ಮೂಡುಬಿದಿರೆ: ಪ್ರಶಾಂತ್ ಪೂಜಾರಿ ಕುಟುಂಬಕ್ಕೆ 10 ಲಕ್ಷ ರೂ
ಮೂಡುಬಿದಿರೆ, ಅ, 17 : ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಗೆ ವಿಹಿಂಪ ಮತ್ತು ಬಜರಂಗದಳ ಅಕ್ಟೋಬರ್ 15ರ ಗುರುವಾರ ಪದ್ಮಾವತಿ ಕಲಾ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಪೂಜಾರಿಯವರ ಕುಟುಂಬಕ್ಕೆ 10ಲಕ್ಷ ಪರಿಹಾರ ನೀಡಿತು.
ಪ್ರಶಾಂತ್ ಪೂಜಾರಿಯವರ ಕುಟುಂಬಕ್ಕೆ ಅರ್ಥಿಕ ನೆರವು ನೀಡುವ ಹಿನ್ನೆಲೆಯಲ್ಲಿ ಬಿಜೆಪಿ, ಸಂಘ ಪರಿವಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ 10 ಲಕ್ಷ ರೂ. ಮೊತ್ತದ ಚೆಕ್ಕನ್ನು ಸಂಗ್ರಹಿಸಲಾಗಿತ್ತು. ಆರ್ಎಸ್ಎಸ್ ಮಧ್ಯಕ್ಷೇತ್ರೀಯ ಪ್ರಮುಖ್ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮೃತರ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು.[ಹಂತಕರನ್ನು ಬಂಧಿಸದಿದ್ದರೆ ದಕ ಜಿಲ್ಲೆ ಬಂದ್: ಭಜರಂಗ ದಳ]

ಚೆಕ್ ಹಸ್ತಾಂತರಿಸಿದ ಬಳಿಕ ಮಾತನಾಡಿದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು, 'ಕಾಂಗ್ರೆಸ್ ಮತ ಬ್ಯಾಂಕ್ ಪದ್ದತಿ ಅನುಸರಿಸುತ್ತಿದ್ದು, ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡಿ, ಹಿಂದೂಗಳನ್ನು ಅವರ ವಿರುದ್ಧ ಎತ್ತಿಕಟ್ಟುತ್ತಿದೆ. ಇದರಿಂದ ಕರಾವಳಿ ಸೌಹಾರ್ದ ನಾಶವಾಗುವಂತಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯ ಗೋವು ಹಾಗೂ ನಮ್ಮ ಮನೆಯ ಸ್ತ್ರೀಯರನ್ನು ರಕ್ಷಿಸಲು ಪ್ರತಿಯೊಬ್ಬರೂ ಹಿಂದುತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಶಾಂತನ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಪ್ರಶಾಂತ್ ನ ಹಿಂದೂಪರ ಕೆಲಸಗಳು ಎಲ್ಲರಿಗೂ ಸ್ಫೂರ್ತಿ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ., ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್, ವಿಹಿಂಪ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಮುಖಂಡರಾದ ಭುಜಂಗ ಕುಲಾಲ್, ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಕೆ.ಪಿ.ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್, ಕೆ.ಪಿ.ಸುಚರಿತ ಶೆಟ್ಟಿ, ಪ್ರಶಾಂತ್ ತಂದೆ ಆನಂದ ಪೂಜಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications