ಮಂಗಳೂರು: ವಿವಾದಾತ್ಮಕ ಕಂಬಳದಲ್ಲಿ ತಪ್ಪಿತು ಭಾರಿ ಅನಾಹುತ
ಮಂಗಳೂರು, ಜನವರಿ 23: ನಿಷೇಧದ ತೂಗು ಕತ್ತಿಯ ಗೊಂದಲದ ನಡುವೆ ಆಯೋಜಿಸಲಾಗುತ್ತಿರುವ ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಪುತ್ತೂರಿನ ಮಹಾಲಿಂಗೇಶ್ವರ ದೇವರಗದ್ದೆಯಲ್ಲಿ ಜನವರಿ 21 ರಂದು ನಡೆದ ಕಂಬಳದಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಮಗುವೊಂದು ಕೋಣಗಳ ಕಾಲಿನಡಿಗೆ ಬಿದ್ದು ಅದೃಷ್ಟವಶಾತ್ ಪಾರಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.
ಕೋಣಗಳು ಕಂಬಳ ಓಟದ ಆರಂಭ ಸ್ಥಳ ಗಂತ್ ಯಿಂದ ಕರೆಯಲ್ಲಿ ಓಡಿ ಕಂಬಳ ಫಿನಿಶಿಂಗ್ ಪಾಯಿಂಟ್ ಮಂಜೊಟ್ಟಿಯತ್ತ ಬಂದಿವೆ. ಈ ಸಂದರ್ಭದಲ್ಲಿ ಅಲ್ಲೇ ನಿಂತು ಕಂಬಳ ವೀಕ್ಷಿಸುತ್ತಿದ್ದ ಪುಟ್ಟಮಗು ಆಕಸ್ಮಿಕವಾಗಿ ಓಟದ ಕೋಣಗಳ ಮುಂದೆ ಬಂದಿದೆ.

ಆದರೆ ಅದೃಷ್ಟವಶಾತ್ ಮಗು ಕೋಣಗಳ ಕಾಲಿನಡಿಗೆ ಸಿಕ್ಕಿ ಹಾಕಿಕೊಂಡಿಲ್ಲ. ಓಟದಲ್ಲಿ ನಿರತವಾಗಿದ್ದ ಕೋಣಗಳು ಮಗುವಿನ ಮೇಲೆ ಹಾದು ಹೋಗಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು .ಆದರೆ ಮಗು ಅದೃಷ್ಟವಶಾತ್ ಪಾರಾಗಿದೆ.

ಈ ದೃಶ್ಯವನ್ನು ಕಂಬಳ ವಿಕ್ಷಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಬಳ ವೀಕ್ಷಣೆ ಗೆ ಬರುವವರು ಮಕ್ಕಳನ್ನು ಜಾಗೃತೆಯಾಗಿ ನೋಡಿಕೊಳ್ಳ ಬೇಕೆಂಬ ಮಾತು ಕೇಳಿಬಂದಿದೆ. ಕಂಬಳ ಸಂಘಟಕರು ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.












Click it and Unblock the Notifications