ಬಿಜೆಪಿಯೊಂದು ಡ್ರಾಮಾ ಕಂಪೆನಿ, ಮೋದಿ ಇದರ ಮಾಲಿಕ: ರಾಮಲಿಂಗಾ ರೆಡ್ಡಿ
ಮಂಗಳೂರು, ಜನವರಿ 12: ಮಹಾದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, "ಬಿಜೆಪಿಯೊಂದು ಡ್ರಾಮಾ ಕಂಪೆನಿ. ನರೇಂದ್ರ ಮೋದಿ ಕಂಪನಿಯ ಮಾಲಕರು. ಅಮಿತ್ ಶಾ ಅದರ ಮ್ಯಾನೇಜರ್," ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದ್ದಾರೆ.
"ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಕಂಪನಿಯ ಪಾತ್ರಧಾರಿಗಳು," ಎಂದು ಹೇಳಿದ ಅವರು, "ಇವರ ನಾಟಕದಿಂದ ರೈತರಿಗೆ ತೊಂದರೆಯಾಗುತ್ತಿದೆ. ಆದರೆ, ಕಾಂಗ್ರೆಸ್ ಏನಿದ್ದರೂ ರೈತರ ಪರವಾಗಿದೆ ಮತ್ತು ರೈತರ ಪರವಾಗೇ ಇರುತ್ತದೆ," ಎಂದು ತಿಳಿಸಿದರು.
ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸ್ ವಸತಿ ಗೃಹಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಅವರು, "ಕರಾವಳಿಯಲ್ಲಿ ಸಂಘಟನೆಗಳು, ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಕೋಮು ಗಲಾಟೆ ಆಗುತ್ತಿದೆ. ಇದಕ್ಕೆಲ್ಲ ಬಲಪಂಥೀಯರು, ಪಿಎಫ್ಐನವರ ಓವರ್ ಆಕ್ಟಿಂಗ್ ಕಾರಣ. ಇವರು ಸ್ವಲ್ವ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ. ಜನರಿಗೆ ಈ ಗಲಾಟೆ ಯಾವುದೂ ಬೇಕಾಗಿಲ್ಲ," ಎಂದು ಹೇಳಿದರು.

"ಇನ್ನು ತಕ್ಷಣಕ್ಕೆ ಸಂಘಟನೆಗಳ ನಿಷೇಧದ ಯಾವ ಪ್ರಸ್ತಾಪವೂ ಇಲ್ಲ. ಮಾಡಿದರೆ ಎರಡೂ ಕಡೆಯ ಸಂಘಟನೆಗಳನ್ನು ನಿಷೇಧ ಮಾಡಬೇಕು. ಸದ್ಯ ಮುಖ್ಯಮಂತ್ರಿ ಪ್ರವಾಸದಲ್ಲಿದ್ದಾರೆ. ಅವರು ಬಂದ ನಂತರ ಈ ಬಗ್ಗೆ ಪರಿಶೀಲಿಸುತ್ತೇವೆ," ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
ಇದೇ ವೇಳೆ ಬಿಜೆಪಿಯ ದ್ವಂದ್ವ ನೀತಿಯನ್ನು ಪ್ರಶ್ನಿಸಿದ ರೆಡ್ಡಿ, "ಮೂಡಿಗೆರೆಯಲ್ಲಿ ಧನ್ಯಶ್ರೀ ಪ್ರಾಣ ಹೋಗಿದ್ದಕ್ಕೆ ಬೆಲೆ ಇಲ್ಲವೇ? ಇವರು ಯಾಕೆ ಅಲ್ಲಿ ಹೋಗಿ ಖಂಡಿಸುತ್ತಿಲ್ಲ. ದ್ವಂದ್ವ ನೀತಿ ಯಾಕೆ? ಆ ಗಲಾಟೆಯಲ್ಲಿರೋದು ಎಲ್ಲರೂ ಯುವಮೋರ್ಚಾದವರು. ಪೊಲೀಸರು ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಥರದ ಸಂಘಟನೆಗಳಿಗೆ ಜನರೇ ರೊಚ್ಚಿಗೆದ್ದು ಉತ್ತರ ನೀಡಲಿದ್ದಾರೆ," ಎಂದು ಅವರು ಹೇಳಿದರು.












Click it and Unblock the Notifications