕ್ರಮಕೈಗೊಳ್ಳಲು ಆಗ್ರಹಿಸುತ್ತೇನೆ.
ಸಂದೇಶ್ - ಪೆರ್ಮುದೆ ಗ್ರಾಮಪಂಚಾಯತ್ ಅಧ್ಯಕ್ಷರು.

ತನಿಖೆ ನಡೆಸಲಾಗುವುದು
ಅಧಿಕಾರಿಗಳ ಕ್ರಮದಿಂದ ಸಾಗುವಳಿದಾರರಿಗೆ ತೀವ್ರವಾದ ತೊಂದರೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗಳಲ್ಲಿ ವಿನಂತಿಸುತ್ತೇನೆ.
ರಿತೇಶ್ ಶೆಟ್ಟಿ, - ಜಿಲ್ಲಾಪಂಚಾಯತ್ ಸದಸ್ಯರು












Click it and Unblock the Notifications