ಉಳ್ಳಾಲ ಬಾರ್ಜ್ ದುರಂತ, ಶೇ. 80 ಭಾಗ ನೀರುಪಾಲು
ಮಂಗಳೂರು, ಜೂನ್ 14: ಉಳ್ಳಾಲದ ಮೊಗವೀರ ಪಟ್ಣ ಕಡಲ ಮಧ್ಯೆ ಧರ್ತಿ ಸಂಸ್ಥೆಯ ಬಾರ್ಜ್ ಅವಘಡಕ್ಕೀಡಾಗಿ 13 ದಿನಗಳಾಗುತ್ತಾ ಬಂದಿದೆ. ಈಗಾಗಲೇ ಶೇ. 80 ಭಾಗ ಮುಳುಗಿದ್ದು ಬಾರ್ಜ್ ಕಡಲು ಸೇರುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ.
ಮಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಡಲಬ್ಬರ ಜೋರಾಗಿದ್ದು ಬಾರ್ಜ್ ಮುಳುಗಡೆಯಾಗುತ್ತಿದೆ. ಆ ಕಾರಣದಿಂದ ವಿದೇಶಿ ತಂತ್ರಜ್ಞರಿಂದಲೂ ಬಾರ್ಜ್ ನಲ್ಲಿರುವ ತೈಲವನ್ನು ಹೊರೆತೆಗೆಯುವ ಸಾಧ್ಯವಾಗುತ್ತಿಲ್ಲ. ಇದು ಸ್ಥಳೀಯರಲ್ಲಿ ತೈಲ ಸೋರಿಕೆಯ ಆತಂಕ ಹೆಚ್ಚಲು ಕಾರಣವಾಗಿದೆ.
ಇನ್ನು ಕೆಲವು ಮೀನುಗಾರರು, "ಇಂತಹ ಬಾರ್ಜ್ ನ್ನು ಸಮುದ್ರದಲ್ಲಿ ಕೆಲಸ ನಿರ್ವಹಿಸಲೆಂದೇ ಆಯ್ಕೆ ಮಾಡಿರುವುದರಿಂದ ಗರಿಷ್ಠ ಭದ್ರತೆಯ ಆಯಿಲ್ ಟ್ಯಾಂಕ್ ಅಳವಡಿಸಿರುತ್ತಾರೆ. ಹಾಗಾಗಿ ಅಷ್ಟೊಂದು ಸುಲುಭದಲ್ಲಿ ತೈಲ ಸಮುದ್ರಪಾಲಾಗದು," ಎನ್ನುತ್ತಾರೆ.
ಬಾರ್ಜ್ ಮುಂದುವರಿದ ಭಾಗ ಬೈಟ್ ನ ಮೂರೂ ಆಂಕರ್ ತುಂಡಾಗಿದ್ದು ಒಂದು ಆಂಕರ್ ರೀಫ್ ಮೇಲೆ ಲಾಕ್ ಆಗಿರುವುದರಿಂದ ಭಾರೀ ಗಾತ್ರದ ಕಡಲ ಅಲೆಗಳು ಬಡಿದರೆ ಮಾತ್ರ ಬರ್ಜಿ ಮುಳುಗುವ ಸಾಧ್ಯತೆ ಇದೆ.
ಅಷ್ಟಕ್ಕೂ ಉತ್ತರದಿಂದ ಬೀಸುವ ಅಲೆಗಳು ಬಲವಾಗಿದ್ದರೆ ಬಾರ್ಜ್ ವಾಲುವ ಸಾಧ್ಯತೆ ಇನ್ನೂ ಹೆಚ್ಚಿದೆ. ಹಾಗಾದಾಗ ವಾಲುತ್ತಾ ಮಗುಚಿ ಆಯಾ ತಪ್ಪಿ ಮುಳುಗಬಹುದು. ಬಾಕಿ ದಿನಗಳಲ್ಲಿ ಹುಣ್ಣಿಮೆ ಆಧಾರದಲ್ಲಿ ಕಡಲಬ್ಬರ ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿದ್ದರೂ ಮಳೆಗಾಲದಲ್ಲಿ ಅದು ಲೆಕ್ಕಕ್ಕೆ ಬರದು ಎನ್ನುತ್ತಾರೆ ಮುಂಬೈ ನ ತಂತ್ರಜ್ಞ ಅಶೋಕ್. ಹೀಗಾಗಿ ಬಾರ್ಜ್ ಮುಳುಗುವ ಎಲ್ಲಾ ಸಾಧ್ಯತೆಗಳಿವೆ.