ಶಿವಭಾಗ್ ಹೋಟೆಲ್ ಮೇಲೆ ಕಲ್ಲು ತೂರಾಟ: ಕಾಂಗ್ರೆಸ್ ಮುಖಂಡನ ಬಂಧನ
ಮಂಗಳೂರು, ಸೆಪ್ಟೆಂಬರ್ 12: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಅಮರ್ ಸೋನ್ಸ್ (28) ಎಂದು ಗುರುತಿಸಲಾಗಿದೆ.
ಬಂದ್ ಸಂದರ್ಭದಲ್ಲಿ ಅಮರ್ ಸೋನ್ಸ್ ಮತ್ತು ಆತನ ಸಹಚರ ಬೈಕ್ ನಲ್ಲಿ ಬಂದು ನಗರದ ಶಿವಭಾಗ್ ನಲ್ಲಿರುವ ಶಿವಭಾಗ್ ಹೊಟೇಲ್ಗೆ ಕಲ್ಲು ತೂರಾಟ ನಡೆಸಿದ್ದ. ಈ ಘಟನೆಯ ಕುರಿತು ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬನಿಗೆ ಶೋಧ ಮುಂದುವರಿದಿದೆ.

ಬಂಧಿತ ಆರೋಪಿ ಅಮರ್ ಸೋನ್ಸ್ ಯುವ ಕಾಂಗ್ರೆಸ್ ಮುಖಂಡನಾಗಿದ್ದು. ದಕ್ಷಿಣ ಕನ್ನಡ ಜಿಲ್ಲಾ ಯುವಕಾಂಗ್ರೆಸ್ ನಾಯಕ ಮಿಥುನ್ ರೈ ಆಪ್ತ ಎಂದು ಹೇಳಲಾಗಿದೆ.
ಅಮರ್ ಸೋನ್ಸ್ ಬಂಧನ ದಕ್ಷಿಣ ಕನ್ನಡ ಕಾಂಗ್ರೆಸ್ ನಾಯಕರಿಗೆ ಮುಜುಗರ ತಂದಿದೆ.












Click it and Unblock the Notifications