ಮಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಖದೀಮರ ಬಂಧನ; ಖದೀಮರ ಪ್ಲಾನ್ ಏನಾಗಿತ್ತು?
ಮಂಗಳೂರು, ಜನವರಿ, 22: ಮಂಗಳೂರಿನಲ್ಲಿ ಸಿನಿಮಾ ರೀತಿಯಲ್ಲಿ ಕಿಡ್ನಾಪ್ ನಡೆದಿತ್ತು. ಪೊಲೀಸರೂ ಕೂಡ ಅದೇ ಸ್ಟೈಲ್ನಲ್ಲೇ ಆರೋಪಿಗಳನ್ನು ಭೇದಿಸಿದ್ದಾರೆ. ಹಣಕ್ಕಾಗಿ ಇಬ್ಬರನ್ನು ಕಿಡ್ನಾಪ್ ಮಾಡಿ ಡೀಲ್ ಕುದುರಿಸಿದ್ದ ಅಪಹರಣಕಾರರು ದಾರಿ ಮಧ್ಯೆಯೇ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ. ಗೋಲ್ಡ್ ಬಿಸ್ಕೇಟ್ ಹಾಗೂ ಹಣ ದೋಚಲು ಯತ್ನಿಸಿದ ಖದೀಮರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಹಣಕ್ಕಾಗಿ ಜನ ಏನು ಬೇಕಾದರೂ ಮಾಡುತ್ತಾರೆ ಅನ್ನೋದು ಕೆಲವೊಮ್ಮೆ ಸಾಬೀತಾಗುತ್ತಿದೆ. ಮಂಗಳೂರಿನಲ್ಲಿ ಇದೇ ರೀತಿ ಹಣದ ಆಸೆಗೆ ಬಿದ್ದು ಇಬ್ಬರನ್ನು ಕಿಡ್ನಾಪ್ ಮಾಡಿದ ಐವರು ಖದೀಮರು ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿ ಹಣ ಸಂಪಾದಿಸಲು ಹೋದ ಖದೀಮರು ಇದೀಗ ಪೊಲೀಸರ ಅದೇ ಸಿನಿಮಾ ರೀತಿಯ ಕಾರ್ಯಾಚರಣೆಯಿಂದಲೇ ಬಲೆಗೆ ಬಿದ್ದಿದ್ದಾರೆ. ಆರಂಭದಲ್ಲಿ ಐವರ ತಂಡವೊಂದು ಕಡಬ ತಾಲೂಕಿನ ಕೊಯಿಲಾ ಎಂಬಲ್ಲಿನ ನಿವಾಸಿಗಳಾದ ಶಾರೂಕ್ ಹಾಗೂ ನಿಜಾಮುದ್ದೀನ್ ಎಂಬ ಇಬ್ಬರನ್ನು ಅಪಹರಿಸುತ್ತದೆ. ಇವರಿಬ್ಬರ ನಾಪತ್ತೆ ಬಗ್ಗೆ ಮನೆಯವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಆಗ ಪೊಲೀಸರು ವಿಚಾರಣೆಯನ್ನೂ ಮುಂದುವರೆಸಿದ್ದರು.

ಖದೀಮರ ಪ್ಲಾನ್ ಏನು ಆಗಿತ್ತು?
ಅಪಹರಣಕ್ಕೊಳಗಾದ ನಿಜಾಮುದ್ದೀನ್ನ ಸಂಬಂಧಿ ಶಫೀಕ್ ಎಂಬಾತ ದುಬೈನಲ್ಲಿದ್ದು, ಆತ ಗೋಲ್ಡ್ ಬಿಸ್ಕತ್ತು ವ್ಯವಹಾರ ನಡೆಸುತ್ತಿದ್ದ. ಇದರ ಮಾಹಿತಿ ಪಡೆಯಲೆಂದು ನಿಜಾಮುದ್ದೀನ್ ಹಾಗೂ ಶಾರೂಕ್ನನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಆದರೆ ಈ ಇಬ್ಬರಿಗೂ ಗೋಲ್ಡ್ ಬಿಸ್ಕತ್ತು ವ್ಯವಹಾರದ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ನಿಜಾಮುದ್ದೀನ್ನನ್ನು ಬಿಡುಗಡೆ ಮಾಡಿ, ಶಾರೂಕ್ನನ್ನು ಬಿಡದೆ ಕಾರಿನಲ್ಲಿ ಸುತ್ತಾಡಿಸಿದ್ದರು. ಈ ವೇಳೆಯೇ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ
ಆರೋಪಿಗಳು ಶಾರೂಕ್ನನ್ನು ಕಾರಿನಲ್ಲಿ ತಿರುಗಾಡಿಸುತ್ತಿದ್ದ ವೇಳೆ ಮಂಗಳೂರು ಗ್ರಾಮಾಂತರ ಪೊಲೀಸರು ಕೂಡ ಇವರ ಮೇಲೆ ಕಣ್ಣಿಟ್ಟಿದ್ದರು. ಅನುಮಾನ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಕಾರನ್ನು ಹಿಂಬಾಲಿಸಿದ್ದರು. ಈ ವೇಳೆ ಆರೋಪಿಗಳು ಕಾರನ್ನು ವೇಗವಾಗಿ ಚಲಿಸಿ ತಪ್ಪಿಸಲು ಪ್ರಯತ್ನಿಸಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳ ಕಾರಿಗೆ ಅಡ್ಡ ಹಾಕಿ ನಿಲ್ಲಿಸಿದ್ದು, ವಾಹನ ತಪಾಸಣೆ ನಡೆಸಿದ್ದರು. ಈ ವೇಳೆ ಕಾರಿನಲ್ಲಿದ್ದ ಖದೀಮರು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು. ಕೊನೆಗೂ ಟ್ರೇಸ್ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಪೊಲೀಸರ ಬಲೆಗೆ ಬಿದ್ದ ಖದೀಮರು
ಮಂಗಳೂರಿನ ರೌಡಿ ಶೀಟರ್ ತಲ್ಲತ್ ಫೈಝಲ್ ನಗರ ಸೂಚನೆಯಂತೆ ಈ ಕೃತ್ಯ ಮಾಡಿದ್ದು, ಉಪ್ಪಿನಂಗಡಿಯ ಅಬೂಬಕ್ಕರ್ ಸಿದ್ದಿಕ್(39), ಬಂಟ್ವಾಳದ ಕಲಂದರ್ ಶಾಫಿ(22), ದೇರಳ ಕಟ್ಟೆಯ ಇರ್ಫಾನ್(38), ಪಾಂಡೇಶ್ವರದ ರಿಯಾಜ್(33) ಮತ್ತು ಬೆಳ್ತಂಗಡಿಯ ಇರ್ಷಾದ್(28) ಅನ್ನುವ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟಿನಲ್ಲಿ ಕಿಡ್ನಾಪ್ ಮಾಡಿ ಹಣ ಸಂಪಾದಿಸುತ್ತೇವೆ ಅಂದುಕೊಂಡಿದ್ದ ಖದೀಮರು ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಐವರ ಮೇಲೆ ಕೊಲೆಯತ್ನ ಪ್ರಕರಣವೂ ದಾಖಲಾಗಿದೆ.

ನಶೆ ಗ್ಯಾಂಗ್ನ ವಿವರ ಇಲ್ಲಿದೆ
ನಶೆಯಲ್ಲಿದ್ದ ವೈದ್ಯರ ಬೆನ್ನು ಹತ್ತಿದ್ದ ಪೊಲೀಸರು ಮತ್ತೆ 9 ಮಂದಿಯನ್ನು ಬಂಧನ ಮಾಡಿದ್ದಾರೆ. ಇಬ್ಬರು ವೈದ್ಯರು ಸೇರಿದಂತೆ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಪೊಲೀಸರ ಅತಿಥಿಗಳಾಗಿದ್ದು, ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ವೈದ್ಯರ ಗಾಂಜಾ ಘಾಟಿನ ನಶೆ ಇನ್ನೂ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಪೊಲೀಸರು ಕೆದಕಿದಷ್ಟು ಹೆಚ್ಚು ಮಂದಿ ಈ ಪ್ರಕರಣದಲ್ಲಿ ಬಲೆಗೆ ಬೀಳುತ್ತಲೇ ಇದ್ದಾರೆ. ವೈದ್ಯರ ಗಾಂಜಾ ಘಾಟಿನ ಹಿಂದೆ ಬಿದ್ದ ಪೊಲೀಸರು ಇದೀಗ ಮತ್ತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಶ್ರೀನಿವಾಸ ಆಸ್ಪತ್ರೆಯ ಕರ್ನಾಟಕದ ವೈದ್ಯ ಸಿದ್ದಾರ್ಥ್ ಪವಸ್ಕರ್(29) ಮತ್ತು ದುರ್ಗಾ ಸಂಜೀವಿನಿ ಆಸ್ಪತ್ರೆಯ ಕರ್ನಾಟಕದ ವೈದ್ಯ ಡಾ.ಸುಧೀಂದ್ರ(34) ಬಂಧಕ್ಕೊಳಗಾದ ವೈದ್ಯರಾಗಿದ್ದಾರೆ.

ಗಾಂಜಾ ವ್ಯಸವಿ ವಿದ್ಯಾರ್ಥಿಗಳ ವಿಳಾಸ
ಮಂಗಳೂರಿನ ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ಏಳು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಉತ್ತರ ಪ್ರದೇಶದ ವಿದುಶ್ ಕುಮಾರ್(27), ದೆಹಲಿಯ ಶರಣ್ಯ(23), ಕೇರಳದ ಸೂರ್ಯಜಿತ್ ದೇವ್(20), ಕೇರಳದ ಆಯೇಷಾ ಮಹಮ್ಮದ್(23), ತೆಲಂಗಾಣದ ಪ್ರಣಯ್ ನಟರಾಜ್(24), ತೆಲಂಗಾಣದ ಚೈತನ್ಯಾ(23), ಉತ್ತರ ಪ್ರದೇಶದ ಇಶ್ ಮಿದ್ದ(24) ಎಂದು ಗುರುತಿಸಲಾಗಿದೆ. ಈ ಏಳು ಮಂದಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಈವರೆಗೆ ವೈದ್ಯರ ಗಾಂಜಾ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿದೆ.












Click it and Unblock the Notifications