ಮಂಗಳೂರಿಗೆ ಬಾಂಬರ್ ಆದಿತ್ಯ ರಾವ್: ವಿವರವಾದ ವಿಚಾರಣೆಗೆ ಪೊಲೀಸ್ ಸಜ್ಜು
ಮಂಗಳೂರು, ಜನವರಿ 22: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಇಂದು ಬೆಂಗಳೂರಿನಲ್ಲಿ ಶರಣಾಗಿದ್ದು ಆತನನ್ನು ಮಂಗಳೂರು ಪೊಲೀಸರು ಒಂದನೇ ಎಸಿಎಂಎಂ ನ್ಯಾಯಾಲಯದ ಅನುಮತಿ ಮೇರೆಗೆ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಬಂದರು.
ರಾತ್ರಿ 9 ರ ಸುಮಾರಿಗೆ ಆದಿತ್ಯ ರಾವ್ ಇದ್ದ ಸ್ಪೈಸ್ ಜೆಟ್ ವಿಮಾನ ಮಂಗಳೂರು ವಿಮಾನ ನಿಲ್ದಾಣ ತಲುಪಿತು. ಆದಿತ್ಯ ರಾವ್ ಅನ್ನು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಪಣಂಬೂರು ಎಸಿಪಿ ಕಚೇರಿಗೆ ಕರೆತರಲಾಯಿತು.
ಇಂದು ರಾತ್ರಿ ಎಸಿಪಿ ಕಚೇರಿಯಲ್ಲೇ ಆದಿತ್ಯರಾವ್ ಇರಲಿದ್ದಾನೆ. ಅಲ್ಲಿಯೇ ಆತನನ್ನು ವಿಚಾರಣೆ ನಡೆಸಲು ಮಂಗಳೂರು ಪೊಲೀಸರು ಸಜ್ಜಾಗಿದ್ದಾರೆ.

ಆದಿತ್ಯ ರಾವ್ ಮಂಗಳೂರಿಗೆ ತಲುಪಿದ ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ಆಯುಕ್ತ ಹರ್ಷ, 'ಆರೋಪಿ ಆದಿತ್ಯ ರಾವ್ ಅನ್ನು ಸವಿವರ ವಿಚಾರಣೆಗೆ ಒಳಪಡಿಸಲಾಗುವುದು' ಎಂದಿದ್ದಾರೆ.
'ಪ್ರಕರಣ ಸಂಬಂಧ ಈಗಾಗಲೇ ಹಲವು ಸಾಕ್ಷ್ಯಗಳನ್ನು ಕಲೆಹಾಕಿದ್ದೇವೆ, ಅವುಗಳ ಆಧಾರದಲ್ಲಿ ವಿಚಾರಣೆ ನಡೆಸಲಿದ್ದೇವೆ, ನಾಳೆ (ಗುರುವಾರ) ಮಧ್ಯಾಹ್ನ 1 ಗಂಟೆ ಒಳಗೆ ಇಲ್ಲಿನ ಸ್ಥಳೀಯ ಕೊರ್ಟ್ ಮುಂದೆ ಹಾಜರುಪಡಿಸಲಿದ್ದೇವೆ' ಎಂದು ಹರ್ಷ ಹೇಳಿದರು.
'ಇಂದಿನ ವಿಚಾರಣೆಯಲ್ಲಿ ಹೆಚ್ಚಿನ ವಿಷಯಗಳು ಗೊತ್ತಾದರೆ ಮಾಹಿತಿ ನೀಡುತ್ತೇವೆ' ಎಂದ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದಾರೆ.












Click it and Unblock the Notifications