ನಾರಾಯಣ ಗುರು ಸ್ತಬ್ಧ ಚಿತ್ರ; ಆರೋಪಗಳಿಗೆ ಉತ್ತರಿಸಿದ ಬಿಜೆಪಿ ನಾಯಕರು

ಮಂಗಳೂರು, ಜನವರಿ 18; ಗಣರಾಜ್ಯೋತ್ಸವ ದಿನದಂದು ದೆಹಲಿಯ ರಾಜ್‌ಪಥ್‌ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ರಾಜ್ಯ ಕಳುಹಿಸಿದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಕೇಂದ್ರದ ನಡೆಯ ಬಗ್ಗೆ ಸಾಕಷ್ಟು ಪರ-ವಿರುದ್ಧ ಟೀಕೆಗಳು ನಡೆಯುತ್ತಿದೆ. ಬಿಲ್ಲವ ಸಮಾಜ ಸೇರಿದಂತೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ನಾರಾಯಣ ಗುರುಗಳಿಗೆ ಅಪಮಾನ ಮಾಡಿದೆ ಎಂಬ ಆರೋಪ ಮಾಡಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ ನಾಯಕರು, ಈ ಬಾರಿ ಗಣರಾಜ್ಯೋತ್ಸವಕ್ಕೆ ಕೇರಳದ ಸ್ತಬ್ಧಚಿತ್ರ ಆಯ್ಕೆ ಪ್ರಕ್ರಿಯೆಯಲ್ಲಿಯೇ ಇರಲಿಲ್ಲ. ಇದೊಂದು ರಾಜಕೀಯ ಆಟ ಅಂತಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ನಾರಾಯಣ ಗುರುಗಳಿಗೆ ಅವಮಾನ ಮಾಡಿದೆ ಅಂತಾ ಬಿಲ್ಲವ ಸಮಾಜದ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಾರಾಯಣ ಗುರು ವಿಚಾರ ವೇದಿಕೆಯ ಮುಖಂಡರು, "ನಾರಾಯಣ ಗುರುಗಳು ಶೋಷಿತ, ದಮನಿತರ ಧ್ವನಿಯಾಗಿದ್ದರು. ಕೇರಳದಲ್ಲಿ ಸಾಕ್ಷರತಾ ಕ್ರಾಂತಿ ಮಾಡಿದ ಕೀರ್ತಿ ನಾರಾಯಣ ಗುರುಗಳಿಗೆ ಇದೆ" ಎಂದರು.

BJP Leaders Clarification On Tableau Of Sree Narayana Guru

"ಗಾಂಧಿ, ಅಂಬೇಡ್ಕರ್, ಟಾಗೋರ್ ಮೊದಲಾದವರು ನಾರಾಯಣಗುರು ಅನುಯಾಯಿಗಳಾಗಿದ್ದರು. ಅಂತಹ ಮಹಾಪುರುಷನಿಗೆ ಕೇಂದ್ರ ಸರಕಾರ ಅಪಮಾನ ಮಾಡಿರುವುದು ಅಕ್ಷಮ್ಯವಾಗಿದೆ‌‌. ನಾರಾಯಣ ಗುರು ಬದಲಿಗೆ ಶಂಕರಾಚಾರ್ಯ ಅವರ ಟ್ಯಾಬ್ಲೋ ಆಯ್ಕೆ ಮಾಡಲಾಗಿದೆ. ನಾವು ಶಂಕರಾಚಾರ್ಯರ ವಿರೋಧಿಗಳಲ್ಲ. ಆದರೆ ನಾರಾಯಣ ಗುರುಗಳನ್ನು ಅಪಮಾನಿಸಿ ರುವುದನ್ನು ಸಹಿಸುವುದಿಲ್ಲ" ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಾರಾಯಣ ಗುರು ವಿಚಾರ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್, "ಕೇಂದ್ರ ಸರ್ಕಾರ ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ ಮಾಡಿರುವುದು ಸರಿಯಲ್ಲ. ನಾರಾಯಣ ಗುರು ಹಿಂದುಳಿದ ವರ್ಗದ ಜನರ ಧ್ವನಿಯಾಗಿದ್ದವರು. ಸ್ತಬ್ಧ ಚಿತ್ರ ಆಯ್ಕೆ ಸಮಿತಿ ಮಾಡಿರುವ ಪ್ರಮಾದವನ್ನು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಿ ಸರಿ ಮಾಡಬೇಕು. ಮೋದಿ ಸರಕಾರ ಕೂಡಲೇ ಈ ತಪ್ಪನ್ನು ತಿದ್ದಿಕೊಳ್ಳಬೇಕು. ಹಿಂದುಳಿದ ವರ್ಗಗಳ ಕಡೆಗಣನೆಯನ್ನು ನಾವು ಸಹಿಸುವುದಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ" ಎಚ್ಚರಿಕೆ ನೀಡಿದ್ದಾರೆ.

ಇನ್ನು ಕೇಂದ್ರದ ನಿರ್ಧಾರದ ಬಗ್ಗೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಕೂಡಾ ಆಕ್ರೋಶ ಹೊರ ಹಾಕಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ನಿರಾಕರಿಸಿರುವ ಕೇಂದ್ರ ಸರಕಾರದ ತೀರ್ಮಾನದಿಂದ ಅಪಾರ ನೋವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತ ಗಮನ ಹರಿಸಿ ಪ್ರಮಾದವನ್ನು ತತ್‌ಕ್ಷಣ ಸರಿಪಡಿಸುವಂತೆ" ಆಗ್ರಹಿಸಿದ್ದಾರೆ.

"ನಾರಾಯಣ ಗುರುಗಳು ಮಾನವತಾ ಸಿದ್ಧಾಂತದ ಪ್ರತಿಪಾದಕರಾಗಿದ್ದು ಸಮಸ್ತ ಹಿಂದೂ ಸಮಾಜ ಮತ್ತು ಭಾರತೀಯರಿಗೆ ಶ್ರೇಷ್ಠ ಸಂತರೆನಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲೂ ಅವರ ಭಕ್ತರು, ಅನುಯಾಯಿಗಳಿದ್ದಾರೆ. ಅಸಮಾನತೆ, ಅಸ್ಪೃಶ್ಯತೆಯ ವಿರುದ್ಧದ ಅವರ ಚಳವಳಿಯನ್ನು ಕಂಡು ಮಹಾತ್ಮಾ ಗಾಂಧೀಜಿಯವರೇ ಅವರನ್ನು ಭೇಟಿ ಮಾಡಿ ಸ್ಫೂರ್ತಿ ಪಡೆದಿದ್ದರು. ಹಿಂದುತ್ವ ಎಂಬ ಭಾವನಾತ್ಮಕ ವಿಷಯಇಟ್ಟುಕೊಂಡು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರಕಾರದ ಈ ಕ್ರಮ ಇಡೀ ಹಿಂದೂ ಸಮಾಜಕ್ಕೆ ಮಾಡಿರುವ ಅವಮಾನವಾಗಿದೆ"
ಎಂದು ಪೂಜಾರಿ ಹೇಳಿದ್ದಾರೆ.

ಬಿಜೆಪಿ ಸ್ಪಷ್ಟನೆ; ವಿವಾದವನ್ನು ಪಡೆಯುತ್ತಿರುವ ಸ್ತಬ್ಧಚಿತ್ರ ತಿರಸ್ಕಾರ ವಿಚಾರದ ಕುರಿತು ಟ್ವೀಟ್ ಮೂಲಕ ಸ್ಪಷ್ಟ ಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಪ್ರಜಾಪ್ರಭುತ್ವ ದಿನದಂದು ದೆಹಲಿಯ ರಾಜಪಥದಲ್ಲಿ ಚಲಿಸುವ ಟ್ಯಾಬ್ಲೋಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳಿವೆ.‌ ಕೇಂದ್ರ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕೇರಳ ನಿರ್ಲಕ್ಷ್ಯ ಮಾಡಿದೆ. ಕೇರಳ ಸರ್ಕಾರದ ಧೋರಣೆಯಿಂದ ರದ್ದಾಗಿದೆ ವಿನಾ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ರದ್ದು ಮಾಡಿಲ್ಲ" ಎಂದು ಸ್ಪಷ್ಟ ಪಡಿಸಿದ್ದಾರೆ.

ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕೂಡಾ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಗಣರಾಜ್ಯೋತ್ಸವ ಪೆರೇಡ್ ಬಗ್ಗೆ ಕೇರಳ ರಾಜ್ಯವು ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಸೃಸ್ಟಿಸುತ್ತಿರುವುದು ಸರಿಯಲ್ಲ. ಪ್ರತಿ ವರ್ಷ ಜನವರಿ 26 ರ ಗಣರಾಜ್ಯೋತ್ಸವದಂದು ಘನವೆತ್ತ ಭಾರತ ಸರ್ಕಾರದಿಂದ ಪ್ರತಿ ವರ್ಷ ಗಣರಾಜ್ಯೋತ್ಸವ ಪೆರೇಡ್ ಆರಂಭದಿಂದ ಈವರೆಗೆ ತನ್ನದೇ ಆದಂತಹ ನಿಲುವನ್ನು ಇಟ್ಟುಕೊಂಡು ಪೆರೇಡ್ ನಡೆಯುತ್ತ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ.

ಒಟ್ಟು ಈವರೆಗೆ ನಡೆದುಬಂದ ಪದ್ಧತಿಯಂತೆ ದೇಶದಲ್ಲಿರುವ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 36 ರಾಜ್ಯಗಳೆಂದು ಪರಿಗಣಿಸಿ ಪ್ರತಿ ರಾಜ್ಯವು ಗಣರಾಜ್ಯೋತ್ಸವ ನಿಮಿತ್ತ ಸ್ತಬ್ಧಚಿತ್ರಗಳನ್ನು ಗಣರಾಜ್ಯೋತ್ಸವ ಪೆರೇಡ್‌ಗೆ ಕಳುಹಿಸುವುದು ಪದ್ಧತಿ. ಆದರೆ ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡಿಗೆ 12 ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅಂದರೆ 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇರುವ ನಮ್ಮ ದೇಶದಲ್ಲಿ ಪ್ರತಿ ರಾಜ್ಯವೂ ಪ್ರತಿವರ್ಷ ಪೆರೇಡ್‌ನಲ್ಲಿ ಭಾಗವಹಿಸುವ ಅವಕಾಶವಿರುವುದಿಲ್ಲ. ಇದು ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆರಂಭವಾದಾಗಿನಿಂದ ನಡೆದುಬಂದ ಸತ್ಸಂಪ್ರದಾಯ ಮತ್ತು ನಿಯಾಮವಳಿ ಆಗಿರುತ್ತದೆ. ಈ ಸಂಪ್ರದಾಯದಂತೆ 2018 ಮತ್ತು 2021ರಲ್ಲಿ ಕೇರಳ ರಾಜ್ಯವು ತನ್ನ ಶಬ್ದ ಚಿತ್ರಗಳೊಂದಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿತ್ತು ಎಂದು ತಿಳಿಸಿದ್ದಾರೆ.

ಈ ಪುನರಾವರ್ತಿತ ನಿಯಮದಂತೆ ಕಳೆದ ವರ್ಷಗಳಲ್ಲಿ ಭಾಗವಹಿಸಿದ ರಾಜ್ಯಗಳನ್ನು ಬಿಟ್ಟು ಉಳಿದ 12 ರಾಜ್ಯಗಳಲ್ಲಿ ಈ ವರ್ಷ ಭಾಗವಹಿಸುವ ಅವಕಾಶವಿರುತ್ತದೆ ವಿನಃ ಕಳೆದ ವರ್ಷ ಅಂದರೆ 2021ರಲ್ಲಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿರುವ ಕೇರಳ ರಾಜ್ಯಕ್ಕೆ ಈ ವರ್ಷ ನಿಯಾಮವಳಿಯಂತೆ ಅವಕಾಶವಿರುವುದಿಲ್ಲ. ಆದರೆ ಈ ನಿಯಮಾವಳಿ ತಿಳಿದಿದ್ದರೂ ಕೂಡ ಕೇರಳ ರಾಜ್ಯವು ನಾರಾಯಣ ಗುರುಗಳ ವಿಚಾರವನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದವನ್ನು ಹುಟ್ಟು ಹಾಕುತ್ತಿದೆ ಅಂತಾ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

2021ರಲ್ಲಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ್ದ ಕೇರಳ ರಾಜ್ಯಕ್ಕೆ ಇನ್ನೂ ಮೂರು ವರ್ಷ ಬಿಟ್ಟು ಅಂದರೆ 2024ರಲ್ಲಿ ನಿಯಮಾವಳಿ ಪ್ರಕಾರ ಮತ್ತೊಮ್ಮೆ ಅವಕಾಶ ಎಂಬುದಾಗಿ ತಿಳಿದಿದ್ದರೂ ಕೂಡ ಕೇರಳ ಸರ್ಕಾರ ಈ ವರ್ಷವು ಭಾಗವಹಿಸುವ ಅವಕಾಶ ಕೋರಿದ್ದು ನಡೆದು ಬಂದ ಸಂಪ್ರದಾಯ ನಿಯಮಾವಳಿಯಂತೆ ಕೇಂದ್ರ ಸರ್ಕಾರ ಈ ವರ್ಷ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ. ಈ ಎಲ್ಲಾ ನಿಯಮಾವಳಿಗಳು ಗೊತ್ತಿರುವ ಕೇರಳ ರಾಜ್ಯವು ಶ್ರೀ ನಾರಾಯಣ ಗುರುಗಳ ವಿಚಾರವನ್ನು ಎಳೆದು ತಂದು ವಿವಾದವನ್ನು ಹುಟ್ಟು ಹಾಕುತ್ತಿರುವುದು ಶೋಭೆ ತರುವಂತದ್ದಲ್ಲ ಎಂದು ಹೇಳಿದ್ದಾರೆ.

ಕಮ್ಯುನಿಸ್ಟ್ ನಿಲುವು ಹೊಂದಿರುವ ಕೇರಳ ಸರಕಾರವು ಈ ಹಿಂದೆ ಹಿಂದೂ ದೇವಾಲಯಗಳ ಬಗ್ಗೆ ತೋರಿರುವ ನಿಲುವು ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗಳು ಇಂತಹ ಹಲವಾರು ಹಿಂದೂ ವಿರೋಧಿ ನೀತಿಗಳಿಂದ ಕುಖ್ಯಾತಿ ಹೊಂದಿರುವ ಕಮ್ಯುನಿಸ್ಟರಿಂದ ಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ನಾವು ಕಲಿಯಬೇಕಾಗಿಲ್ಲ. ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು ಹಾಗೂ ಪೂಜ್ಯಾನೀಯರು ಅಂತಾ ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಆರಂಭದಿಂದಲೂ ನಡೆದು ಬಂದಿರುವ ಸಂಪ್ರದಾಯ ಮತ್ತು ನಿಯಾಮವಳಿಯನ್ನು ತಿಳಿದುಕೊಂಡು ಕೇರಳ ಸರ್ಕಾರವು ವಿವಾದ ಮಾಡದೇ ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕೆಂದು ಈ ಮೂಲಕ ಕೇರಳ ಸರಕಾರವನ್ನು ಆಗ್ರಹಿಸುತ್ತೇನೆ ಅಂತಾ ಸುನೀಲ್ ಕುಮಾರ್ ತಿಳಿಸಿದ್ದಾರೆ.

Recommended Video

      IPL 2022 Exclusive: ಎಲ್ಲಾ ಒತ್ತಡದಿಂದ ಮುಕ್ತರಾದ Virat Kohli ಈಗ RCB ಗೆ ಮತ್ತೆ ಕ್ಯಾಪ್ಟನ್!! | Oneindia

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+