ರಮ್ಯಾ ವಿರುದ್ಧ ಬೆಳ್ತಂಗಡಿಯಲ್ಲಿ ಕ್ರಿಮಿನಲ್ ಕೇಸ್?
ಬೆಳ್ತಂಗಡಿ, ಸೆ. 11: ಭಾರತ ಸ್ವಾತಂತ್ರ್ಯಸಂಗ್ರಾಮದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಭಾಗವಹಿಸಿರಲಿಲ್ಲ. ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ನಟಿ, ಮಾಜಿ ಸಂಸದೆ ರಮ್ಯಾ ಅವರು ಮಂಡ್ಯದಲ್ಲಿ ನೀಡಿದ್ದ ಹೇಳಿಕೆ ದಕ್ಷಿಣ ಕನ್ನಡದ ಸಂಘಟನೆಗಳನ್ನು ಕೆರಳಿಸಿದೆ.
ರಮ್ಯಾ ವಿರುದ್ಧ ಆರೆಸ್ಸೆಸ್ ಪರವಾಗಿ ದೂರು ಸಲ್ಲಿಸಲಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವಂತೆ ಬೆಳ್ತಂಗಡಿಯ ಕೋರ್ಟ್ ನಿಂದ ಪೊಲೀಸರಿಗೆ ಆದೇಶ ಸಿಕ್ಕಿದೆ.
ಭಾರತ ಸ್ವಾತಂತ್ರ್ಯಸಂಗ್ರಾಮದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಭಾಗವಹಿಸಿರಲಿಲ್ಲ. ಆರೆಸ್ಸೆಸ್ ಹಾಗೂ ಬಿಜೆಪಿಯವರು ಬ್ರಿಟಿಷರೊಂದಿಗೆ ಸೇರಿಕೊಂಡಿದ್ದರು ಎಂದು ಆಗಸ್ಟ್ 31 ರಂದು ಹೇಳಿಕೆ ನೀಡುವ ಮೂಲಕ ಮಾಜಿ ಸಂಸದೆ ರಮ್ಯಾ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಆರೆಸ್ಸೆಸ್ ವಿರುದ್ಧ ರಮ್ಯಾ ಅವರು ನೀಡಿದ್ದ ಹೇಳಿಕೆ ವಿರುದ್ಧ ಬೆಳ್ತಂಗಡಿಯಲ್ಲಿ ದೂರು ಸಲ್ಲಿಸಲಾಗಿತ್ತು. ಆದರೆ, ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ. ಪೊಲೀಸರು ಕ್ರಮ ಜರುಗಿಸುವಂತೆ ಕೋರಿ ಅರ್ಜಿದಾರರು ಬೆಳ್ತಂಗಡಿ ನ್ಯಾಯಾಲಯಕ್ಕೆ ಮೊರೆ ಹೊಕ್ಕಿದ್ದರು. ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.
ಬೆಳ್ತಂಗಡಿಯ ವಕೀಲ ವಸಂತ ಮರಕಡ ಅವರು ರಮ್ಯಾ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೊದಲು ದೂರು ನೀಡಿದ್ದರು.ಪೊಲೀಸ್ ಠಾಣೆಯಲ್ಲಿ ದೂರು ಅರ್ಜಿ ಸ್ವೀಕರಿಸಿದ್ದರೂ ಪ್ರಕರಣ ದಾಖಲಾಗಲಿಸಿರಲಿಲ್ಲ. ನಂತರ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಖಾಸಗಿ ಪ್ರಕರಣ ದಾಖಲಿಸಿ, ಬಳಿಕ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ದೇಶಿಸಿದೆ. ಈಗ ರಮ್ಯಾ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ.












Click it and Unblock the Notifications