ಯಡವಟ್ಟು ಮಾಡಿ ನಂತರ ತಿದ್ದಿಕೊಂಡ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಸುರತ್ಕಲ್, ಫೆಬ್ರವರಿ 20: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ ಹಲ್ಲೆ ನಡೆಸಿ ಗಾಯಗೊಳಿಸಿರುವ ವಿದ್ವತ್ ಬಿಜೆಪಿ ಕಾರ್ಯಕರ್ತ ಎಂದಿದ್ದ ಅಮಿತ್ ಶಾ ತಮ್ಮ ಹೇಳಿಕೆ ತಪ್ಪು ಎಂದು ಸಮಜಾಯಿಷಿ ನೀಡಿದ್ದಾರೆ.
ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕುಕ್ಕೆಯಲ್ಲಿ ಮಾತನಾಡುತ್ತಾ ಶಾಸಕ ಹ್ಯಾರಿಸ್ ಪುತ್ರ ಹಲ್ಲೆ ಮಾಡಿದ್ದ ವಿದ್ಯತ್ ಬಿಜೆಪಿ ಕಾರ್ಯಕರ್ತ ಹಾಗಾಗಿ ಹಲ್ಲೆಕೋರನ ಮೇಲೆ ಕೇಸು ದಾಖಲಿಸಲು ತಡಮಾಡಿದ್ದಾರೆ, ಅಷ್ಟೆ ಅಲ್ಲ ಆತ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಕೇಸು ದಾಖಲಿಸಲು ವಿಳಂಬ ಮಾಡಲಾಗಿದೆ ಎಂದು ಹೇಳಿದ್ದರು.
ಸಿಎಂ ಓಲೈಕೆ ರಾಜಕಾರಣ ಯಶಸ್ವಿಯಾಗದು: ಕುಕ್ಕೆಯಲ್ಲಿ ಅಮಿತ್ ಶಾ
ಅಮಿತ್ ಶಾ ಅವರಿಂದ ಈ ಹೇಳಿಕೆ ಹೊರ ಬಿದ್ದ ತಕ್ಷಣವೇ ಚುರುಕಾದ ಕಾಂಗ್ರೆಸ್ ಮುಖಂಡರು 'ಯಾರೇ ಹಲ್ಲೆಗೆ ಒಳಗಾಗಲಿ, ಸಾಯಲಿ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಬಿಡುತ್ತಾರೆ' ಎಂದು ಗೇಲಿ ಮಾಡಿದ್ದರು.
ಕೂಡಲೇ ತಮ್ಮ ತಪ್ಪಿನ ಅರಿವು ಮಾಡಿಕೊಂಡ ಅಮಿತ್ ಶಾ ಅವರು ಸುರತ್ಕಲ್ನಲ್ಲಿ ಸುದ್ದಿಗೋಷ್ಠಿ ನಡೆಸುವ ಸಮಯ ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿ, 'ವಿದ್ವತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ ನನ್ನ ತಪ್ಪು ಹೇಳಿಕೆಯಿಂದ ಮುಖ್ಯಮಂತ್ರಿಗೆ ಚರ್ಚೆ ಮಾಡಲು ವಿಷಯ ಸಿಕ್ಕಿದೆ' ಎಂದರು.
ಇತ್ತೀಚೆಗೆ ಮಂಗಳೂರಿನಲ್ಲಿ ಕೋಮುಗಲಭೆಗೆ ಬಲಿಯಾದ ದೀಪಕ್ ರಾವ್ ಮನೆಗೆ ಭೇಟಿ ನೀಡುವುದಾಗಿ ಹೇಳಿದ ಅಮಿತ್ ಶಾ ಅಂದೇ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಬಶೀರ್ ಮನೆಗೆ ಹೋಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು.
ಪುತ್ತೂರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಅಮಿತ್ ಶಾ ಸಂವಾದ
'ಬಶೀರ್ ಮನೆಗೆ ಭೇಟಿ ನೀಡುತ್ತೀರಾ' ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ ಅವರು 'ನಾನು ನನ್ನ ಪಕ್ಷದ ಕಾರ್ಯಕರ್ತನ ಮನೆಗೆ ಹೋಗುತ್ತೇನೆ' ಎಂದರು.