ಆಪರೇಷನ್ ಕಮಲ ಆಡಿಯೋದಲ್ಲಿರುವ ಸಂಭಾಷಣೆ ನಿಜ:ಯುಟಿ ಖಾದರ್
ಮಂಗಳೂರು, ಫೆಬ್ರವರಿ 10: ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಬಿಜೆಪಿಯವರು ಆಮಿಷವೊಡ್ಡಿ ಕೊಳ್ಳಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಡುಗಡೆಗೊಳಿಸಿರುವ ಆಡಿಯೋ ಕ್ಲಿಪ್ ಸಂಭಾಷಣೆಯಲ್ಲಿ ಬೇರೆ ಬೇರೆ ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಎರಡು ಮೂರು ಜನ ಮಾತನಾಡಿದ್ದಾರೆ. ಸಂಭಾಷಣೆ ವೇಳೆ ಸ್ಪೀಕರ್, ಪ್ರಧಾನಿ, ಜಡ್ಜ್ ಉಲ್ಲೇಖ ಮಾಡಿದ್ದಾರೆ. ಇದೊಂದು ಗಂಭೀರ ವಿಚಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಯಾಗಬೇಕು ಎಂದು ಅವರು ಒತ್ತಾಯಿಸಿದರು.
ಆಡಿಯೋ ಕ್ಲಿಪ್ ವಿಷಯಕ್ಕೆ ಪ್ರಧಾನಿ ಮೋದಿ ಮೇಲೆ ಹರಿಹಾಯ್ದ ಸಿದ್ದರಾಮಯ್ಯ
ಅಲ್ಲಿ ಸಂಭಾಷಣೆ ನಡೆದಿರುವುದು ನಿಜ. ಅದನ್ನು ಈಗಾಗಲೇ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ ಎಂದ ಖಾದರ್, ತನಿಖೆ ನಡೆಯಲಿ ಆಮೇಲೆ ಗೊತ್ತಾಗುತ್ತದೆ. ಎಲ್ಲಾ ವಿಚಾರ ಸ್ಪೀಕರ್ ಗಮನದಲ್ಲಿದೆ. ಪ್ರಧಾನಮಂತ್ರಿ ಹೆಸರೂ ಬಂದಿದೆ, ಆದ್ದರಿಂದ ಅವರೂ ತನಿಖೆಗೆ ಆದೇಶಿಸಲಿ. ಅವರ ಏಜೆನ್ಸಿ ಮೂಲಕ ತನಿಖೆ ಮಾಡಿಸಲಿ. ಸರ್ಕಾರ ಪ್ರತಿಪಕ್ಷದ ಕೃಪಾಕಟಾಕ್ಷದಲ್ಲಿಲ್ಲ.
ಸ್ಪೀಕರ್ ಎಲ್ಲವನ್ನು ನಿಭಾಯಿಸುವರು.ಸೋಮವಾರ ಈ ಬಗ್ಗೆ ಅವರೇ ತೀರ್ಪು ನೀಡಲಿದ್ದಾರೆ. ಅವರ ಹೆಸರು ಉಲ್ಲೇಖ ಆಗಿದೆ. ಅವರು ಕಾನೂನು ,ಸಂವಿಧಾನವನ್ನು ಓದಿರುವವರು ಎಲ್ಲಾ ಸದ್ಯದಲ್ಲೆ ಸ್ಪಷ್ಟ ವಾಗಲಿದೆ ಎಂದು ತಿಳಿಸಿದರು .