ರಾಜಾಹುಲಿ ಅಂದಾಕ್ಷಣ ಯಡಿಯೂರಪ್ಪ ಹುಲಿ ಆಗುತ್ತಾರಾ?: ಮಂಗಳೂರಿನಲ್ಲಿ ಸಿದ್ದರಾಮಯ್ಯ ಪ್ರಶ್ನೆ
ಮಂಗಳೂರು, ಜನವರಿ, 05: ನನಗೆ 'ಟಗರು', 'ಹುಲಿಯಾ' ಅನ್ನುತ್ತಾರೆ. ಅದು ಅಸಾಂವಿಧಾನಿಕವೇ?. ಯಡಿಯೂರಪ್ಪನವರನ್ನು ಅವರ ಪಕ್ಷದವರೇ 'ರಾಜಾಹುಲಿ' ಎಂದು ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ 'ಹುಲಿನಾ'. ನಾಯಿ ಬಹಳ ನಂಬಿಕಸ್ಥ ಪ್ರಾಣಿಯಾಗಿದೆ. ಧೈರ್ಯ ಅನ್ನುವ ಅರ್ಥದಲ್ಲಿ ಆ ಪದ ಬಳಕೆ ಮಾಡಿದೆ ಎಂದು ಮಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಸಿದ್ಧರಾಮಯ್ಯ, ಸಿಎಂ ಬೊಮ್ಮಾಯಿಯವರನ್ನು 'ನಾಯಿಮರಿ' ಅಂದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಸಿಎಂ ಅವರನ್ನು ನಾಯಿ ಮರಿ ಅಂದಿಲ್ಲ. ಯಾವತ್ತೂ ಧೈರ್ಯ ಇರಬೇಕು. ರಾಜ್ಯದ ಹಿತ ಮುಖ್ಯವಾಗಿದೆ. ಧೈರ್ಯವಾಗಿ ಕೇಂದ್ರದೊಂದಿಗೆ ಮಾತನಾಡಿ ರಾಜ್ಯಕ್ಕೆ ಹಣ ತರಬೇಕು. ಕೇಂದ್ರದಿಂದ ಬರುವ ಅನುದಾನಗಳು ಕಡಿಮೆಯಾಗಿದೆ. ಆದ್ದರಿಂದ ಇವರು ಧೈರ್ಯವಾಗಿರಬೇಕು. ನಾಯಿಮರಿಯಂತೆ ಇರಬಾರದೆಂದು ಹೇಳಿದ್ದೆ ಅಷ್ಟೇ. ಇದರಲ್ಲಿ ತಪ್ಪೇನಿದೆ?, ಇದು ಅಸಾಂವಿಧಾನಿಕವೇ? ಎಂದು ಪ್ರಶ್ನಿಸಿದ್ದಾರೆ.
ಬೇಜವಾಬ್ದಾರಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ
ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಇದ್ದಂತೆ. ಅವರು ಬಾಲಿಶವಾಗಿ, ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಅವರು ಒಂದು ರೀತಿ ಬಿಜೆಪಿ ಪಕ್ಷದ ವಿದೂಷಕರಿದ್ದಂತೆ. ಹಾಗಾಗಿ ಅವರ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ವಿಧಾನಸಭೆಯ ಚುನಾವಣೆ ಮೊದಲು ಸಿದ್ದರಾಮಯ್ಯನವರನ್ನು ಜೈಲಿಗೆ ಕಲಿಸುತ್ತೇವೆ ಎಂದ ನಳಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಚಾರಣೆ ಮಾಡಿ ತಪ್ಪಿತಸ್ಥರಾದಲ್ಲಿ ಜೈಲಿಗೆ ಕಲಿಸುವುದು ಕೋರ್ಟ್, ಇವರಲ್ಲ. ಅದಕ್ಕೆ ಅವರು ಪೆದ್ದುಪೆದ್ದಾಗಿ ಮಾತನಾಡೋದು, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾರೆ. ಕಾನೂನು ಗೊತ್ತಿಲ್ಲದಂತೆ ಮಾತನಾಡುವವರ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು.

ಬಿಜೆಪಿ ಸರ್ಕಾರ ಭ್ರಷ್ಟರ ಕೊಂಪೆಯಾಗಿದೆ
ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಅವರು, ನಾನೇನು ಅಲೆಮಾರಿ ರಾಜಕಾರಣಿಯೇ?. ಕೋಲಾರದವರು ಕರೆಯುತ್ತಾರೆ. ಬಾದಾಮಿಯವರು ಅಲ್ಲೇ ನಿಲ್ಲಿ ಎನ್ನುತ್ತಿದ್ದಾರೆ. ವರುಣಾ ಕ್ಷೇತ್ರದವರು ಇಲ್ಲೇ ನಿಲ್ಲಿ ಎಂದು ಕರೆಯುತ್ತಿದ್ದಾರೆ. ಹೈಕಮಾಂಡ್ ಎಲ್ಲಿ ಸೂಚಿಸುತ್ತದೆಯೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದರು. ಇನ್ನು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ನಿಂದ ವಿಧಾನಸಭೆಯ ಬಳಿ 10 ಲಕ್ಷ ರೂಪಾಯಿ ಅನಧಿಕೃತ ಹಣವನ್ನು ಪೊಲೀಸರು ವಶಪಡಿಸಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಸರ್ಕಾರದಲ್ಲಿ ಇಂತಹ ಬೇಕಾದಷ್ಟು ಭ್ರಷ್ಟಾಚಾರದ ಪ್ರಕರಣಗಳು ನಡೆಯುತ್ತಿದೆ. ಆದ್ದರಿಂದ ಇವರನ್ನು ಗುತ್ತಿಗೆದಾರರ ಸಂಘದವರು 40% ಕಮಿಷನ್ ಸರ್ಕಾರ ಎಂದು ಕರೆದಿದ್ದಾರೆ. ಈಶ್ವರಪ್ಪ ಲಂಚ ಕೇಳಿದರೆಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡರು. ಮೊನ್ನೆ ಪ್ರಸಾದ್ ಎಂಬವವರು ಹೀಗೆ ಹಲವಾರು ಮಂದಿ ಇವರ ಭ್ರಷ್ಟಾಚಾರದಿಂದ ಸಾವಿಗೆ ಶರಣಾಗುತ್ತಿದ್ದಾರೆ. ಈ ಸರ್ಕಾರಲ್ಲಿ ಭ್ರಷ್ಟಾಚಾರವಿಲ್ಲದೆ ಏನೂ ನಡೆಯುವುದಿಲ್ಲ ಎಂದು ಗುಡುಗಿದರು.












Click it and Unblock the Notifications