ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಉರುಳು ಸೇವೆ ಮಾಡಿದ ಕ್ರೀಡಾಪಟು ಪೂವಮ್ಮ
ಮಂಗಳೂರು, ಅಕ್ಟೋಬರ್. 14: ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸ್ಟಾರ್ ಕ್ರೀಡಾಪಟು ಪೂವಮ್ಮ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭಾನುವಾರ (ಅ.14) ಭೇಟಿ ನೀಡಿದರು.
ಕುಟುಂಬ ಸದಸ್ಯರೊಂದಿಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪೂವಮ್ಮ ಹರಕೆಯಂತೆ ದೇವಾಲಯದಲ್ಲಿ ಉರುಳು ಸೇವೆ ನೆರವೇರಿಸಿದರು.
ಕಳೆದ ಬಾರಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೂವಮ್ಮ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಪದಕ ಗೆದ್ದರೆ ಉರುಳು ಸೇವೆ ಮಾಡುವ ಹರಕೆ ಹೊತ್ತಿದ್ದರು. ಅದರಂತೆ ಇಂದು ದೇವಾಲಯಕ್ಕೆ ಭೇಟಿ ನೀಡಿದ ಪೂವಮ್ಮ ಉರುಳು ಸೇವೆ ಸಲ್ಲಿಸಿ ಹರಕೆ ನೆರವೇರಿಸಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ ಪೂವಮ್ಮ ಉತ್ತಮ ಸಾಧನೆ ತೋರಿದ್ದರು. ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಪೂವಮ್ಮ ಎರಡು ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದರು.
ಮಹಿಳೆಯರ 4X400 ಮೀಟರ್ಸ್ ರಿಲೆಯಲ್ಲಿ ಚಿನ್ನ ಮತ್ತು ಮಿಶ್ರ ರಿಲೆಯಲ್ಲಿ ಬೆಳ್ಳಿ ಪದಕವನ್ನು ಪೂವಮ್ಮ ಗೆದ್ದಿದ್ದಾರೆ. ಈ ಸಾಧನೆ ಗುರುತಿಸಿ ರಾಜ್ಯ ಸರಕಾರ ಪೂವಮ್ಮ ಅವರಿಗೆ 40 ಲಕ್ಷ ರೂಪಾಯಿ ನೀಡಿ ಗೌರವಿಸಿದೆ.

ಮುಂಬರುವ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿರುವ ಪೂವಮ್ಮ ಕಠಿಣ ಪರಿಶ್ರಮಪಡುತ್ತಿದ್ದು, ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.












Click it and Unblock the Notifications