ಪ್ರಸಿದ್ಧಿ ಪಡೆದಿರುವ ಮಂಗಳೂರು ದಸರಾ ಬಗ್ಗೆ ತಿಳಿಯಿರಿ
ಮಂಗಳೂರು, ಅಕ್ಟೋಬರ್ 13 : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮಂಗಳವಾರ ಚಾಲನೆ ದೊರೆಯಲಿದೆ. ಮೈಸೂರು ದಸರಾದಂತೆ ಮಂಗಳೂರು ದಸರಾವೂ ದೇಶದ ಜನರ ಗಮನಸೆಳೆಯುತ್ತಿದೆ. ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ಸಾರಥ್ಯದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಕುದ್ರೋಳಿ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳು ನಡೆದಿವೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಗೋಕರ್ಣನಾಥ ಕಲಾಮಂಟಪದಲ್ಲಿ ನವದುರ್ಗೆಯರು ಹಾಗೂ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಈ ಬಾರಿಯ ಮಂಗಳೂರು ದಸರಾವನ್ನು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಉದ್ಗಾಟಿಸಲಿದ್ದಾರೆ. [ಮಂಗಳೂರು : ವಿಜೃಂಭಣೆಯ ಶಾರದಾ ಮಹೋತ್ಸವ]

ದಸರಾದ ಕೊನೆಯ ದಿನ ಮೈಸೂರಿನಲ್ಲಿ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯ ಜಂಬೂ ಸವಾರಿ ನಡೆಯುತ್ತದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿವೂ ವೈಭವದ ಉತ್ಸವ ನಡೆಯುತ್ತದೆ. [ಕುಡ್ಲ ದಸರಾದಲ್ಲಿ ದೀಪಗಳದ್ದೇ ವೈಭವ]
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಕುದ್ರೋಳಿ, ಮಂಗಳಾದೇವಿ, ಕಟೀಲು, ಕೊಲ್ಲೂರು, ಧರ್ಮಸ್ಥಳ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನವರಾತ್ರಿಯಲ್ಲಿ ವಿಶೇಷ ಪೂಜೆ, ಉತ್ಸವಗಳಿರುತ್ತವೆ. ಲಕ್ಷಾಂತರ ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಮಂಗಳೂರು ದಸರಾಕ್ಕೆ ಕುದ್ರೋಳಿ ಕ್ಷೇತ್ರದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ನಿತ್ಯವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವದುರ್ಗೆಯರ ಪ್ರತಿಷ್ಠಾಪನೆ, ಅಂತಿಮವಾಗಿ ದಸರಾ ಮೆರವಣಿಗೆಯಲ್ಲಿ ಶಾರದೆ ಸಹಿತ ನವದುರ್ಗೆಯರ ವೈಭವೋಪೇತ ಮೆರವಣಿಗೆಯನ್ನು ವೀಕ್ಷಿಸಲು ವಿವಿಧ ಜಿಲ್ಲೆಗಳಿಂದ ಜನರು ಆಗಮಿಸುತ್ತಾರೆ.












Click it and Unblock the Notifications