ಶರತ್ ಕೊಲೆ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ
ಮಂಗಳೂರು, ಆಗಸ್ಟ್ 18 : ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಶರತ್ ಮಡಿವಾಳ್ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರ ಬಂಧನ
ಬುಧವಾರ ಬಂಧಿಸಲಾಗಿದ್ದ ಪಿಎಫ್ಐ ಕಾರ್ಯಕರ್ತರಾದ ಬೆಳ್ತಂಗಡಿಯ ರಿಯಾಜ್, ನೆಲ್ಯಾಡಿಯ ಸಿದ್ದಿಕ್, ಹಾಗೂ ಚಾಮರಾಜನಗರದ ಕಲೀಂ ಎನ್ನುವರನ್ನು ಹೆಚ್ಚಿನ ತನಿಖೆ ನಡೆಸಲು 15 ದಿನಗಳ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಇಂದು (ಶುಕ್ರವಾರ) ಬಂಟ್ವಾಳ 2ನೇ ಜೆಎಂಎಫ್ ಸಿ ಕೋರ್ಟ್ ಆದೇಶಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿತರಾದ ಸಜೀಪ ಮುನ್ನೂರು ಹಾಲಾಡಿ ನಿವಾಸಿ ಶಾಫಿ ಮತ್ತು ಚಾಮರಾಜನಗರದ ಖಲೀಲ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಬಂಧಿತರು ನೀಡಿದ ಮಾಹಿತಿ ಮೇಲೆ ಪ್ರಮುಖ ಆರೋಪಿಗಳಿಗೆ ಬಲೆ ಬೀಸಲಾಗಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
22 ಗೋವುಗಳ ರಕ್ಷಣೆ: ಶುಕ್ರವಾರ ಬೆಳ್ಳಂಬೆಳಗೆ ಸುರತ್ಕಲ್ ಟೋಲ್ ಗೇಟ್ ನ ಬಳಿಯ ಮಲ್ಲಮಾರ್ ಬೀಚ್ ನ ಹತ್ತಿರ ಅಕ್ರಮವಾಗಿ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಒಟ್ಟು 22 ಗೋವುಗಳನ್ನು ಪೊಲೀಸರು ರಕ್ಷಿಸಿದ್ದಾರೆ.