ಶರತ್ ಹತ್ಯೆಯ 'ಸ್ಫೋಟಕ ಮಾಹಿತಿ', ವಿಚಾರಣೆಯಿಂದ ದೂರ ಉಳಿದ ಸ್ವಾಮೀಜಿ
ಮಂಗಳೂರು, ಜುಲೈ 18: "ಶರತ್ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಈ ಸಂಬಂಧ ನನ್ನ ಬಳಿ ಸ್ಫೋಟಕ ಮಾಹಿತಿಯಿದ್ದು, ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದೇ ಆದಲ್ಲಿ ಆ ಮಾಹಿತಿಯನ್ನು ತನಿಖಾ ಸಂಸ್ಥೆಗೆ ನೀಡುತ್ತೇನೆ," ಎಂದು ಹೇಳಿಕೆ ನೀಡಿದ್ದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.
ತನಿಖಾಧಿಕಾರಿ ಬಂಟ್ವಾಳ ಠಾಣೆಗೆ ಆಗಮಿಸಿ ತನಿಖೆಗೆ ಹಾಜರಾಗುವಂತೆ ಸ್ವಾಮೀಜಿಗೆ ನೋಟಿಸ್ ಜಾರಿಗೊಳಿಸಿದ್ದರು. ಆದರೆ ತಾವು ಬರದೆ ತಮ್ಮ ವಕೀಲರನ್ನು ರಾಜಶೇಖರಾನಂದ ಸ್ವಾಮೀಜಿ ಕಳುಹಿಸಿದ್ದಾರೆ. ಸ್ವಾಮೀಜಿ ಪರ ವಕೀಲರು ಸೋಮವಾರ ಬಂಟ್ವಾಳ ನಗರ ಠಾಣೆಗೆ ಆಗಮಿಸಿ ಸ್ವಾಮಿ ಅವರ ಲಿಖಿತ ಹೇಳಿಕೆಯನ್ನು ತನಿಖಾಧಿಕಾರಿಗೆ ಹಸ್ತಾಂತರಿಸಿದ್ದಾರೆ.

ಲಿಖಿತ ಹೇಳಿಕೆಯನ್ನು ಹಸ್ತಾಂತರಿಸಿದ ರಾಜಶೇಖರಾನಂದ ಸ್ವಾಮೀಜಿ ಅವರ ಪರ ವಕೀಲ ಮಹೇಶ್ ಕಜೆ ಮಾತನಾಡಿ, "ಬಿ.ಸಿ.ರೋಡಿನಲ್ಲಿ ನಡೆದ ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ವೈಫಲ್ಯ ಹಾಗೂ ಅದಕ್ಕೆ ಪೂರಕವಾದ ಸ್ಥಳೀಯ ಅಂಶಗಳನ್ನು ಜನ ಸಾಮಾನ್ಯರು ಹೇಳಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಸ್ವಾಮೀಜಿಯೋರ್ವರು ನಿರ್ಭಯವಾಗಿ ಹೇಳಿಕೆ ನೀಡಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಬೇಕಾದ ಮಾಹಿತಿಯನ್ನು ಈಗಾಗಲೇ ತನಿಖಾಧಿಕಾರಿಗೆ ನೀಡಲಾಗಿದೆ," ಎಂದರು.
"ವಕೀಲ ಮಹೇಶ್ ಠಾಣೆಗೆ ಆಗಮಿಸಿ ಲಿಖಿತ ಸಮಜಾಯಿಷಿ ನೀಡಿದ್ದಾರೆ. 'ಆಷಾಢ ಮಾಸ ಪ್ರಾರಂಭವಾಗಿರುವುದರಿಂದ ಪೂಜೆ ಪುನಸ್ಕಾರಗಳು ಇವೆ. ಹಾಗಾಗಿ ಠಾಣೆಗೆ ಖುದ್ದು ಹಾಜರಾಗಲು ಸಾಧ್ಯವಿಲ್ಲ. ಮತ್ತು ನನ್ನ ಪೂಜೆ-ಪುನಸ್ಕಾರಗಳಿಗೆ ಪೊಲೀಸರು ಅಡ್ಡಿ ಉಂಟು ಮಾಡಬಾರದು' ಎಂದು ವಕೀಲರು ನೀಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ," ಎಂದು ಬಂಟ್ವಾಳ ಪೊಲೀಸ್ ಮೂಲಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿವೆ.












Click it and Unblock the Notifications