ದೇಯಿ ಬೈದೇತಿ ವಿಗ್ರಹಕ್ಕೆ ಅವಮಾನ, ಪಡುಮಲೆಗೆ ಬಿಜೆಪಿ ಜಾಥಾ
ಮಂಗಳೂರು, ಅಕ್ಟೋಬರ್ 10: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೇತಿ ವಿಗ್ರಹಕ್ಕೆ ನಡೆಸಿದ ಅವಮಾನ ಪ್ರಕರಣ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ.
ದೇಯಿ ಬೈದೇತಿ ವಿಗ್ರಹಕ್ಕೆ ಅವಮಾನ ಪ್ರಕರಣವನ್ನು ಖಂಡಿಸಿರುವ ಬಿಜೆಪಿ, ತನ್ನ ಪಕ್ಷದ ವತಿಯಿಂದ ಇವತ್ತು ಪುತ್ತೂರಿನಿಂದ ಪಡುಮಲೆಗೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಜಾಥಾ ಆರಂಭಗೊಂಡಿದೆ. ಪಡುಮಲೆಯಲ್ಲಿರುವ ದೇಯಿ ಬೈದೇತಿ ವನದ ತನಕ ಈ ಜಾಥಾ ನಡೆಯಲಿದೆ.

13 ಕಿಲೋ ಮೀಟರ್ ಗಳ ಕಾಲ್ನಡಿಗೆ ಜಾಥಾ
ಜಾಥಾದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಕಾರ್ಯಕರ್ತರು ಸುಮಾರು 13 ಕಿಲೋಮೀಟರ್ ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಲಿದ್ದಾರೆ.

ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ
ಜಾಥಾದಲ್ಲಿ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಜಾಥಾದಲ್ಲಿ ಅನೇಕ ಸಂಘ ಸಂಸ್ಥೆಗಳ ಪ್ರಮುಖರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದ ಚಿತ್ರ
ಕೆಲವು ದಿನಗಳ ಹಿಂದೆ ಪುತ್ತೂರಿನ ಪಡುಮಲೆಯಲ್ಲಿರುವ ದೇಯಿ ಬೈದೇತಿ ಔಷಧವನದಲ್ಲಿನ ದೇಯಿ ಬೈದೇತಿ ಮೂರ್ತಿಯ ಜೊತೆ ಅಶ್ಲೀಲವಾಗಿ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಹರಿಬಿಟ್ಟಿದ್ದ.

ಆರೋಪಿಯನ್ನು ಬಂಧಿಸಿದ್ದ ಪೊಲೀಸರು
ದೇಯಿ ಬೈದೇತಿ ವಿಗ್ರಹಕ್ಕೆ ಅವಮಾನ ಮಾಡಿದ ಆರೋಪಿಯನ್ನು ಪೊಲೀಸರು ನಂತರ ಬಂಧಿಸಿದ್ದರು. ಆದರೆ, ಈ ಷಡ್ಯಂತ್ರಗಳ ಹಿಂದೆ ಇರುವ ಆರೋಪಿಗಳನ್ನು ಬಂಧಿಸಬೇಕೆಂಬ ನೆಪ ಮುಂದಿಟ್ಟು ಬಿಜೆಪಿ ಈ ಜಾಥಾವನ್ನು ಏರ್ಪಡಿಸಿದೆ.












Click it and Unblock the Notifications