'ಮೋದಿ ಕಪ್ಪು ಹಣವನ್ನು ಕರ್ನಾಟಕದ ಬಿಜೆಪಿಯವರಿಗೇನಾದರೂ ನೀಡಿದ್ದಾರಾ?'
ಮಂಗಳೂರು, ಫೆಬ್ರವರಿ 10: ಮುಖ್ಯ ಮಂತ್ರಿ ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೋ ಟೇಪ್ನಲ್ಲಿರೋದು ಶೇ.100ರಷ್ಟು ಯಡಿಯೂರಪ್ಪ ಅವರದ್ದೇ ಧ್ವನಿ ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯರ್ಶಿ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಅವರು ಬಿಡುಗಡೆಗೊಳಿಸಿದ ಆಡಿಯೋ ಸಂಭಾಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ನ್ಯಾಯಾಧೀಶರನ್ನೂ ಬುಕ್ ಮಾಡಲಿದ್ದಾರೆ ಎಂದೂ ಯಡಿಯೂರಪ್ಪ ಹೇಳಿದ್ದಾರೆ. ಇದೊಂದು ಗಂಭೀರ ವಿಚಾರ . ಈ ಪ್ರಕರಣದ ಕುರಿತು ಸಿಬಿಐನಿಂದಲೇ ತನಿಖೆ ನಡೆಸಲಿ ಎಂದು ತಿಳಿಸಿದರು.
ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರನ್ನು ದೇವದುರ್ಗಕ್ಕೆ ಕರೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ 10 ಕೋಟಿ ರೂಪಾಯಿ ಲಂಚದ ಆಮಿಷ ಒಡ್ಡಿರುವುದು, ವಿಧಾನಸಭಾಧ್ಯಕ್ಷರಿಗೆ 50 ಕೋಟಿ ರೂಪಾಯಿ ನೀಡಿದ್ದೇವೆ ಎಂಬ ಆರೋಪದ ಬಗ್ಗೆ ತನಿಖೆಯಾಗಲೇಬೇಕು.

ಬೇರೆಯವರ ಮೇಲೆ ಐಟಿ ದಾಳಿ ನಡೆಸಿ ಅಕ್ರಮ ದುಡ್ಡು ಕೂಡಿಟ್ಟಿದ್ದಾರೆ ಎನ್ನುವವರು ಈಗ ಬಿಜೆಪಿಯವರಿಗೆ ಇತರ ಪಕ್ಷಗಳ ಶಾಸಕರಿಗೆ ಇಷ್ಟುಂದು ಪ್ರಮಾಣದಲ್ಲಿ ಹಣ ನೀಡಿ ಖರೀದಿಸುವಷ್ಟು ಕೋಟಿಗಟ್ಟಲೆ ಹಣ ಎಲ್ಲಿಂದ ಬಂತು ? ಎಂದು ಪ್ರಶ್ನಿಸಿದ ಅವರು ಯಡಿಯೂರಪ್ಪ ಅವರು ಕಾಂಗ್ರೆಸ್-ಜೆಡಿಎಸ್- ಶಾಸಕರನ್ನು ಸೆಳೆದು ಕುದುರೆ ವ್ಯಾಪಾರದಲ್ಲಿ ತೊಡಗಿರುವುದು ಆಡಿಯೊ ಟೇಪ್ ಮೂಲಕ ಸಾಬೀತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ಕರ್ನಾಟಕದ ಬಿಜೆಪಿಯವರಿಗೇನಾದರೂ ನೀಡಿದ್ದಾರಾ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಬಜೆಟ್ ಅಂಗೀಕಾರ ಆಗದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಅದೆಲ್ಲದಕ್ಕೂ ಕಾಂಗ್ರೆಸ್ ಸಿದ್ಧವಾಗಿದೆ. ಬಜೆಟ್ ಅಂಗೀಕಾರ ಆಗಿಯೇ ಆಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು .
ಹಲವು ವರ್ಷಗಳ ಬೇಡಿಕೆಯಾದ ಕ್ರೈಸ್ತ ಅಭಿವೃದ್ಧಿಗೆ ನಿಗಮ ಸ್ಥಾಪನೆಯ ಘೋಷಣೆಯನ್ನು ಬಜೆಟ್ ನಲ್ಲಿ ಮಾಡಲಾಗಿದೆ. ಅದಕ್ಕಾಗಿ 200 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಇನ್ನು ಮೂರು ತಿಂಗಳೊಳಗೆ ಕ್ರೈಸ್ತ ನಿಗಮದ ಆಡಳಿತ ಕಚೇರಿ ಸ್ಥಾಪನೆಯಾಗಲಿದೆ ಎಂದು ಡಿಸೋಜ ತಿಳಿಸಿದರು.












Click it and Unblock the Notifications