ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ವಿವಾದ ಎಲ್ಲಿಗೆ ಬಂತು?
ಪುತ್ತೂರು, ಮಾರ್ಚ್ 22 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮದ ವಿವಾದ ಬಗೆಹರಿದಿಲ್ಲ. ಜಿಲ್ಲಾಧಿಕಾರಿ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ತೆಗೆದುಹಾಕಲು ಎರಡು ದಿನದ ಕಾಲಾವಕಾಶ ನೀಡುವುದಾಗಿ ವಿಎಚ್ಪಿ ಹೇಳಿದೆ.
'ದೇವಾಲಯದ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಹಿಂದೂಯೇತರರಾದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರನ್ನು ಕರೆಯುವುದು ಸರಿಯಲ್ಲ ಎಂಬುದನ್ನು ಧಾರ್ಮಿಕ ಇಲಾಖೆಯ ಕಾನೂನು ಸ್ಪಷ್ಟಪಡಿಸುತ್ತದೆ. ಈ ಕಾನೂನುಗಳನ್ನು ಜಿಲ್ಲಾಧಿಕಾರಿ ಹಾಗೂ ರಾಜ್ಯಸರಕಾರವೇ ಉಲ್ಲಂಘಿಸುತ್ತಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ' ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಹೇಳಿದ್ದಾರೆ. [ಮುಸ್ಲಿಂ ಡಿಸಿ ಹೆಸರು ಮತ್ತು ಪುತ್ತೂರು ದೇವಾಲಯದ ವಿವಾದ]

'ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ಪ್ರಕಾರ ಜಿಲ್ಲಾಧಿಕಾರಿಗಳು ಹಿಂದುಯೇತರರು ಆಗಿದ್ದಲ್ಲಿ ಅಪರ ಜಿಲ್ಲಾಧಿಕಾರಿಗಳು ಅಥವಾ ಇತರ ಕೆಳಗಿನ ಅಧಿಕಾರಿಗಳು ದೇವಸ್ಥಾನದ ಆಡಳಿತವನ್ನು ನಿರ್ವಹಿಸಬೇಕೆಂದು ಧಾರ್ಮಿಕ ದತ್ತಿ ಇಲಾಖೆಯ ಕಾನೂನು ಹೇಳುತ್ತದೆ' ಎಂದು ಜಗದೀಶ್ ವಿವರಣೆ ನೀಡಿದರು. [ಎಲ್ಲಾ ದೇವಾಲಯಗಳಿಗೂ ಸಿಸಿಟಿವಿ ಕಣ್ಗಾವಲು]
'ಜಿಲ್ಲಾಧಿಕಾರಿಗಳು ಈಗಾಗಲೇ ಹಲವಾರು ಹಿಂದೂಗಳ ಭಾವನೆಗಳಿಗೆ ಘಾಸಿಮಾಡಿದ್ದಾರೆ. ಕುಕ್ಕೆಸುಬ್ರಮಣ್ಯ ದೇವಸ್ಥಾನದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಹೆಸರನ್ನು ಹಾಕಲಾಗಿದೆ. ಆದರೆ, ಅದೇ ತಪ್ಪನ್ನು ಮತ್ತೊಮ್ಮೆ ಮಾಡಲು ನಾವು ಅವಕಾಶ ನೀಡುವುದಿಲ್ಲ' ಎಂದು ಅವರು ಹೇಳಿದರು. [ಹುಂಡಿ ದುಡ್ಡು ಬೇಕು, ದೇವರು ಬೇಡಾಂದ್ರೆ ಹೇಗೆ ಮುಖ್ಯಮಂತ್ರಿಗಳೇ?]
'ಆಮಂತ್ರಣ ಪತ್ರಿಕೆಯಿಂದ ಹೆಸರನ್ನು ತೆಗೆದುಹಾಕಲು 2 ದಿನದ ಕಾಲಾವಕಾಶ ನೀಡುತ್ತೇವೆ. ಆಗಲೂ ಒಪ್ಪದಿದ್ದರೆ ವಿಶ್ವಹಿಂದೂ ಪರಿಷತ್ ಹೋರಾಟ ನಡೆಸಲಿದೆ' ಎಂದು ಜಗದೀಶ್ ಅವರು ಎಚ್ಚರಿಕೆ ನೀಡಿದರು.












Click it and Unblock the Notifications